ಮುಂದಿನ ಶೈಕ್ಷಣಿಕ ವರ್ಷದಲ್ಲಿ 150 ಹಾಸ್ಟೆಲ್ಗಳ ನಿರ್ಮಾಣ: ಸಚಿವ ತಂಗಡಗಿ
ಉಡುಪಿ: ಈ ವರ್ಷ ರಾಜ್ಯದಲ್ಲಿ ಮೆಟ್ರಿಕ್ ನಂತರದ 75 ಬಾಲಕಿಯರ ಮತ್ತು 75 ಬಾಲಕರ ಸೇರಿದಂತೆ ಒಟ್ಟು 150 ಹಾಸ್ಟೆಲ್ಗಳು ಮಂಜೂರು ಮಾಡಲಾಗಿದ್ದು, ಇದಕ್ಕಾಗಿ 81ಕೋಟಿ ರೂ. ಅನುದಾನವನ್ನು ಕೇಳಲಾಗಿದೆ. ಮುಖ್ಯಮಂತ್ರಿ ಇದಕ್ಕೆ ಒಪ್ಪಿಗೆ ಸೂಚಿಸಿದ್ದು, ಮುಂದಿನ ಶೈಕ್ಷಣಿಕ ವರ್ಷದಲ್ಲಿ ಎಲ್ಲ ಹಾಸ್ಟೆಲ್ಗಳನ್ನು ನಿರ್ಮಿಸಲಾಗುವುದು ಎಂದು ರಾಜ್ಯ ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ಎಸ್.ತಂಗಡಗಿ ಹೇಳಿದ್ದಾರೆ.
ಉಡುಪಿ ಜಿಪಂ ಸಭಾಂಗಣದಲ್ಲಿ ಇಂದು ನಡೆದ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಮೆಟ್ರಿಕ್ ನಂತರ ಹಾಸ್ಟೆಲ್ಗಳಿಗೆ ಕರಾವಳಿ ಜಿಲ್ಲೆಗಳಿಗಿಂತ ಉತ್ತರ ಕರ್ನಾಟಕದಲ್ಲಿ ಬಹಳಷ್ಟು ಬೇಡಿಕೆ ಇದೆ. ಅದರಂತೆ ಈ ಬಾರಿ ಇವುಗಳನ್ನು ಜಿಲ್ಲಾ ಕೇಂದ್ರಗಳಿಗೆ ನೀಡಲು ನಿರ್ಧರಿಸಿದ್ದೇವೆ ಎಂದರು.
ಹಾಸ್ಟೆಲ್ಗೆ ಗುಣಟ್ಟಮದ ಆಹಾರ
ಹಾಸ್ಟೆಲ್ಗಳಲ್ಲಿ ಮಕ್ಕಳಿಗೆ ಗುಣಮಟ್ಟದ ಆಹಾರ ನೀಡುವ ನಿಟ್ಟಿನಲ್ಲಿ ದೊಡ್ಡ ಕಂಪೆನಿಗಳಿಗೆ ಟೆಂಡರ್ ವಹಿಸಿಕೊಡಲು ಈಗಾಗಲೇ ನಿರ್ಧರಿಸಲಾಗಿದ್ದು, ಇದಕ್ಕೆ ಸಚಿವ ಸಂಪುಟದಲ್ಲೂ ಅನುಮೋದನೆ ದೊರೆತಿದೆ. ತಾಲೂಕು ಮಟ್ಟದಲ್ಲಿ ಹಾಸ್ಟೆಲ್ಗಳ ಆಹಾರ ಟೆಂಡರ್ಗಳಲ್ಲಿ ಸಾಕಷ್ಟು ನೂನ್ಯತೆಗಳಿದ್ದು, ಕೆಲವು ಕಡೆ ಒಳ ಟೆಂಡರ್ ಕೂಡ ನೀಡಲಾಗಿದೆ ಎಂದು ಅವರು ಹೇಳಿದರು.
ಉಡುಪಿ ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಹಾಸ್ಟೆಲ್ಗಳಿಗೆ ನಿವೇಶನ ಸಮಸ್ಯೆ ಇಲ್ಲ. ನಿವೇಶನ ಕೊರತೆ ಇರುವ ಒಂದು ಹಾಸ್ಟೆಲ್ಗೆ ಅಗತ್ಯ ನಿವೇಶನ ನೀಡುವುದಾಗಿ ಜಿಲ್ಲಾಧಿಕಾರಿಗಳು ಭರವಸೆ ನೀಡಿದ್ದಾರೆ. ಬಾಡಿಗೆ ಕಟ್ಟಡದಲ್ಲಿ ಇರುವ ಎಲ್ಲ ಹಾಸ್ಟೆಲ್ಗಳಿಗೆ ಸ್ವಂತ ಕಟ್ಟಡ ನಿರ್ಮಿಸಲು ಇಲಾಖೆಯಿಂದ ಅನುದಾನ ಒದಗಿಸಲಾಗುವುದು ಎಂದು ಅವರು ತಿಳಿಸಿದರು.
ಬೋರ್ವೆಲ್ಗೆ 3.25 ಲಕ್ಷ ರೂ.
