×
Ad

ಪೆರ್ಡೂರು: 16ನೇ ಶತಮಾನ ಪ್ರಾಚೀನ ದಶಾವತಾರ ದ್ವಾರಬಂಧ ಪತ್ತೆ

Update: 2025-07-04 20:04 IST

ಉಡುಪಿ, ಜು.4: ಉಡುಪಿ ತಾಲೂಕಿನ ಪೆರ್ಡೂರು ಅನಂತಪದ್ಮನಾಭ ದೇವಾಲಯದಲ್ಲಿ ವಿಜಯನಗರ ಕಾಲದ ದಶಾವತಾರ ಶಿಲ್ಪ ಪಟ್ಟಿಕೆಯ ಅಪೂರ್ವ ದ್ವಾರಬಂಧ ಕಂಡು ಬಂದಿದೆ ಎಂದು ನಿವೃತ್ತ ಪ್ರಾಚೀನ ಇತಿಹಾಸ ಮತ್ತು ಪುರಾತತ್ತ್ವಶಾಸ್ತ್ರ ಪ್ರಾಧ್ಯಾಪಕ ಮತ್ತು ಉಡುಪಿ ಆದಿಮ ಕಲಾ ಟ್ರಸ್ಟ್‌ನ ಸ್ಥಾಪಕ ಸದಸ್ಯ ಪ್ರೊ.ಟಿ.ಮುರುಗೇಶಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ಕಂಚಿನ ದ್ವಾರಬಂಧವು ಸುಮಾರು 4.5 ಅಡಿ ಎತ್ತರ ಮತ್ತು 3.5 ಅಡಿ ಅಗಲವಾಗಿದೆ. ಅಡ್ಡಪಟ್ಟಿಕೆಯ ಮೇಲೆ ಗಜಲಕ್ಷ್ಮಿಯ ಲಲಾಟ ಬಿಂಬವಿದೆ. ಎಡ-ಬಲದ ಲಂಭ ಪಟ್ಟಿಕೆಗಳ ಮೇಲೆ ಕ್ರಮವಾಗಿ ಅಂಜಲೀ ಮುದ್ರೆಯಲ್ಲಿ ನಿಂತಿರುವ ಆಂಜನೇಯ, ವ್ಯಾಳಿ, ವ್ಯಾಳಿಯ ಮುಖದಿಂದ ಹೊರಟ ಲತಾ ಕೋಷ್ಟಕಗಳ ಮಧ್ಯೆ ಮತ್ಸ್ಯ, ಕೂರ್ಮ, ವರಾಹ, ನರಸಿಂಹ ಮತ್ತು ವಾಮನಾವತಾರದ ಶಿಲ್ಪಗಳಿವೆ.

ಉನ್ನತ ಪೀಠದ ಮೇಲೆ ಕುಳಿತಿರುವ ಲಕ್ಷ್ಮಿಯ ಎಡ-ಬಲದಲ್ಲಿ ಆನೆಗಳು ಪವಿತ್ರ ಕಳಸಗಳಿಂದ ಅಭಿಷೇಕ ಮಾಡುತ್ತಿವೆ. ಆನೆಗಳ ಮೇಲ್ಭಾಗದಲ್ಲಿ ಸೂರ್ಯ-ಚಂದ್ರರ ರೇಖಾ ವಿನ್ಯಾಸಗಳು ಅಡ್ಡ ಪಟ್ಟಿಕೆಯ ಮೇಲಿವೆ. ನಂತರ ಪರುಶುರಾಮ, ರಾಮ, ಕಾಳಿಂಗ ಮರ್ಧನ ಬೆಣ್ಣೆ ಕೃಷ್ಣ, ಬೆತ್ತಲೆ ಬುದ್ಧ, ಕಲ್ಕಿ ಮತ್ತು ಅಂಜಲೀ ಮುದ್ರೆಯಲ್ಲಿ ನಿಂತಿರುವ ಗರುಡನ ಶಿಲ್ಪಗಳಿವೆ.

ಚಾರಿತ್ರಿಕ ಮಹತ್ವ: ಅನಂತಪದ್ಮನಾಭ ದೇವಾಲಯದ ಒಳ ಆವರಣದಲ್ಲಿ ವಿಜಯನಗರ ಸಾಮ್ರಾಜ್ಯದ ಖ್ಯಾತ ಚಕ್ರವರ್ತಿ ಕೃಷ್ಣದೇವರಾಯನ ಕಾಲದ ಶಾಸನವಿದೆ. ಈ ಶಾಸನದಲ್ಲಿ ಚಕ್ರವರ್ತಿಯು, ದೇವಾಲ ಯದ ಅನಂತ ದೇವರಿಗೆ ನಿತ್ಯವೂ ನಡೆಯುವ ಅಮ್ರುತಪಡಿ, ನಂದಾದೀಪ, ಶ್ರೀಬಲಿ, ನೈವೇದ್ಯ ಮತ್ತು ಪಂಚಪರ್ವಗಳಿಗೆ ಅಪಾರ ಪ್ರಮಾಣದ ಭೂದಾನವನ್ನು ನೀಡುತ್ತಾನೆ.ಹಾಗೂ ದೇವಾಲಯದ ಪಾರುಪತ್ಯವನ್ನು ನಡೆಸಲು ಸೂರಪ್ಪಯ್ಯ ಎಂಬ ಅಧಿಕಾರಿಯನ್ನು ನೇಮಿಸಿದ ಆದೇಶವನ್ನು ಶಾಸನ ಒಳಗೊಂಡಿದೆ.

