ಉಡುಪಿ: ಮುಂದುವರಿದ ಮಳೆ ಹಾನಿ; 11 ಮನೆ, 6 ಕಡೆ ಬೆಳೆಹಾನಿ
ಚಲಿಸುತಿದ್ದ ಬೈಕ್ ಮೇಲೆ ಗೆಲ್ಲು ಬಿದ್ದು ಸವಾರ ಗಂಭೀರ
ಉಡುಪಿ, ಜು.8: ಮಳೆಯ ಪ್ರಮಾಣ ಕಡಿಮೆಯಾದರೂ, ಆಗಾಗ ಜೋರಾಗಿ ಬೀಸುತ್ತಿರುವ ಗಾಳಿಯಿಂದ ಜಿಲ್ಲೆಯಲ್ಲಿ ಭಾರೀ ಹಾನಿ ಸಂಭವಿಸುತ್ತಿದೆ. ಇಂದು ಸಹ ಗಾಳಿ-ಮಳೆಯಿಂದ ಜಿಲ್ಲೆಯ ವಿವಿದೆಡೆಗಳ 11ಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿದ್ದು, ಐದು ಕಡೆಗಳಲ್ಲಿ ತೋಟಗಾರಿಕಾ ಬೆಳೆಗಳಿಗೆ ಅಪಾರ ಹಾನಿ ಸಂಭವಿಸಿದೆ. ಅಲ್ಲದೇ 3-4 ಜಾನುವಾರು ಕೊಟ್ಟಿಗೆಗಳೂ ಹಾನಿಗೊಳಗಾದ ವರದಿ ಬಂದಿವೆ.
ಬುಧವಾರ ಬೆಳಗ್ಗೆ ಬೀಸಿದ ಭಾರೀ ಗಾಳಿಯ ವೇಳೆ ಕೆಲಸಕ್ಕೆಂದು ಬೈಕ್ನಲ್ಲಿ ತೆರಳುತಿದ್ದ ಸವಾರರ ಮೇಲೆ ಮರದ ಗೆಲ್ಲೊಂದು ತುಂಡಾಗಿ ಬಿದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡಿರುವ ಸವಾರರನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಿರುವ ಘಟನೆಯೂ ಕುಂದಾಪುರ ತಾಲೂಕಿನ ಕೆಳುಂಜೆ ಗ್ರಾಮದಿಂದ ವರದಿಯಾಗಿದೆ.
ಸುರೇಂದ್ರ ನಾಯ್ಕ್ (40) ಎಂಬವರು ಎಂದಿನಂತೆ ಬೆಳಗ್ಗೆ ಕೆಲಸಕ್ಕೆಂದು ತಮ್ಮ ಬೈಕ್ನಲ್ಲಿ ಹೋಗುತಿದ್ದಾಗ, ಕುಳಂಜೆ ಗ್ರಾಮದ ಮುಂಡುಕೋಲು ದುರ್ಗಾಪರಮೇಶ್ವರಿ ದೇವಸ್ಥಾನದ ಸಮೀಪದಲ್ಲಿ ಬೀಸಿದ ಗಾಳಿಗೆ ಮರದ ಕೊಂಬೆ ತುಂಡಾಗಿ ಸುರೇಂದ್ರ ನಾಯ್ಕರ ಭುಜದ ಮೇಲೆ ಬಿದ್ದಿದ್ದು, ಅವರ ಬಲಗೈಯ ಮೂಳೆ ಮುರಿದಿರುವುದಾಗಿ ವರದಿಯಾಗಿದೆ.
ಸುರೇಂದ್ರ ನಾಯ್ಕ್ ಅವರನ್ನು ಕೂಡಲೇ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕುಂದಾಪುರ ತಹಶೀಲ್ದಾರರು ತಮ್ಮ ಪ್ರಾಥಮಿಕ ವರದಿಯಲ್ಲಿ ತಿಳಿಸಿದ್ದಾರೆ.
ಕುಂದಾಪುರ ಹಾಗೂ ಹೆಬ್ರಿ ತಾಲೂಕಿನಲ್ಲಿ ಬೀಸಿದ ಬಿರುಗಾಳಿಗೆ ಆರು ಮಂದಿಯ ತೋಟಗಾರಿಕಾ ಬೆಳೆಗಳಿಗೆ ಸುಮಾರು ಒಂದೂವರೆ ಲಕ್ಷ ರೂ.ಗಳಿಗೂ ಅಧಿಕ ನಷ್ಟವಾಗಿರುವುದಾಗಿ ತಿಳಿದುಬಂದಿದೆ. ಹೆಚ್ಚಿನವರ ತೋಟದ ಅಡಿಕೆ ಮರಗಳು ಧರಾಶಾಹಿಯಾಗಿರುವುದಾಗಿ ಹೇಳಲಾಗಿದೆ.
