ಬಿ.ಎಂ.ಜಾಫರ್ ಗೆ ಅಬ್ದುಲ್ ಕಲಾಂ ಸದ್ಭಾವನಾ ಪ್ರಶಸ್ತಿ ಪ್ರದಾನ
ಉಡುಪಿ, ಜೂ.6: ಗ್ಲೋಬಲ್ ಅಚೀವರ್ಸ್ ಕೌನ್ಸಿಲ್ ವತಿಯಿಂದ ನೀಡಲಾಗುವ ಭಾರತ ರತ್ನ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಸದ್ಭಾವನ ಪ್ರಶಸ್ತಿಯನ್ನು ಕೆಮ್ಮಣ್ಣು ಹೂಡೆಯ ತೋನ್ಸೆ ಹೆಲ್ತ್ ಸೆಂಟರ್ನ ಸಂಸ್ಥಾಪಕ ಬಿ.ಎಂ.ಜಾಫರ್ ಅವರಿಗೆ ಇತ್ತೀಚೆಗೆ ಪ್ರದಾನ ಮಾಡಲಾಯಿತು.
ವೈದ್ಯಕೀಯ ಹಾಗೂ ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ಅವರ ಅತ್ಯುತ್ತಮ ಸಾಧನೆ ಮತ್ತು ಶ್ರೇಷ್ಠತೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಇತ್ತೀಚೆಗೆ ಹೊಸದಿಲ್ಲಿಯಲ್ಲಿ ನಡೆದ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಳೆದ 15 ವರ್ಷಗಳಿಂದ ತೋನ್ಸೆ ಹೆಲ್ತ್ ಸೆಂಟರ್ ನ್ನು ಯಶಸ್ವಿಯಾಗಿ ನಡೆಸುತ್ತ ಬಂದಿರುವ ಅವರು, ತಮ್ಮ ಅಜ್ಜ ಬೈಕಾಡಿ ಹಸನ್ ಸಾಹೇಬ್ ಹೆಸರಿನ ಟ್ರಸ್ಟ್ ಮೂಲಕ ಸಮಾಜ ಸೇವೆ, ಶೈಕ್ಷಣಿಕ, ಪರಿಸರ ಸಂರಕ್ಷಣೆ ಸಹಿತ ಹಲವು ಸಾಮಾಜಿಕ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ತೊಡಗಿಸಿ ಕೊಂಡಿದ್ದಾರೆ. ಇವರು ದುಬೈನಲ್ಲಿ ವ್ಯವಹಾರ ನಡೆಸುತ್ತಿದ್ದು, ಪ್ರಸಕ್ತ ಯುಎಇಯ ತೋನ್ಸೆ ಕಲ್ಚರಲ್ ಅಸೋಸಿಯೇಷನ್ ನ ಅಧ್ಯಕ್ಷರಾಗಿದ್ದಾರೆ.