ಬೈಂದೂರು: ಗಾಳಿ-ಮಳೆಗೆ ವಾಸ್ತವ್ಯದ ಮನೆ ಸಂಪೂರ್ಣ ಹಾನಿ

Update: 2026-08-13 19:27 IST

ಉಡುಪಿ, ಆ.13: ಉಡುಪಿ ಜಿಲ್ಲೆಯಲ್ಲಿ ಆಗಾಗ ಸುರಿಯುವ ಮಳೆಗೆ ಬೈಂದೂರು ತಾಲೂಕು ನಾವುಂದ ಗ್ರಾಮದಲ್ಲಿ ವಾಸ್ತವ್ಯದ ಮನೆಯೊಂದು ಸಂಪೂರ್ಣ ಹಾನಿಗೊಂಡಿದೆ ಎಂದು ತಿಳಿದುಬಂದಿದೆ.

ನಾವುಂದದ ಸದಾಶಿವ ಗಾಣಿಗ ಎಂಬವರ ವಾಸದ ಮನೆ ಗಾಳಿ-ಮಳೆಗೆ ಸಂಪೂರ್ಣ ಹಾನಿಗೊಂಡಿದ್ದು, ಏಳು ಲಕ್ಷ ರೂ.ಗಳಿಗೂ ಅಧಿಕ ನಷ್ಟ ಉಂಟಾಗಿರುವುದಾಗಿ ಅಂದಾಜಿಸಲಾಗಿದೆ.

ಜಿಲ್ಲೆಯಲ್ಲಿ 33.9ಮಿ.ಮೀ.ಮಳೆ: ಉಡುಪಿ ಜಿಲ್ಲೆಯಲ್ಲಿ ಇಂದು ಸರಾಸರಿ 33.9 ಮಿ.ಮೀ. ಮಳೆಯಾಗಿದೆ. ಹೆಬ್ರಿಯಲ್ಲಿ 41.4ಮಿ.ಮೀ, ಕುಂದಾಪುರದಲ್ಲಿ 38,6, ಬೈಂದೂರಿನಲ್ಲಿ 36.6, ಕಾರ್ಕಳದಲ್ಲಿ 31.7, ಉಡುಪಿಯಲ್ಲಿ 32.0, ಬ್ರಹ್ಮಾವರದಲ್ಲಿ 23.8 ಹಾಗೂ ಕಾಪುವಿನಲ್ಲಿ 20.3ಮಿ.ಮೀ. ಮಳೆಯಾಗಿದೆ.

ಉಡುಪಿ ಜಿಲ್ಲೆಯಲ್ಲಿ ದಿನದ ಅತ್ಯಧಿಕ ಮಳೆ ಬಿದ್ದಿರುವುದು ಕುಂದಾಪುರದ ಹೆಂಗವಳ್ಳಿಯಲ್ಲಿ. ಇಲ್ಲಿ 62.5ಮಿ.ಮೀ. ಮಳೆಯಾಗಿದೆ. ರಾಜ್ಯದಲ್ಲೇ ಅತ್ಯಧಿಕ ಮಳೆ ಬಿದ್ದಿರುವುದು ಉತ್ತರ ಕನ್ನಡ ಜಿಲ್ಲೆ ಸಿದ್ಧಾಪುರ ತಾಲೂಕಿನ ನಿಲ್ಕುಂಡದಲಿಲ ಇಲ್ಲಿ 88.5ಮಿ.ಮೀ. ಮಳೆ ಸುರಿದಿದೆ. ದಕ್ಷಿಣ ಕನ್ನಡದ ಪುತ್ತೂರು ತಾಲೂಕಿನ ಶಿರ್ತಾಡಿಯಲ್ಲಿ 61ಮಿ.ಮೀ. ಮಳೆ ಬಿದ್ದಿದೆ.

ಅಧಿಕ ಮಳೆ: ಆಗಸ್ಟ್ ಒಂದರಿಂದ ಉಡುಪಿ ಜಿಲ್ಲೆಯಲ್ಲಿ ಮಳೆ ಚೆನ್ನಾಗಿ ಬಂದಿರುವುದರಿಂದ ಆ.1ರಿಂದ 13ರವರೆಗೆ ಬಿದ್ದಿರುವ ಮಳೆಯಿಂದ ಜಿಲ್ಲೆಯಲ್ಲಿ ಶೇ.7ರಷ್ಟು ಅಧಿಕ ಮಳೆ ದಾಖಲಾಗಿದೆ. ಈ ಅವಧಿಯಲ್ಲಿ ಜಿಲ್ಲೆಯ ವಾಡಿಕೆ ಮಳೆ 533ಮಿ.ಮೀ. ಆಗಿದ್ದರೆ ಈ ಬಾರಿ ಕಳೆದ 13 ದಿನಗಳಲ್ಲಿ 568ಮಿ.ಮೀ. ಮಳೆ ಬಿದ್ದಿದೆ ಎಂದು ರಾಜ್ಯದ ವಿಕೋಪ ನಿಯಂತ್ರಣ ಕೇಂದ್ರದ ಮಾಹಿತಿ ತಿಳಿಸಿದೆ.

ಉಡುಪಿ ಜಿಲ್ಲೆಯಲ್ಲಿ ಜೂನ್ ತಿಂಗಳಲ್ಲಿ ಶೇ.50ರಷ್ಟು ಮಳೆ ಕೊರತೆ ಕಾಣಿಸಿಕೊಂಡಿದ್ದರೆ, ಜುಲೈ ತಿಂಗಳಲ್ಲಿ ಶೇ.27ರಷ್ಟು ಮಳೆ ಕೊರತೆ ಇತ್ತು. ಮುಂಗಾರು ಮಳೆಗಾಲದ ಅವಧಿಯಲ್ಲಿ (ಜೂ.1ರಿಂದ ಆಗಸ್ಟ್‌13ರವರೆಗೆ) ಉಡುಪಿ ಜಿಲ್ಲೆಯಲ್ಲಿ ಶೇ.29ರಷ್ಟು ಮಳೆ ಕೊರತೆ ಉಳಿದುಕೊಂಡಿದೆ. ಈ ಅವಧಿಯಲ್ಲಿ ಜಿಲ್ಲೆಯ ವಾಡಿಕೆ ಮಳೆ 3087ಮಿ.ಮೀ. ಆಗಿದ್ದರೆ, ಈ ಬಾರಿ ಬಿದ್ದಿರುವುದು 2184 ಮಿ.ಮೀ. ಮಳೆ ಮಾತ್ರ ಎಂದು ಮಾಹಿತಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News