ಉಳ್ಳೂರು 74 ಗ್ರಾಮದಲ್ಲಿ ಬಿರುಗಾಳಿ ದೊಡ್ಡ ಪ್ರಮಾಣದಲ್ಲಿ ಹಾನಿಯನ್ನುಂಟು ಮಾಡಿದೆ. ಇಲ್ಲಿನ ಹಳ್ನೀರುಕೊಡ್ಲು ನಿವಾಸಿ ರತ್ನಾಕರ ಬಿನ್ ಕುಷ್ಟ ಕುಲಾಲ ಇವರ ಅಡಿಕೆ ತೋಟದ 25ಕ್ಕೂ ಅಧಿಕ ಅಡಿಕೆ ಮರಗಳು ಗಾಳಿಗೆ ಉರುಳಿ ಬಿದ್ದಿವೆ. 23 ಸಾವಿರ ರೂ. ನಷ್ಟವಾಗಿರುವುದಾಗಿ ಪ್ರಾಥಮಿಕ ಅಂದಾಜು ತಿಳಿಸಿದೆ.
ಇನ್ನು ಅದೇ ಗ್ರಾಮದ ಶ್ರೀದೇವಿ ಕೋಂ ಜಯರಾಮ ಕುಲಾಲ ಇವರಿಗೆ ಸೇರಿದ 15 ಅಡಿಕೆ ಮರಗಳು ಹಾನಿ ಗೊಂಡಿದ್ದು 15ಸಾವಿರ ನಷ್ಟದ ಅಂದಾಜು ಮಾಡಿದ್ದರೆ, ಯಶೋಧ ಕೋಂ ನರಸಿಂಹ ಇವರ ತೋಟದ 20ಕ್ಕೂ ಅಧಿಕ ಅಡಿಕೆ ಮರಗಳು ನೆಲವನ್ನಪ್ಪಿವೆ. ಸುಮಾರು 20ಸಾವಿರದಷ್ಟು ನಷ್ಟದ ಅಂದಾಜು ಮಾಡಲಾಗಿದೆ.
ಕುಂದಾಪುರ ತಾಲೂಕು ಅಜ್ರಿ ಗ್ರಾಮದ ಸಂಜೀವ ಶೆಟ್ಟಿ ಇವರ ತೋಟಕ್ಕೂ ಭಾರೀ ಹಾನಿ ಸಂಭವಿಸಿದ್ದು, 30 ಸಾವಿರ ರೂ.ನಷ್ಟವಾಗಿದ್ದರೆ, ಹರ್ಕೂರು ಗ್ರಾಮದ ಕೆ.ಎನ್.ಬಾಲಕೃಷ್ಣ ಶೆಟ್ಟಿ ಇವರ ತೋಟಗಾರಿಕಾ ಬೆಳೆಗಳಿಗೂ ಅಪಾರ ನಷ್ಟ ಉಂಟಾಗಿದೆ. ಹೆಬ್ರಿ ತಾಲೂಕು ನಾಡ್ಪಾಲು ಗ್ರಾಮದ ಚಂದ್ರಶೇಖರ ಹೆಗ್ಡೆ ಅವರ ತೋಟಕ್ಕೆ 20ಸಾವಿರ ರೂ.ಗಳ ನಷ್ಟವಾಗಿರು ವುದಾಗಿ ವಿಎ ವರದಿ ಸಲ್ಲಿಸಿದ್ದಾರೆ.
ಬೈಂದೂರು ಗ್ರಾಮದ ಹೇರಂಜಾಲಿನ ಸುಜಾತಾ ಹಾಗೂ ಕೆರ್ಗಾಲು ಗ್ರಾಮದ ಮಹಾದೇವಿ ಎಂಬವರ ಮನೆಯ ಜಾನುವಾರು ಕೊಟ್ಟಿಗೆಗಳು ಗಾಳಿ-ಮಳೆಗೆ ಭಾಗಶ: ಹಾನಿಗೊಳಗಾಗಿವೆ. ಇದರಿಂದ ಒಟ್ಟು ಸುಮಾರು ಒಂದು ಲಕ್ಷ ರೂ.ನಷ್ಟು ನಷ್ಟವಾಗಿರುವ ವರದಿ ಬಂದಿದೆ.
