ಉಡುಪಿ: ಮೇ 23ರಂದು ರಾಜ್ಯಮಟ್ಟದ ನುಡಿ ಸಂಭ್ರಮ 2026 ಉದ್ಘಾಟನೆ
ಉಡುಪಿ, ಮೇ 22: ಕನ್ನಡ ನಾಡು-ನುಡಿ, ಸಾಹಿತ್ಯ ಮತ್ತು ಸಂಸ್ಕೃತಿಯ ಸಂರಕ್ಷಣೆಗಾಗಿ ಶ್ರಮಿಸುತ್ತಿರುವ ‘ನುಡಿತೋರಣ’ ಬಳಗದ ನಾಲ್ಕನೇ ವಾರ್ಷಿಕೋತ್ಸವ ‘ನುಡಿ ಸಂಭ್ರಮ-2026’ ಮೇ 23 ಮತ್ತು 24 ರಂದು ಉಡುಪಿಯಲ್ಲಿ ಜರುಗಲಿದೆ.
ಈ ಸಂಭ್ರಮದ ವೇದಿಕೆಯಲ್ಲಿ ಸಾಹಿತ್ಯ ಕ್ಷೇತ್ರದ ವಿವಿಧ ಆಯಾಮಗಳಲ್ಲಿ ಗಣನೀಯ ಸಾಧನೆ ಮಾಡಿದ ಮೂವರು ಮಹಿಳಾ ಸಾಧಕಿಯರಿಗೆ ಪ್ರತಿಷ್ಠಿತ ‘ನುಡಿಭೂಷಣ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು. ಚಿತ್ರದುರ್ಗದ ಶೈಲಾ ಜಯಕುಮಾರ್, ಹಿರಿಯ ಸಾಹಿತಿ ಸಿದ್ಧವನಹಳ್ಳಿ ಕೃಷ್ಣಶರ್ಮರ ಪುತ್ರಿ, ಶ್ರೇಷ್ಠ ಅನುವಾದಕಿ ಬೆಂಗಳೂರಿನ ರಾಧಾ ಟೇಕಲ್ ಹಾಗೂ ಉಡುಪಿಯ ಸಾಹಿತಿ ಶೋಭಾ ಹರಿಪ್ರಸಾದ್ ಇಲ್ಲಿ ಸನ್ಮಾನಗೊಳ್ಳುವ ಮಹಿಳಾ ಸಾಧಕಿಯರು.
ರಥಬೀದಿಯಲ್ಲಿರುವ ಪೇಜಾವರ ಮಠದ ಶ್ರೀರಾಮವಿಠಲ ಸಭಾಭವನದಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಚಿಂತಕರಾದ ಪ್ರೇಮಶೇಖರ್ ಹಾಗೂ ಎ.ಎಸ್.ಕೆ.ಹೆಬ್ಬಾರ್ ಉದ್ಘಾಟಿಸಲಿದ್ದಾರೆ. ವಿವಿಧ ಸಾಹಿತ್ಯ ಪ್ರಕಾರಗಳ ಒಟ್ಟು ಆರು ಕೃತಿಗಳನ್ನು ಸಮಾರಂಭದಲ್ಲಿ ಬಿಡುಗಡೆಗೊಳ್ಳಲಿವೆ.
ಉಡುಪಿ ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗರ ಅಧ್ಯಕ್ಷತೆಯಲ್ಲಿ 24 ಕವಿಗಳು ಬಾಗವಹಿಸುವ ಕವಿಗೋಷ್ಠಿಯು ನಡೆಯಲಿದೆ. ಇದರೊಂದಿಗೆ ಸಾಂಸ್ಕೃತಿಕ ಸೌರಭ, ಏಕವ್ಯಕ್ತಿ ರಂಗಪ್ರದರ್ಶನವೂ ನಡೆಯಲಿದೆ ಎಂದು ಸಂಘಟಕರ ಪ್ರಕಟಣೆ ತಿಳಿಸಿದೆ.