ಉಡುಪಿ: ಸೆ.14ರಂದು ಕೇರಳ ಸಮಾಜಂನಿಂದ ಓಣಂ ಸಂಭ್ರಮಾಚರಣೆ
ಉಡುಪಿ, ಸೆ.11: ಉಡುಪಿಯಲ್ಲಿ ನೆಲೆಸಿರುವ ಮಲಯಾಳಿಗಳ ನೂತನ ಸಂಘಟನೆಯಾಗಿರುವ ಕೇರಳ ಸಮಾಜಂ ಉಡುಪಿ ವತಿಯಿಂದ ಮೊದಲ ಓಣಂ ಸಂಭ್ರಮಾಚರಣೆ ಸೆ.14ರ ರವಿವಾರ ಉಡುಪಿಯ ಅಮ್ಮಣ್ಣಿ ರಾಮಣ್ಣ ಸಭಾಭವನದಲ್ಲಿ ಅದ್ದೂರಿಯಾಗಿ ನಡೆಯಲಿದೆ ಎಂದು ಸಂಘಟನೆಯ ಅಧ್ಯಕ್ಷ ಅರುಣ್ಕುಮಾರ್ ತಿಳಿಸಿದ್ದಾರೆ.
ಉಡುಪಿ ಪ್ರೆಸ್ ಕ್ಲಬ್ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮವನ್ನು ಗೋವಾದ ರಾಜ್ಯಪಾಲರಾದ ಶ್ರೀಧರನ್ ಪಿಳ್ಳೈ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ಯಶ್ಪಾಲ್ ಸುವರ್ಣ, ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ, ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್, ಮಾಹೆಯ ಪ್ರೊ.ಡಾ. ಸಾಬೂ ಕೆ.ಎಂ., ಸುವರ್ಣ ಕರ್ನಾಟಕ ಕೇರಳ ಸಮಾಜಂ ಅಧ್ಯಕ್ಷ ರಾಜನ್ ಜಾಕೋಬ್, ಖ್ಯಾತ ಸಿನಿಮಾ ತಾರೆಯರಾದ ಹರೀಶ್ ಕನರನ್, ವಿವೇಕ್ ಗೋಪನ್, ಸೀಮಾ ಜಿ ನಾಯರ್ ಭಾಗವಹಿಸಲಿದ್ದಾರೆ ಎಂದರು.
ಓಣಂ ಸಂಭ್ರಮಾಚರಣೆಯ ಉದ್ಘಾಟನೆ ಬೆಳಗ್ಗೆ 10:30ಕ್ಕೆ ನಡೆಯಲಿದೆ. ಬೆಳಗ್ಗೆ 8:30ಕ್ಕೆ ಪೂಕಳಂ ಸ್ಪರ್ಧೆ ನಡೆಯಲಿದೆ. ನಂತರ ಕೇರಳ ಸಮಾಜಂ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಅಪರಾಹ್ನ ಓಣಂ ಹಬ್ಬದ ಪ್ರಮುಖ ಭಾಗವಾಗಿರುವ ‘ಒಣಂ ಸಧ್ಯ’ ಓಣಂ ವಿಶೇಷ ಭೋಜನ ಕೇರಳದ ಕಲ್ಲಿಕೋಟೆಯ ವಿನೋದ್ ಕುಮಾರ್ ತಂಡದಿಂದ ನಡೆಯಲಿದೆ ಎಂದರು.
ಅಪರಾಹ್ನ 2:30ರ ಬಳಿಕ ಕೇರಳದ ಸಿನಿಮಾ ಕಲಾವಿದರ ತಂಡದಿಂದ ವೈವಿಧ್ಯಮಯ ಸಂಗೀತ, ನೃತ್ಯ, ಮಿಮಿಕ್ರಿ, ಹಾಸ್ಯಭರಿತ ಮನೋರಂಜನಾ ಕಾರ್ಯಕ್ರಮಗಳು ನಡೆಯಲಿವೆ. ಸಂಜೆ ಜಯಕೇರಳ ಕಳರಿ ಸಂಘಮ್ ತಂಡದಿಂದ ಕಳರಿ ಪ್ರದರ್ಶನ ನಡೆಯಲಿದೆ. ಸೆ.14 ಕೃಷ್ಣ ಜನ್ಮಾಷ್ಟಮಿ ಆಗಿರುವುದರಿಂದ ಹುಲಿ ವೇಷ ತಂಡದಿಂದ ಹುಲಿ ವೇಷ ಕುಣಿತ, ಕೇರಳ ಶೈಲಿಯ ಚಂಡೆ ಮೇಳ, ಓಣಂ ಹಬ್ಬಕ್ಕೆ ಬರುವ ಸಾಂಪ್ರದಾಯಿಕ ಮಾವೇಲಿ ವಿಶೇಷ ಆಕರ್ಷಣೆ ಯಾಗಲಿದೆ ಎಂದು ಅರುಣ್ಕುಮಾರ್ ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಕೇರಳ ಸಮಾಜಂನ ಉಪಾಧ್ಯಕ್ಷ ಎಸ್.ವಸಂತ್ ಕುಮಾರ್, ಕಾರ್ಯದರ್ಶಿ ಪ್ರಶಾಂತ್ ಕುಮಾರ್, ಖಜಾಂಚಿ ರಮೇಶ್ ಈಪಿ, ಓಣಂ ಸಮಿತಿ ಅಧ್ಯಕ್ಷೆ ಪ್ರೊ.ಡಾ ಬಿನ್ಸಿ ಎಂ ಜಾರ್ಜ್ ಉಪಸ್ಥಿತರಿದ್ದರು.