×
Ad

ಉಡುಪಿ| ಸೆ.13ರಂದು ಸುನ್ನೀ ಕೋ-ಆರ್ಡಿನೇಷನ್ ಜಿಲ್ಲಾ ಸಮಿತಿಯಿಂದ ಬೃಹತ್ ಮೀಲಾದ್ ಜಾಥಾ

Update: 2025-09-10 21:20 IST

ಉಡುಪಿ, ಸೆ.10: ಲೋಕ ಪ್ರವಾದಿ ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ 1500ನೇ ಜನ್ಮ ದಿನಾಚರಣೆಯ ಪ್ರಯುಕ್ತ ಉಡುಪಿ ಜಿಲ್ಲೆಯ 10 ಸುನ್ನೀ ಸಂಘಟನೆಗಳ ಒಕ್ಕೂಟವಾದ ಜಿಲ್ಲಾ ಸುನ್ನೀ ಕೋ-ಆರ್ಡಿನೇಷನ್ ಸಮಿತಿ ವತಿಯಿಂದ ಬೃಹತ್ ಮೀಲಾದ್ ಜಾಥಾ ಸೆ.13ರ ಶನಿವಾರ ಉಡುಪಿ ನಗರದಲ್ಲಿ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷ ಕೆ.ಎ.ಅಬ್ದುರ‌್ರಹಮಾನ್ ರಝ್ವಿ ಕಲ್ಕಟ್ಟ ತಿಳಿಸಿದ್ದಾರೆ.

ಉಡುಪಿಯ ಪ್ರೆಸ್ ಕ್ಲಬ್‌ನಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮದ ವಿವರಗಳನ್ನು ನೀಡುತ್ತಾ ಮಾತನಾಡಿದ ಅವರು, ಸೆ.13ರಂದು ಅಪರಾಹ್ನ 2:30ಕ್ಕೆ ಉಡುಪಿ ಅಂಜುಮನ್ ಮಸೀದಿಯಲ್ಲಿ ಮೌಲಿದ್ ಮಜ್ಲಿಸ್ ಪಾರಾಯಣ ನಡೆಯಲಿದ್ದು, ಬಳಿಕ 3:30ಕ್ಕೆ ಬೃಹತ್ ಮೀಲಾದ್ ಕಾಲ್ನಡಿಗೆ ಜಾಥಾ ಅಂಜುಮನ್‌ನಿಂದ ಹೊರಟು, ಸರ್ವಿಸ್ ಬಸ್ ನಿಲ್ದಾಣ, ಕೆ.ಎಂ.ಮಾರ್ಗ, ಕೋರ್ಟ್ ರಸ್ತೆ ಮೂಲಕ ಸಾಗಿ ಅಜ್ಜರಕಾಡಿನ ಹುತಾತ್ಮ ಭವನದ ಬಳಿ ಕೊನೆಗೊಳ್ಳಲಿದೆ ಎಂದರು.

ಆಧ್ಯಾತ್ಮಿಕ ನಾಯಕ ಅಸ್ಸಯ್ಯಿದ್ ಜಾಫರ್ ಅಸ್ಸಖಾಫ್ ತಂಳ್, ಜಿಲ್ಲಾ ಉಲಮಾ ಒಕ್ಕೂಟದ ಅಧ್ಯಕ್ಷ ಬಿ.ಎ. ಇಸ್ಮಾಯಿಲ್ ಮದನಿ ಮಾವಿನಕಟ್ಟೆ, ಸಹಾಯಕ ಕಾಝಿ ಅಬ್ದುರ‌್ರಹ್ಮಾನ್ ಮದನಿ ಮೂಳೂರು ಹಾಗೂ ಹಫೀಝೇ ಮಿಲ್ಲತ್ ಅಕಾಡೆಮಿ ಜಿಲ್ಲಾಧ್ಯಕ್ಷ ಮೌಲಾನಾ ಶೌಕತ್ ರಝ್ವಿ ಉಡುಪಿ ಮಾಲಿದ್ ಮಜ್ಲಿಸ್‌ಗೆ ನೇತೃತ್ವ ನೀಡುವರು ಎಂದರು.

ತಮ್ಮ ನೇತೃತ್ವದಲ್ಲಿ ನಡೆಯುವ ಮೀಲಾದ್ ಜಾಥಾದ ಧ್ವಜವನ್ನು ಸ್ವಾಗತ ಸಮಿತಿಯ ಅಧ್ಯಕ್ಷ ಅಸ್ಸಯ್ಯಿದ್ ಇಬ್ರಾಹಿಂ ಜುನೈದ್ ಅರ್ರಿಫಾಯಿ ತಂಳ್ ರಂಗಿನಕೆರೆ ಅವರು ಉಡುಪಿ ಜಿಲ್ಲಾ ಸುನ್ನೀ ಸಂಘಟನೆಗಳ ಜಿಲ್ಲಾಧ್ಯಕ್ಷರು ಗಳಿಗೆ ಹಸ್ತಾಂತರಿಸುವರು ಎಂದರು.

ಜಾಥಾದ ಕೊನೆಯಲ್ಲಿ ಅಜ್ಜರಕಾಡು ಹುತಾತ್ಮ ಚೌಕದಲ್ಲಿ ನಡೆಯುವ ಸಮಾರೋಪ ಕಾರ್ಯಕ್ರಮದಲ್ಲಿ ಮೌಲಾನಾ ಮುಫ್ತಿ ಬದ್ರುದ್ದೀನ್ ಮಿಸ್ಬಾಹೀ ಕಾರ್ಕಳ, ಅಹ್ಮದ್ ಶರೀಫ್ ಸಅದಿ ಅಲ್ ಕಾಮಿಲ್ ಕಿಲ್ಲೂರು ಸಂದೇಶ ಭಾಷಣ ಮಾಡಲಿದ್ದಾರೆ. ಜಾಥಾ ಹಾಗೂ ಕಾರ್ಯಕ್ರಮದಲ್ಲಿ ಸುಮಾರು 5000ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಕೆ.ಎ. ಅಬ್ದುರ‌್ರಹ್ಮಾನ್ ವಿವರಿಸಿದರು.

ಜಾಥಾದ್ಲಿ ಅತ್ಯಾಕರ್ಷಕ ದಫ್, ಸ್ಕೌಟ್‌ಗಳೊಂದಿಗೆ ಜಿಲ್ಲೆ ಉನ್ನತ ಉಲಮಾ, ಸಾದಾತುಗಳು ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ ಎಂದವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮೀಲಾದ್ ಸ್ವಾಗತ ಸಮಿತಿಯ ಅಧ್ಯಕ್ಷ ಅಸ್ಸಯ್ಯಿದ್ ಇಬ್ರಾಹಿಂ ಜುನೈದ್ ಅರ್ರಿಫಾಯಿ, ಉಡುಪಿ ಜಿಲ್ಲೆ ಹಫೀಝೆ ಮಿಲ್ಲಿತ್ ಅಕಾಡೆಮಿ ಅಧ್ಯಕ್ಷ ಮೌಲಾನಾ ಶೌಕತ್ ರಝ್ವಿ ಶಾಂತಿನಗರ, ಮೀಲಾದ್ ಸ್ವಾಗತ ಸಮಿತಿಯ ಸಂಚಾಲಕರಾದ ಅಬ್ದುಲ್ ವಹೀದ್ ಅಂಜುಮನ್ ಹಾಗೂ ಉಮರ್ ಫಾರೂಖ್ ಆರ್.ಕೆ. ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News