ಗಂಗಾ ಕಲ್ಯಾಣ ಯೋಜನೆಯಡಿ ಹಿಂದಿನ ಸರಕಾರ ರಾಜ್ಯದಲ್ಲಿ ಒಟ್ಟು 19ಸಾವಿರ ಬೋರ್ವೆಲ್ಗಳನ್ನು ಮಂಜೂರು ಮಾಡಿತ್ತು. ಆದರೆ ಅವು ಯಾವುದನ್ನು ಕೊರೆದಿರಲಿಲ್ಲ. ನಮ್ಮ ಸರಕಾರ ಬಂದ ನಂತರ ಕನಿಷ್ಠ 6ಸಾವಿರ ಬೋರ್ ವೆಲ್ಗಳನ್ನು ಕೊರೆದಿದ್ದೇವೆ. ಫೆಬ್ರವರಿ 15ರೊಳಗೆ ಹಿಂದಿನ ಅವಧಿಯ ಎಲ್ಲ ಬೋರ್ವೆಲ್ಗಳನ್ನು ಕೊರೆದು ರೈತರಿಗೆ ಅನುಕೂಲ ಮಾಡಿಕೊಡ ಬೇಕೆಂದು ಅಧಿಕಾರಿಗಳಿಗೆ ಗಡುವು ನೀಡಿ ನಿರ್ದೇಶನ ಕೊಟ್ಟಿದ್ದೇನೆ ಎಂದರು.
ಹಿಂದಿನ ಅವಧಿ ಮತ್ತು ಈ ವರ್ಷದ ಎಲ್ಲ ಬೋರ್ವೆಲ್ಗಳ ಕೊರೆಯುವ ಕಾರ್ಯವನ್ನು ನವೆಂಬರ್ ಅಂತ್ಯದೊಳೆಗೆ ಪೂರ್ಣ ಗೊಳಿಸಲು ನಿರ್ಧಾರ ಮಾಡಲಾಗಿದೆ. ಕಳೆದ ಅವಧಿಯಲ್ಲಿ ಬೋರ್ವೇಲ್ಗೆ ಎರಡು ಲಕ್ಷ ರೂ. ನೀಡುತ್ತಿದ್ದರೆ, ಈ ಬಾರಿ 3.25ಲಕ್ಷ ರೂ. ನೀಡಲಾಗುತ್ತದೆ. ನಮ್ಮ ಸರಕಾರ ಕೇವಲ ಬೋರ್ವೆಲ್ ಕೊರೆಯುವುದು ಮಾತ್ರವಲ್ಲ, ಅದಕ್ಕೆ ಬೇಕಾದ ಮೋಟಾರ್ ಹಾಗೂ ವಿದ್ಯುತ್ ಸಂಪರ್ಕವನ್ನು ಒದಗಿಸುತ್ತಿದೆ ಎಂದು ಅವರು ತಿಳಿಸಿದರು.
ಕನ್ನಡ ವಿಧೇಯಕ: ನಿಯಮ ರೂಪಿಸಲು ಸಮಿತಿ
ಕನ್ನಡ ಭಾಷಾ ಸಮಗ್ರ ವಿಧೇಯಕ ವಿಧಾನಸಭೆ ಹಾಗೂ ವಿಧಾನ ಪರಿಷತ್ ನಲ್ಲಿ ಜಾರಿಯಾಗಿದ್ದು, ಇದಕ್ಕೆ ನಿಯಮ ರೂಪಿ ಸುವ ಬಗ್ಗೆ ಹಲವು ಸಭೆಗಳನ್ನು ನಡೆಸಲಾಗಿದೆ. ಕೊನೆಯ ಸಭೆಯಲ್ಲಿ ನಿಯಮ ರೂಪಿಸಲು ಸಮಿತಿಯನ್ನು ರಚಿಸಲಾಗಿದೆ. ಮುಂದೆ ಈ ಕುರಿತ ನಿಯಮಗಳನ್ನು ತರುವ ಕಾರ್ಯ ಮಾಡಲಾಗುವುದು ಎಂದು ಸಚಿವ ಶಿವರಾಜ್ ತಂಗಡಗಿ ತಿಳಿಸಿದರು.
ಕನ್ನಡ ಭಾಷೆಯ ವಿಚಾರದಲ್ಲಿ ಹಿಂದೆ ಶೇ.50 ಕನ್ನಡ ಹಾಗೂ ಶೇ.50 ಇತರ ಭಾಷೆ ಎಂಬುದಿತ್ತು. ಆದರೆ ಈಗ ಶೇ.60-40 ಮಾಡಲಾಗಿದೆ. ಯಾವುದೇ ಅಂಗಡಿ, ಫ್ಯಾಕ್ಟರಿ, ಮಾಲ್, ಥಿಯೇಟರ್ಗಳಲ್ಲಿ ಶೇ.60ರಷ್ಟು ಕನ್ನಡ ಪದಗಳು ಇರಬೇಕು ಮತ್ತು ಶೇ.40 ಇತರ ಭಾಷೆಯ ಪದಗಳನ್ನು ಬಳಸಿಕೊಳ್ಳಬಹುದು ಎಂದು ಅವರು ಹೇಳಿದರು.