ಆ.9: ಬನ್ನಂಜೆ ಗೋವಿಂದಾಚಾರ್ಯರ ನವತಿ ಜನ್ಮವರ್ಧಂತಿ ಸಂಭ್ರಮ
ಉಡುಪಿ, ಆ.7:ಪರ್ಯಾಯ ಪುತ್ತಿಗೆ ಮಠ ಮತ್ತು ಡಾ.ಬನ್ನಂಜೆ ಗೋವಿಂದ ಪಂಡಿತಾಚಾರ್ಯರ ನವತಿ ಜನ್ಮವರ್ಧಂತ್ಯುತ್ಸವ ಸಮಿತಿ ಉಡುಪಿ ಇವರ ಆಶ್ರಯದಲ್ಲಿ ಅಂಬಲಪಾಡಿಯ ಈಶಾವಾಸ್ಯ ಪ್ರತಿಷ್ಠಾನದ ಸಹಯೋಗದಲ್ಲಿ ‘ವಿದ್ಯಾವಾಚಸ್ಪತಿ ಡಾ. ಬನ್ನಂಜೆ ಗೋವಿಂದಾಚಾರ್ಯರ ನವತಿ ಜನ್ಮವರ್ಧಂತಿ ಉತ್ಸವ ಕಾರ್ಯಕ್ರಮವನ್ನು ಇದೇ ಆ.9ರಂದು ಸಂಜೆ 5:30ಕ್ಕೆ ಉಡುಪಿ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಆಯೋಜಿಸ ಲಾಗಿದೆ ಎಂದು ಸಮಿತಿಯ ಅಧ್ಯಕ್ಷ ಕೆ. ರಘಂಪತಿ ಭಟ್ ತಿಳಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರ್ಯಾಯ ಪುತ್ತಿಗೆ ಮಠಾಧೀಶರಾದ ಶ್ರೀಸುಗುಣೇಂದ್ರ ತೀರ್ಥರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕಿರಿಯ ಯತಿಗಳಾದ ಶ್ರೀಸುಶ್ರೀಂದ್ರತೀರ್ಥರು ಬನ್ನಂಜೆ ಗೋವಿಂದಾಚಾರ್ಯರ ಕೃತಿ ಬಿಡುಗಡೆ ಮಾಡಲಿದ್ದಾರೆ. ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಯಶ್ಪಾಲ್ ಸುವರ್ಣ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ಡಾ.ಬನ್ನಂಜೆ ಗೋವಿಂದಪಂಡಿತಾಚಾರ್ಯರು ಈ ದೇಶ ಕಂಡ ಪ್ರಸಿದ್ಧ ಸಂಸ್ಕೃತ ಮತ್ತು ಕನ್ನಡ ವಿದ್ವಾಂಸರು. ಸಂಶೋಧಕ, ಪ್ರವಚನಕಾರರಾಗಿ ಲೋಕ ಪ್ರಸಿದ್ದಿ ಪಡೆದಿದ್ದಾರೆ. ಬಹಳ ವರ್ಷ ಪತ್ರಕರ್ತರೂ, ಪತ್ರಿಕೋದ್ಯಮಿಗಳಾಗಿ ಸೇವೆ ಸಲ್ಲಿಸಿದ ಅಚಾರ್ಯರು ವೇದ ವೇದಾಂತ ಉಪನಿಷತ್ತು ಪುರಾಣ ರಾಮಾಯಣ ಮಹಾಭಾರತ ಭಗವದ್ಗೀತೆ ಮೊದಲಾದ ಭಾರತೀಯ ಅಧ್ಯಾತ್ಮಿಕ ಸಾಹಿತ್ಯಗಳ ಬಗ್ಗೆ ಸಂಶೋಧನೆ, ಅಧ್ಯಯನ ಮಾಡಿದ್ದಾರೆ. 350ಕ್ಕೂ ಅಧಿಕ ಶ್ರೇಷ್ಠ ಕೃತಿಗಳ ರಚನೆ ಮಾಡಿದ್ದಾರೆ ಎಂದರು.
ದೇಶ ವಿದೇಶಗಳಲ್ಲಿ ಅವರು ಸಾವಿರಾರು ಆಧ್ಯಾತ್ಮಿಕ ಉಪನ್ಯಾಸಗಳನ್ನು ನೀಡಿದ್ದು ಈಗಲೂ 23,000 ಗಂಟೆಗಳ ಉಪನ್ಯಾಸಗಳ ಅಡಿಯೋ ವಿಡಿಯೋ ದಾಖಲೆಗಳು ಲಭ್ಯವಿದೆ. ಅವರ ಎಲ್ಲ ಸಾಧನೆಗಳಿಗಾಗಿ ಅವರಿಗೆ ಪದ್ಮಶ್ರೀ, ಹಲವು ವಿವಿಗಳಿಂದ ಗೌರವ ಡಾಕ್ಟರೇಟ್ ಸೇರಿದಂತೆ ಅನೇಕ ಬಿರುದು ಸನ್ಮಾನಗಳು ಲಭಿಸಿವೆ ಎಂದು ತಿಳಿಸಿದರು.
ಪುತ್ತಿಗೆ ಮಠದ ಅಂ.ರಾ.ಕಾರ್ಯದರ್ಶಿ ಎಂ.ಪ್ರಸನ್ನಾಚಾರ್ಯ, ಪ್ರತಿಷ್ಠಾನದ ವಿಶ್ವಸ್ಥರಾದ ಬಾಲಾಜಿ ರಾಘವೇಂದ್ರ ಆಚಾರ್ಯ, ವಿನಯ ಭೂಷಣ ಆಚಾರ್ಯ ಬನ್ನಂಜೆ, ಕೆ.ರಮೇಶ್ರಾವ್ ಬೀಡು, ಕೆ.ಪ್ರಸಾದ್ ಉಪಾಧ್ಯಾಯ, ಸಮಿತಿಯ ಪ್ರಧಾನ ಕಾರ್ಯದರ್ಶಿ ವಾಸುದೇವ ಭಟ್ ಪೆರಂಪಳ್ಳಿ ಉಪಸ್ಥಿತರಿದ್ದರು.