ತುಳುನಾಡಿನ ಸಂಸ್ಕೃತಿ, ಸಂಪ್ರದಾಯ, ಆರಾಧನೆಯನ್ನು ಉಳಿಸೋಣ: ವಿನಯಕುಮಾರ್ ಸೊರಕೆ
ಆಟಿಡೊಂಜಿ ದಿನ ಕಾರ್ಯಕ್ರಮ
ಉಡುಪಿ, ಆ.10: ತುಳುನಾಡಿನ ಸಂಸ್ಕೃತಿ, ಸಂಪ್ರದಾಯ, ಭಾಷೆ, ಆರಾಧನೆ, ಆಹಾರ ಪದ್ಧತಿಗಳೆಲ್ಲವೂ ಉತ್ಕೃಷ್ಟ ವಾಗಿವೆ. ಅವುಗಳನ್ನು ಮುಂದೆಯೂ ಉಳಿಸಿ, ಬೆಳೆಸಿಕೊಂಡು ಹೋಗುವ ಹಾಗೂ ಅದನ್ನು ಮುಂದಿನ ಪೀಳಿಗೆಗೆ ದಾಟಿಸುವ ಕಾರ್ಯವನ್ನು ಇಂದಿನವರು ಮಾಡಬೇಕಾಗಿದೆ ಎಂದು ಮಾಜಿ ಸಚಿವ, ಹಿರಿಯ ಕಾಂಗ್ರೆಸ್ ನಾಯಕ್ ವಿನಯಕುಮಾರ್ ಸೊರಕೆ ಹೇಳಿದ್ದಾರೆ.
ಸೋಮವಾರ ಬ್ರಹ್ಮಗಿರಿಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಭನವದಲ್ಲಿ ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ ಯಿಂದ ಆಯೋಜಿಸಲಾದ ಆಟಿಡೊಂಜಿ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ತುಳುನಾಡಿನಲ್ಲಿ ಬಾಳಿ ಬದುಕಿದ ಹಿರಿಯರು ಪ್ರಕೃತಿಯಲ್ಲಿ ದೊರೆಯುವ ಮರಗಿಡ, ಬಳ್ಳಿ, ಗೆಡ್ಡೆ ಮುಂತಾದವು ಗಳನ್ನು ಆಹಾರ, ಔಷಧಿಯಾಗಿ ಬಳಸಿಕೊಂಡು ಆಟಿ ತಿಂಗಳ ಕಷ್ಟದ ದಿನಗಳಲ್ಲಿ ರೋಗರುಜಿನ ಬಾಧಿಸದಂತೆ ಬದುಕಿದ್ದರು. ಇಲ್ಲಿನ ಎಲ್ಲಾ ಹಬ್ಬಗಳಿಗೆ ಕೃಷಿ ಮೂಲವಾಗಿದ್ದು, ಅದಕ್ಕೆ ಸಂಬಂಧಿಸಿದಂತೆ ತುಳುನಾಡಿನಲ್ಲಿ ಆಟಿ ಆಚರಣೆ ಬೆಳೆದು ಬಂದಿದೆ ಎಂದು ಅವರು ಹೇಳಿದರು.
ಆಟಿ ತಿಂಗಳು ತುಳುವರಲ್ಲಿ ಬಹಳ ಸಂಕಷ್ಟದ ಸಮಯವಾಗಿತ್ತು. ಎಡೆಬಿಡದೆ ಸುರಿಯುವ ಮಳೆ, ಬೇಸಾಯ ಕೆಲಸ ಆಯಾಸ, ರೋಗರುಜಿನಗಳ ಪ್ರಸಾರ, ಆಹಾರದ ಕೊರತೆ ಬಹಳವಿತ್ತು. ಈ ಸಂದರ್ಭ ಹಿರಿಯರು ಪ್ರಕೃತಿದತ್ತವಾಗಿ ಸಿಗುತ್ತಿದ್ದ ಗಡ್ಡೆಗೆಣಸು, ಹಲಸು, ಸೊಪ್ಪು, ತರಕಾರಿಗಳನ್ನು ತಿಂದು ತಮ್ಮ ಆರೋಗ್ಯ ಕಾಪಾಡಿಕೊಂಡಿದ್ದರು. ಇಂದಿನ ಯುವ ಸಮುದಾಯಕ್ಕೆ ಇದರ ಪರಿಚಯವನ್ನು ಮಾಡುವ ಅಗತ್ಯವಿದೆ ಎಂದರು.
ಕಾರ್ಯಕ್ರಮದಲ್ಲಿ ಹಿರಿಯಡ್ಕ ಕಾಲೇಜಿನ ಉಪನ್ಯಾಸಕಿ ಶಾಲಿನಿ ಆಟಿ ಆಚರಣೆ ಕುರಿತು ವಿಶೇಷ ಉಪನ್ಯಾಸ ನೀಡಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಹೆಬ್ಬಾರ್, ನಾಯಕರಾದ ಕಿಶನ್ ಹೆಗ್ಡೆ ಕೊಳ್ಕೆಬೈಲು, ನಮಿತಾ ರಾವ್, ಹರೀಶ್ ಕಿಣಿ, ಸರಸು ಡಿ ಬಂಗೇರಾ, ನಿರೀಕ್ಷಾ ಮೆಂಡನ್ ಮತ್ತು ಇತರರು ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಬಳಿಕ ತುಳುನಾಡಿನ ವಿವಿಧ ಬಗೆಯ ಆಟಿ ಖಾದ್ಯಗಳನ್ನು ಸಭಿಕರಿಗೆ ಉಣ ಬಡಿಸಲಾಯಿತು.