ಬೈಂದೂರು: ಈಜಲು ತೆರಳಿದ್ದ ಹಾವೇರಿ ಮೂಲದ ವಿದ್ಯಾರ್ಥಿ ನದಿಯಲ್ಲಿ ಮುಳುಗಿ ಮೃತ್ಯು
ಬೈಂದೂರು: ಪ್ರವಾಸಕ್ಕೆಂದು ಆಗಮಿಸಿದ್ದ ಹಾವೇರಿ ಮೂಲದ ವಿದ್ಯಾರ್ಥಿಯೋರ್ವ ಈಜಲು ತೆರಳಿದ್ದ ವೇಳೆ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಸೋಮವಾರ ಬೆಳಿಗ್ಗೆ ಶಿರೂರು ಸಂಕದಗುಂಡಿ ಹೊಳೆಯಲ್ಲಿ ನಡೆದಿದೆ.
ಆಯುಷ್ (16) ಮೃತಪಟ್ಟ ವಿದ್ಯಾರ್ಥಿ. ಹಾವೇರಿ ಸಮೀಪದ ಕೃಷಿ ನಗರದ ಒಟ್ಟು 7 ಮಂದಿ ಮುರುಡೇಶ್ವರ, ಕನ್ಯಾಕುಮಾರಿ ಪ್ರವಾಸಕ್ಕೆ ಬಂದಿದ್ದರು. ಮುರುಡೇಶ್ವರ ಪ್ರವಾಸ ಮುಗಿಸಿ ಶಿರೂರು ಸಂಕದಗುಂಡಿ ಹೊಳೆಯ ಬಳಿ ವಿಶ್ರಾಂತಿಗೆಂದು ನಿಲ್ಲಿಸಿದ್ದ ಸಂದರ್ಭದಲ್ಲಿ ಮನೆಯವರೆಲ್ಲಾ ಊಟದ ತಯಾರಿಯಲ್ಲಿರುವ ವೇಳೆ ಇಬ್ಬರು ಮಕ್ಕಳು ಪಕ್ಕದಲ್ಲಿರುವ ನದಿಗೆ ಸ್ನಾನಕ್ಕೆ ತೆರಳಿದ್ದರು. ನದಿಯ ಆಳ ಇರುವ ಜಾಗದಲ್ಲಿ ಈಜಲು ತೆರಳಿದ ಕಾರಣ ನೀರಿನ ಆಳ ತಿಳಿಯದೆ ಮುಳುಗಿದ್ದಾನೆ ಎನ್ನಲಾಗಿದೆ. ತಕ್ಷಣ ಇನ್ನೊಬ್ಬ ಸಹೋದರ ಮನೆಯವರಿಗೆ ವಿಷಯ ತಿಳಿಸಿದ್ದು ರಕ್ಷಿಸುವ ಪ್ರಯತ್ನ ಮಾಡಿದರು ಕೂಡ ವಿಫಲವಾಗಿದೆ ಎಂದು ತಿಳಿದು ಬಂದಿದೆ.
ಮೃತ ಬಾಲಕನ ತಂದೆ ತಾಯಿ ಗುಜರಾತ್ನಲ್ಲಿ ಸಣ್ಣ ವ್ಯವಹಾರ ನಡೆಸುತ್ತಿದ್ದು, ಈತ ಅಲ್ಲೇ ಎಸೆಸೆಲ್ಸಿ ವಿದ್ಯಾರ್ಥಿಯಾಗಿದ್ದ ಎನ್ನಲಾಗಿದೆ. ತಾಯಿ ಹಾಗೂ ಇನ್ನೋರ್ವ ಸಹೋದರ ಸೇರಿ ಒಟ್ಟು 7 ಜನ ಪ್ರವಾಸಕ್ಕೆಂದು ಬಂದಿದ್ದರು.
ನದಿಯಲ್ಲಿ ಆಳ ಇರುವ ಕಾರಣ ಅಗ್ನಿಶಾಮಕ ದಳ ಮತ್ತು ಸ್ಥಳೀಯರು ಸುಮಾರು ಒಂದು ಗಂಟೆಗಳ ಕಾಲ ಶೋಧ ಕಾರ್ಯ ನಡೆಸಿ ಮೃತದೇಹವನ್ನು ನೀರಿನಿಂದ ಮೇಲಕ್ಕೆತ್ತಿದರು.
ಬೈಂದೂರು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.