ಸೈಬರ್ ಅಪರಾಧ ಶೇ.80ರಷ್ಟು ಆರ್ಥಿಕ ವಂಚನೆಗೆ ಸಂಬಂಧಿಸಿದ್ದು: ಉಡುಪಿ ಜಿಲ್ಲಾ ಎಸ್ಪಿ ಡಾ.ಅರುಣ್
ಉಡುಪಿ, ಫೆ.11: ಸೈಬರ್ ಅಪರಾಧ ಎಂಬುದು ಎಲ್ಲಾ ಕಡೆಗಳಲ್ಲೂ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇದರಲ್ಲಿ ಶೇ.80ರಷ್ಟು ಆರ್ಥಿಕ ವಂಚನೆಗೆ ಸಂಬಂಧಿಸಿದ್ದೇ ಆಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ. ತಿಳಿಸಿದ್ದಾರೆ.
ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಇಂದು ಉಡುಪಿ ಜಿಲ್ಲಾಡಳಿತದ ವತಿಯಿಂದ ನಡೆದ ಸುರಕ್ಷಿತ ಅಂತರ್ಜಾಲ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತಿದ್ದರು.
ದೇಶಾದ್ಯಂತ ಇಂದು ಸೈಬರ್ ಅಪರಾಧಗಳು ದಿನದಿನಕ್ಕೆ ಹೆಚ್ಚುತ್ತಿವೆ. ಸಾಂಪ್ರದಾಯಿಕ ಮೋಸ, ವಂಚನೆ, ಅಪರಾಧ ಗಳಿಗಿಂತ ಕುಳಿತಲ್ಲಿಯೇ ಇಂಟರ್ನೆಟ್ ಬಳಕೆಯ ಮೂಲಕ ಸೈಬರ್ ಅಪರಾಧಗಳನ್ನು ಮಾಡುವ ಮೂಲಕ ಸೈಬರ್ ವಂಚಕರು ಹೆಚ್ಚಿನ ಹಣ ಗಳಿಕೆ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಸಾಂಪ್ರದಾಯಿಕ ವಂಚನೆ, ಅಪರಾಧದಿಂದ 4 ಕೋಟಿ ರೂ. ಹಣವನ್ನು ಸಾರ್ವಜನಿಕರು ಕಳೆದುಕೊಂಡರೆ, ಸೈಬರ್ ಅಪರಾಧದಲ್ಲಿ 44 ಕೋಟಿ ರೂ.ಗೂ ಹೆಚ್ಚಿನ ಹಣವನ್ನು ಕಳೆದು ಕೊಂಡಿದ್ದಾರೆ ಎಂದು ವಿವರಿಸಿದ ಜಿಲ್ಲಾ ಪೊಲೀಸ್ ಅಧೀಕ್ಷಕರು, ಜನರು ಆನ್ಲೈನ್ ಮೂಲಕ ಆರ್ಥಿಕ ವಹಿವಾಟು ಮಾಡುವಾಗ ಮೂಲಭೂತ ಅಂಶಗಳ ಬಗ್ಗೆ ಎಚ್ಚರ ವಹಿಸುವುದು ಅತ್ಯಂತ ಅವಶ್ಯಕ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ, ಅಂತರ್ಜಾಲ ಬಳಕೆಯ ಸಮಯ ದಲ್ಲಿ ಜನಸಾಮಾನ್ಯರು ಅತ್ಯಂತ ಜವಾಬ್ದಾರಿಯಿಂದ, ಎಚ್ಚರಿಕೆಯಿಂದ ವ್ಯವಹರಿಸಬೇಕು. ಒಂದೊಮ್ಮೆ ನಿರ್ಲಕ್ಷ್ಯ ವಹಿಸಿ ದಲ್ಲಿ ವಂಚನೆಗೆ ಒಳಗಾಗುವ ಸಾಧ್ಯತೆಗಳು ಅಧಿಕ ಇರುತ್ತವೆ ಎಂದರು.