ಸಾಮ್ರಾಜ್ಯದ ಆರ್ಥಿಕಬಲದಿಂದ ಸೂರಪ್ಪಯ್ಯ ಅಧಿಕಾರಿ ಇಡೀ ದೇವಾಲಯವನ್ನು, ತೀರ್ಥಮಂಟಪವನ್ನು ಶಿಲಾಮಯವಾಗಿ ಜೀರ್ಣೋದ್ಧಾರ ಮಾಡುತ್ತಾನೆ. ಬಹುಶಃ ಅದೇ ಸಮಯದಲ್ಲಿ ದೇವಾಲಯದ ಗರ್ಭ ಗುಡಿಯ ಪ್ರವೇಶ ದ್ವಾರಕ್ಕೆ ಕಂಚಿನ ದಶಾವತಾರ ಶಿಲ್ಪಗಳ ಪಟ್ಟಿಕೆಯನ್ನೂ ಮಾಡಿಸಲಾಗಿದೆ.

ಕೃಷ್ಣದೇವರಾಯನು ಒರಿಸ್ಸಾದ ಗಜಪತಿಗಳ ಮೇಲೆ ದಾಳಿ ಮಾಡಿ, ತನ್ನ ಯಶಸ್ವೀ ದಾಳಿಯ ನೆನಪಿಗಾಗಿ ಒರಿಸ್ಸಾದಿಂದ ಬೆಣ್ಣೆಕೃಷ್ಣನ ಮೂರ್ತಿಯನ್ನು ರಾಜಧಾನಿಗೆ ತರುತ್ತಾನೆ. ಹಂಪಿಯಲ್ಲಿ ಕೃಷ್ಣನಿಗಾಗಿ ಭವ್ಯ ವಾದ ದೇಗುಲವನ್ನು ನಿರ್ಮಾಣ ಮಾಡುತ್ತಾನೆ. ತದನಂತರ ಬೆಣ್ಣೆ ಕೃಷ್ಣ ವಿಜಯನಗರ ಸಾಮ್ರಾಜ್ಯದಲ್ಲಿ ಜನಪ್ರಿಯ ದೇವತೆಯಾಗಿ ಕಾಣಿಸಿಕೊಳ್ಳುತ್ತಾನೆ. ಸದರಿ ದ್ವಾರಬಂಧದ ದಶಾವತಾರ ಶಿಲ್ಪಗಳಲ್ಲಿ ಬೆಣ್ಣೆಕೃಷ್ಣ ಎಂಟನೇ ಅವತಾರವಾಗಿ ಚಿತ್ರಿಸಲ್ಪಟ್ಟಿದ್ದಾನೆ.

ಆದ್ದರಿಂದ ಈ ಕಂಚಿನ ದ್ವಾರಬಂಧ 16ನೇ ಶತಮಾನಕ್ಕೆ ಸೇರಿದ ವಿಜಯನಗರ ಕಾಲದ ಶಿಲ್ಪ ಕಲಾಕೃತಿ ಎಂದು ನಿರ್ಧರಿಸಬಹುದಾಗಿದೆ. ಒಂಭತ್ತನೇ ಅವತಾರವಾಗಿ ಕಂಡುಬರುವ ಬೆತ್ತಲೆಯಾಗಿ ನಿಂತಿರುವ ಬುದ್ಧನ ಶಿಲ್ಪ ಅತ್ಯಂತ ಕುತೂಹಲಕಾರಿಯಾದದ್ದು. ಇದೇ ರೀತಿಯ ಶಿಲ್ಪ ಶೃಂಗೇರಿಯ ವಿದ್ಯಾಶಂಕರ ದೇವಾಲಯದ ಭಿತ್ತಿಯಲ್ಲಿ ಕಂಡುಬರುತ್ತದೆ. ಕಂಚಿನ ದ್ವಾರಬಂಧದ ಶಿಲ್ಪಗಳು ಸಂಪೂರ್ಣವಾಗಿ ವಿಜಯನಗರ ಶೈಲಿಯಲ್ಲಿವೆ.

ಈ ಅಧ್ಯಯನಕ್ಕೆ ನೆರವಾದ ದೇವಾಲಯದ ಅನುವಂಶಿಕ ಮೊಕ್ತೇಸರರಾದ ಪ್ರಮೋದ್ ರೈ ಪಳಜೆ, ಆಡಳಿತಾಧಿಕಾರಿ ಗುರುರಾಜ್ ಹಾಗೂ ದೇವಾಲಯದ ಅರ್ಚಕ ವೃಂದಕ್ಕೆ ಪ್ರೊ.ಮುರುಗೇಶಿ ಕೃತಜ್ಞತೆ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News