ಕೇಂದ್ರ ಸರ್ಕಾರದ ಶ್ರಮ ಸಂಹಿತೆಗಳ ಜಾರಿಗೆ ಸಿಐಟಿಯು ವಿರೋಧ: ಮೇ 20ಕ್ಕೆ ಸಾರ್ವತ್ರಿಕ ಮುಷ್ಕರಕ್ಕೆ ಕರೆ
ಕುಂದಾಪುರ: ವಿಶ್ವ ಕಾರ್ಮಿಕ ದಿನವಾದ ಮೇ 1 ರಂದು ಕುಂದಾಪುರದಲ್ಲಿ ಸಿಐಟಿಯುಗೆ ಸೇರಿದ ಎಲ್ಲ ಕಾರ್ಮಿಕ ಸಂಘಗಳು ಬ್ರಹತ್ ಸಂಖ್ಯೆಯಲ್ಲಿ ಸೇರಿ ಪುರ ಮೆರವಣಿಗೆ ನಡೆಸಿ ಕೇಂದ್ರ, ರಾಜ್ಯ ಸರ್ಕಾರದ ನೀತಿಗಳ ವಿರುದ್ಧ ಘೋಷಣೆ ಕೂಗಿದರು.
ಕುಂದಾಪುರದ ಶಾಸ್ತ್ರೀ ವೃತ್ತದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಸಿಐಟಿಯು ಉಡುಪಿ ಜಿಲ್ಲಾ ಉಪಾಧ್ಯಕ್ಷ ಎಚ್. ನರಸಿಂಹ ಮಾತನಾಡಿ, ಕಾರ್ಮಿಕ ವಿರೋಧಿ ಶ್ರಮ ಸಂಹಿತೆಗಳ ಜ್ಯಾರಿಗೊಳ್ಳಲು ಕಾರ್ಮಿಕ ವರ್ಗ ಬಿಡುವುದಿಲ್ಲ ಎಂಬುದಾಗಿ ಘೋಷಿಸಿದರು. ಈ ಹಿನ್ನೆಲೆ ಮೇ ತಿಂಗಳ 20 ರಂದು ಅಖಿಲ ಭಾರತ ಮಟ್ಟ ದಲ್ಲಿ ಕೇಂದ್ರೀಯ ಕಾರ್ಮಿಕ ಸಂಘಟನೆಗಳ ಜಂಟಿ ನೇತೃತ್ವದಲ್ಲಿ ನಡೆಯುವ ಸಾರ್ವತ್ರಿಕ ಮುಷ್ಕರಕ್ಕೆ ಕುಂದಾಪುರ ಕಾರ್ಮಿಕರ ಬೆಂಬಲ ವ್ಯಕ್ತಪಡಿಸಿ ಮುಷ್ಕರ ಯಶಸ್ವಿ ಮಾಡುವಂತೆ ಕಾರ್ಮಿಕರಿಗೆ ಕರೆ ನೀಡಿದರು.
ನೂತನ ಶ್ರಮ ಸಂಹಿತೆ ಕಾರ್ಮಿಕರ ಹಕ್ಕುಗಳನ್ನು ಕಸಿದು ಕಾರ್ಮಿಕರನ್ನು ಗುಲಾಮಗಿರಿಗೆ ತಳ್ಳಲಿದೆ. ಕಾರ್ಮಿಕ ವಿರೋಧಿ ನೀತಿ ಅನುಸರಿಸುವಲ್ಲಿ ಕೇಂದ್ರ ರಾಜ್ಯ ಸರಕಾರದಲ್ಲಿ ಯಾವುದೇ ವ್ಯತ್ಯಾಸವಿಲ್ಲ. ರಾಜ್ಯ ಸರಕಾರವು ಬಿಜೆಪಿ ಜ್ಯಾರಿಗೊಳಿಸಿದ 12 ಘಂಟೆಗಳ ದುಡಿಮೆ ನೀತಿ ವಾಪಸು ಪಡೆಯಲಿಲ್ಲ ಎಂಬುದಾಗಿ ದೂರಿದರು.