ಜನಸಾಮಾನ್ಯರು ಆಧುನಿಕ ತಂತ್ರಜ್ಞಾನಗಳ ಮೊರೆ ಹೋಗಿ ಕ್ಷಣಾರ್ಧದಲ್ಲಿ ತಮ್ಮ ದೈನಂದಿನ ಕಾರ್ಯ ಚಟುವಟಿಕೆಗಳಲ್ಲಿ ಆರ್ಥಿಕ ವ್ಯವಹಾರಗಳಲ್ಲಿ ಡಿಜಿಟಲ್ ಎಲೆಕ್ಟ್ರಾನಿಕ್ ಬಳಕೆಯನ್ನು ಹೆಚ್ಚು ಹೆಚ್ಚು ಮಾಡುತ್ತಿದ್ದಾರೆ. ಇಂತಹ ವ್ಯವಹಾರಗಳನ್ನು ಮಾಡುವಾಗ ಜವಾಬ್ದಾರಿಯಿಂದ ಮಾಡಬೇಕು. ಸ್ವಲ್ಪ ಎಚ್ಚರ ತಪ್ಪಿದರೂ ವಂಚನೆಗೆ ಒಳಗಾಗುವ ಸಾಧ್ಯತೆ ಇರುತ್ತದೆ. ಸೈಬರ್ ಅಪರಾಧ ಪ್ರಕರಣಗಳ ಪ್ರತಿದಿನ ಹೊಸ ಹೊಸ ರೂಪದಲ್ಲಿ ನಡೆಯುತ್ತಿ ರುವುದನ್ನು ನಾವು ಕೇಳುತಿದ್ದೇವೆ ಎಂದರು.
ಜನಸಾಮಾನ್ಯರು ಅಲ್ಪಅವಧಿಯಲ್ಲಿ ಹೆಚ್ಚಿನ ಹಣ ಗಳಿಸುವ, ಹಣವನ್ನು ದ್ವಿಗುಣಗೊಳಿಸುವ ಆಸೆಯಿಂದ ಕಂಪೆನಿಗಳ ಪೂರ್ವಾಪರ ಮಾಹಿತಿಯನ್ನು ಹೊಂದದೇ ಹಣದ ಹೂಡಿಕೆಗಳನ್ನು ಮಾಡುವುದರಿಂದ ಪ್ರಾರಂಭದಲ್ಲಿ ಹೆಚ್ಚಿನ ಹಣ ಗಳಿಸಿ, ಇತರರಿಗೂ ಹೂಡಿಕೆ ಮಾಡಲು ಪ್ರೇರೇಪಿಸಿ ಹೆಚ್ಚಿನ ಹಣವನ್ನು ಹೂಡಿಕೆ ಮಾಡಿ ಹಣ ಕಳೆದುಕೊಂಡ ನಿದರ್ಶನಗಳು ನಮ್ಮ ಕಣ್ಣ ಮುಂದೆ ಇವೆ. ಇವುಗಳ ಬಗ್ಗೆ ಜಾಗೃತಿ ವಹಿಸಿದಾಗ ಮಾತ್ರ ಆರ್ಥಿಕ ನಷ್ಟದಿಂದ ಪಾರಾಗಲು ಸಾಧ್ಯ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ವಿಧಾನಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಮಾತನಾಡಿ, ಸೈಬರ್ ವಂಚಕರು ಬ್ಯಾಂಕ್ ಖಾತೆಗಳಲ್ಲಿ ಹೆಚ್ಚಿನ ಹಣ ಹೊಂದಿರುವ ಸರಕಾರಿ ನೌಕರರು ಹಾಗೂ ಇತರೆ ಶ್ರೀಮಂತ ವ್ಯಕ್ತಿಗಳ ಹಣವನ್ನು ಲೂಟಿಮಾಡಲು ಅವರ ದತ್ತಾಂಶ ಗಳನ್ನು ಇಂಟರ್ನೆಟ್ ಬಳಕೆಯ ಮೂಲಕ ಸರಳವಾಗಿ ಸಂಗ್ರಹಿಸಿ, ಮೋಸ ಮಾಡಲು ಸಂಚು