ಕುಂದಾಪುರ: ಅಶ್ವಥ ಮರದ ಕೊಂಬೆ ಮುರಿದು ಬಿದ್ದು 8 ವಿದ್ಯುತ್ ಕಂಬಗಳು ಧರಾಶಾಹಿ
ಕುಂದಾಪುರ, ಜು.8: ಇಲ್ಲಿನ ಪುರಸಭೆ ವ್ಯಾಪ್ತಿಯ ಮೀನು ಮಾರುಕಟ್ಟೆ ಸಮೀಪ ಬೃಹತ್ ಅಶ್ವಥ ಮರದ ಕೊಂಬೆ ಗಳು ಭಾರೀ ಗಾಳಿ- ಮಳೆಗೆ ರಸ್ತೆಗೆ ಮುರಿದು ಬಿದ್ದ ಪರಿಣಾಮ 8 ವಿದ್ಯುತ್ ಕಂಬಗಳಿಗೆ ಹಾನಿಯಾದ ಘಟನೆ ಮಂಗಳವಾರ ರಾತ್ರಿ ಸಂಭವಿಸಿದೆ.
ಮೀನು ಮಾರುಕಟ್ಟೆ, ರಾಮ ಮಂದಿರ ಸುತ್ತಮುತ್ತ, ಹೊಸ ಬಸ್ ನಿಲ್ದಾಣ ಪರಿಸರ, ಖಾರ್ವಿಕೇರಿ ಭಾಗಕ್ಕೆ ಸಂಪರ್ಕ ಕಲ್ಪಿಸಿರುವ 11 ಕೆ.ವಿ. ವಿದ್ಯುತ್ ಮಾರ್ಗದ 8 ಕಂಬಗಳು ಮುರಿದು ಬಿದ್ದಿವೆ. ಕೆಲವೆಡೆಯಂತೂ ಕಂಬಗಳು ಬುಡ ದಿಂದಲೇ ತುಂಡಾಗಿ ಬಿದ್ದಿವೆ. ಬುಧವಾರ ಮೆಸ್ಕಾಂ ಸಿಬಂದಿ ದಿನವಿಡೀ ಕಾರ್ಯಾಚರಣೆ ನಡೆಸಿ, ವಿದ್ಯುತ್ ಕಂಬಗಳ ಮರು ಜೋಡಣೆಗೆ ಶ್ರಮಿಸಿದರು.
ಇದರಿಂದಾಗಿ ಕುಂದಾಪುರ ನಗರದಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಹೆದ್ದಾರಿಯಿಂದ ಮೀನು ಮಾರುಕಟ್ಟೆ ಮೂಲಕ ಪುರಸಭೆ ವ್ಯಾಪ್ತಿಯ ಮುಖ್ಯ ರಸ್ತೆಗೆ ಈ ಮರ ಬಿದ್ದ ಪರಿಣಾಮ ಮಂಗಳವಾರ ರಾತ್ರಿಯಿಂದ ಬುಧವಾರವೂ ಸಹ ಈ ಮಾರ್ಗದಲ್ಲಿ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು.
ಕಳೆದ ಕೆಲ ದಿನಗಳಿಂದ ಕುಂದಾಪುರ, ಬೈಂದೂರು ತಾಲೂಕಿನಾದ್ಯಂತ ಉತ್ತಮ ಮಳೆಯಾಗಿದ್ದು, ಆದರೆ ಬುಧವಾರ ಮಳೆ ತುಸು ಇಳಿಮುಖ ಗೊಂಡಿದೆ. ಗಾಳಿಯಬ್ಬರವೂ ಕಡಿಮೆಯಾದಂತಿದೆ.