ತಾಲೂಕು ಸಿಐಟಿಯು ಸಂಚಾಲಕ ಚಂದ್ರಶೇಖರ್ ವಿ. ಮಾತನಾಡಿ, ಅಮೆರಿಕ ಪ್ರೇರಿತ ಇಸ್ರೇಲ್ ದಾಳಿಯಲ್ಲಿ ಜರ್ಜರಿತ ಪ್ಯಾಲೆಸ್ಟೈನ್ ಜನತೆಗೆ ಸೌಹಾರ್ಧ ಬೆಂಬಲ ಘೋಷಿಸಿದರು. ಸಮಾಜವಾದಿ ರಾಷ್ಟ್ರವಾದ ವಿಯೇಟ್ನಾಂನಿಂದ ಅಮೆರಿಕ ಸೇನಾ ಪಡೆಯನ್ನು ಓಡಿಸಿ 50 ವರ್ಷಗಳ ಆಚರಣೆಗೆ ಶುಭ ಕೋರಿದರು. ಪಿಹೆಲ್ಗಾಂ ದಾಳಿಯನ್ನು ರಾಜಕೀಯ ಉದ್ದೇಶಕ್ಕೆ ಬಳಸುವುದನ್ನು ಖಂಡಿಸಿದರು . ಈ ವಿಚಾರದಲ್ಲಿ ಕೇಂದ್ರ ಸರಕಾರ ತನ್ನ ಭದ್ರತಾ ವೈಫಲ್ಯವನ್ನು ಒಪ್ಪಿಕೊಳ್ಳಬೇಕೆಂದು ಒತ್ತಾಯಿಸಿದರು.
ಬಹಿರಂಗ ಸಭೆಯ ಅಧ್ಯಕ್ಷತೆಯನ್ನು ಹಂಚು ಕಾರ್ಮಿಕ ಸಂಘದ ಮುಖಂಡರಾದ ವಿ. ನರಸಿಂಹ ವಹಿಸಿ ದ್ದರು. ಸಭೆಯಲ್ಲಿ ಪೆಲ್ಗಮ್ ದಾಳಿಯಲ್ಲಿ ಮೃತರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಅಂಗನವಾಡಿ ನೌಕರರ ಸಂಘದ ಮುಖಂಡರಾದ ಸುಶೀಲ ನಾಡ ಮಾತನಾಡಿದರು.
ಕಟ್ಟಡ ಕಾರ್ಮಿಕ ಸಂಘದ ಗೌರವ ಅಧ್ಯಕ್ಷ ಚಿಕ್ಕಮೊಗವೀರ, ಆಟೋ ಚಾಲಕ ಸಂಘದ ಅಧ್ಯಕ್ಷ ರಮೇಶ್ ವಿ., ಬೀಡಿ ಕಾರ್ಮಿಕರ ಮುಖಂಡರಾದ ಮಹಾಬಲ ವಡೇರಹೋಬಳಿ, ಬಲ್ಕಿಸ್, ಹಂಚು ಸಂಘದ ಮುಖಂಡರಾದ ಜಿ.ಡಿ. ಪಂಜು ಉಪಸ್ಥಿತರಿದ್ದರು. ಆಟೋ ಚಾಲಕ ಸಂಘದಿಂದ ಆಟೋ ರಿಕ್ಷಾ ಪುರ ಮೆರವಣಿಗೆ ನಡೆಯಿತು.
ಕಾರ್ಯಕ್ರಮದ ನೇತೃತ್ವವನ್ನು ಹಂಚು ಸಂಘದ ಮುಖಂಡರಾದ ಸುರೇಂದ್ರ, ಪ್ರಕಾಶ್ ಕೋಣಿ, ಸುಧಾ ಕರ್ ಕುಲಾಲ್, ಸಂತೋಷ್, ಹಾಗು ಕಟ್ಟಡ ಕಾರ್ಮಿಕರ ಮುಖಂಡರಾದ ಕೃಷ್ಣ ಹಂಗಳೂರು, ಅಣ್ಣಪ್ಪ ಅಬ್ಬಿಗುಡ್ಡೆ, ರೆಹಮಾನ್, ಶಶಿಕಾಂತ್, ಸುದೀರ್, ಸಂತೋಷ್ ಶೆಟ್ಟಿ , ಅನಂತ ಕುಲಾಲ್ ವಹಿಸಿದ್ದರು.
ಕಟ್ಟಡ ಕಾರ್ಮಿಕರ ಸಂಘದ ಮುಖಂಡ ಸಂತೋಷ್ ಹೆಮ್ಮಾಡಿ ಸ್ವಾಗತಿಸಿದರು. ರಾಜು ದೇವಾಡಿಗ ಅವರ ವಂದಿಸಿದರು.