ರೂಪಿಸುತ್ತಾರೆ. ಈ ಬಗ್ಗೆ ಜನಸಾಮಾನ್ಯರು ಜಾಗೃತಿ ವಹಿಸಬೇಕು. ಹಠಾತ್ ಆಗಿ ಮೋಸ ಮಾಡುವ ಉದ್ದೇಶದಿಂದ ಕೆಲವೊಂದು ಸುಳ್ಳು ಮಾಹಿತಿ ಗಳನ್ನು ಹಂಚಿಕೊಂಡು ಉದ್ರೇಕಿಸುವುದರೊಂದಿಗೆ ಭಯ ಹುಟ್ಟಿಸಿ ಹಣ ಪಡೆಯಲು ಮುಂದಾ ಗುತ್ತಾರೆ. ಇದಕ್ಕೆ ಒತ್ತು ನೀಡಬಾರದು ಎಂದು ತಮ್ಮ ಸ್ವಂತ ಅನುಭವಗಳ ನಿರ್ದೇಶನ ನೀಡುವುದರೊಂದಿಗೆ ಮಾಹಿತಿಗಳನ್ನು ಹಂಚಿಕೊಂಡರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರತೀಕ್ ಬಾಯಲ್ ಮಾತನಾಡಿ, ಸೈಬರ್ ಕ್ರೈಂ ಪ್ರಕರಣಗಳಲ್ಲಿ ಕಳೆದುಕೊಂಡ ಹಣವನ್ನು ಮತ್ತೆ ಪಡೆಯುವುದು ಹಾಗೂ ಅಂತಹ ಪ್ರಕರಣಗಳನ್ನು ತನಿಖೆ ಮಾಡುವುದು ಕಷ್ಟಸಾಧ್ಯ. ಆನ್ ಲೈನ್ ವಂಚಕರು ಮೊದಲು ನಮ್ಮ ನಂಬಿಕೆ ಗಳಿಸಲು ಪ್ರಯತ್ನಿಸಿ, ಮೋಸ ಮಾಡುತ್ತಾರೆ. ಎಷ್ಟೇ ಎಚ್ಚರವಿದ್ದರೂ ಕಷ್ಟ. ಹಣಕಾಸಿನ ವ್ಯವಹಾರಗಳನ್ನು ಮಾಡುವಾಗ ಜವಾಬ್ದಾರಿಯುತವಾಗಿ ಮಾಡಬೇಕು ಎಂದರು.
ಜಿಲ್ಲಾ ಲೀಡ್ಬ್ಯಾಂಕ್ ಮ್ಯಾನೇಜರ್ ಕೆನರಾ ಬ್ಯಾಂಕಿನ ಹರೀಶ್ ಮಾತನಾಡಿದರು. ಮಣಿಪಾಲ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ದೇವರಾಜ್ ಟಿ. ಹಾಗೂ ಬೆಂಗಳೂರು ಎನ್ಐಸಿಯ ಬಾಲಚಂದ್ರ ಸೈಬರ್ ಪ್ರಕರಣಗಳಾಗದಂತೆ ಎಚ್ಚರ ವಹಿಸುವ ಕುರಿತು ಮಾಹಿತಿಗಳನ್ನು ನೀಡಿದರು.
ಕಾರ್ಯಕ್ರಮದಲ್ಲಿ ಎನ್ಐಸಿ ಅಧಿಕಾರಿ ಉಮಾಮಹೇಶ್ವರಿ, ವಿವಿಧ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು. ಡಯಟ್ ಉಪನ್ಯಾಸಕ ಡಾ.ಅಶೋಕ್ ಕಾಮತ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.