11 ಮನೆಗಳಿಗೆ ಹಾನಿ 5 ಲಕ್ಷ ನಷ್ಟ: ಇದಲ್ಲದೇ ಜಿಲ್ಲೆಯಲ್ಲಿ ಸುಮಾರು 11 ಮನೆಗಳಿಗೆ ಗಾಳಿ-ಮಳೆಯಿಂದ ಹಾನಿ ಯಾದ ವರದಿ ಬಂದಿದ್ದು, ಇದರಿಂದ ಒಟ್ಟಾರೆಯಾಗಿ ಐದು ಲಕ್ಷ ರೂ.ಗಳಿಗೂ ಅಧಿಕ ನಷ್ಟದ ಅಂದಾಜು ಮಾಡಲಾ ಗಿದೆ ಎಂದು ವಿಕೋಪ ನಿಯಂತ್ರಣ ಕಚೇರಿ ವರದಿ ತಿಳಿಸಿದೆ.
ಬ್ರಹ್ಮಾವರ ತಾಲೂಕು ಬಿಲ್ಲಾಡಿಯ ಅಂತಯ್ಯ ಶೆಟ್ಟಿ ಎಂಬವರ ಮನೆ ಮೇಲೆ ಮರ ಬಿದ್ದು 1.50 ಲಕ್ಷರೂ.ಗಳಿಗೂ ಅಧಿಕ ನಷ್ಟ ಸಂಭವಿಸಿದೆ. ಅದೇ ರೀತಿ ಕಾಪು ತಾಲೂಕು ನಂದಿಕೂರು ಗ್ರಾಮದ ಅಮಿತಾ ಅವರ ಮನೆ ಮೇಲೆ ಮರಬಿದ್ದು ಒಂದ ಲಕ್ಷ ರೂ.ಗಳಿಗೂ ಮೀರಿದ ನಷ್ಟ ಸಂಭವಿಸಿದೆ ಎಂದು ತಿಳಿಸಿದ್ದಾರೆ.
ಉಳಿದಂತೆ ನಂದಿಕೂರು ಗ್ರಾಮದ ರತ್ನ ಅವರ ಮನೆಗೆ 60 ಸಾವಿರ, ಸುಶೀಲಾ ಎಂಬವರ ಮನೆಗೆ 50ಸಾವಿರ ರೂ.ಗಳಿಗೂ ಅಧಿಕ ನಷ್ಟವಾಗಿದೆ. ಇನ್ನು ಕುಂದಾಪುರ ತಾಲೂಕು ಹಾಲಿಡಿಯ ಗುಲಾಬಿ, ಅಜ್ರಿಯ ಶಿವರಾಮ ಶೆಟ್ಟಿ, ಕಾಪು ಬಡಾ ಗ್ರಾಮದ ಸಂತೋಷ್ ಶೆಟ್ಟಿ, ಬೈಂದೂರು ತಾಲೂಕು ಉಪ್ಪುಂದ ಗ್ರಾಮದ ಗೀತಾ ಪ್ರಭಾಕರ ಶೆಟ್ಟಿ, ಶೇಖರ ಖಾರ್ವಿ, ಕಿರಿಮಂಜೇಶ್ವರ ಗ್ರಾಮದ ಸುಶೀಲಾ ಸುಬ್ಬಯ್ಯ ದೇವಾಡಿಗರ ಮನೆ ಮೇಲೆ ಮರ ಬಿದ್ದು ನಷ್ಟ ಸಂಭವಿಸಿದೆ.
ದಿನದಲ್ಲಿ 52.4ಮಿ.ಮೀ. ಮಳೆ: ಬುಧವಾರ ಬೆಳಗ್ಗೆ ಕೊನೆಗೊಂಡಂತೆ ಹಿಂದಿನ 24 ಗಂಟೆಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಸರಾಸರಿ 52.4ಮಿ.ಮೀ. ಮಳೆಯಾಗಿದೆ. ಹೆಬ್ರಿಯಲ್ಲಿ 72.7ಮಿ.ಮೀ., ಕುಂದಾಪುರದಲ್ಲಿ 67.7, ಬೈಂದೂರಿನಲ್ಲಿ 50.7, ಕಾರ್ಕಳದಲ್ಲಿ 49.6, ಉಡುಪಿಯಲ್ಲಿ 33.5, ಬ್ರಹ್ಮಾವರದಲ್ಲಿ 31.4 ಹಾಗೂ ಕಾಪುವಿನಲ್ಲಿ 27.7ಮಿ.ಮೀ. ಮಳೆಯಾದ ವರದಿ ಬಂದಿದೆ.