×
Ad

ಬೈಂದೂರು: ರಾಜ್ಯ ಮಟ್ಟದ ಶಿಕ್ಷಕ ಪ್ರಶಸ್ತಿಗೆ ಚಂದ್ರನಾರಾಯಣ ಬಿಲ್ಲವ ಆಯ್ಕೆ

Update: 2025-09-04 19:43 IST

ಬೈಂದೂರು/ಕುಂದಾಪುರ, ಸೆ.4: ಬೈಂದೂರು ತಾಲೂಕು ಶಿರೂರಿನ ಪಿ.ಎಂ.ಶ್ರೀ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಚಂದ್ರನಾರಾಯಣ ಬಿಲ್ಲವ (ಸಿ.ಎನ್.ಬಿಲ್ಲವ) ಶಿರೂರು ಅವರು 2025ನೇ ಸಾಲಿನ ಕರ್ನಾಟಕ ಸರಕಾರದ ಅತ್ಯುತ್ತಮ ಶಿಕ್ಷಕ ರಾಜ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ರಾಜ್ಯದಲ್ಲಿ ಒಟ್ಟು 20 ಮಂದಿ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಈ ಬಾರಿಯ ರಾಜ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಉಡುಪಿ ಜಿಲ್ಲೆಯಿಂದ ಆಯ್ಕೆಯಾದ ಏಕೈಕ ಶಿಕ್ಷಕ ಇವರಾಗಿದ್ದಾರೆ. ಸಿ.ಎನ್.ಬಿಲ್ಲವ ಇವರು 2021ರಲ್ಲಿ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಪ್ರತಿಭಾವಂತ ಶಿಕ್ಷಕರಾದ ಇವರು, ಶಿಕ್ಷಣ ಕ್ಷೇತ್ರದಲ್ಲಿ 31 ವರ್ಷಗಳ ಅನುಭವವನ್ನು ಹೊಂದಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ 60ಕ್ಕೂ ಅಧಿಕ ತರಬೇತಿಗಳಲ್ಲಿ ಭಾಗವಹಿಸಿದ್ದಾರೆ. ಜಿಲ್ಲಾ, ರಾಜ್ಯ ಮಟ್ಟದ ತರಬೇತಿಯ ಜೊತೆಗೆ ಸ್ಕೌಟ್, ಮಾಹಿತಿ ಸಿಂಧು, ಯೋಗ ಮುಂತಾದ ತರಬೇತಿಯನ್ನು ಪಡೆದಿದ್ದಾರೆ.

ಶಿಕ್ಷಕ ವೃತ್ತಿಯೊಂದಿಗೆ ಚಿತ್ರಕಲೆ, ಕ್ಲೇ ಆರ್ಟ್ಸ್, ಕ್ರಾಫ್ಟ್, ಮರಳು ಶಿಲ್ಪ, ಕಲಿಕಾ ಮಾದರಿ ತಯಾರಿ, ಕಥೆ, ಕವನ, ನಾಟಕ ರಚನೆ, ಪತ್ರಿಕೆ ಸಂಪಾದಕತ್ವ, ಸಿಮೆಂಟ್ ಕಲಾಕೃತಿಗಳ ತಯಾರಿ, ಗಾರ್ಡನ್/ತೋಟಗಾರಿಕೆ ಜೊತೆಗೆ ಯೋಗ, ನಾಟಕ ಮತ್ತು ಯಕ್ಷಗಾನದಲ್ಲೂ ತಮ್ಮನ್ನು ತೊಡಗಿಸಿ ಕೊಂಡಿದ್ದಾರೆ. ಶಿಕ್ಷಕ ವೃತ್ತಿಯೊಂದಿಗೆ ಹಳೆ ವಿದ್ಯಾರ್ಥಿ ಸಂಘ, ಶತಮಾನೋತ್ಸವ ಸಮಿತಿ, ಶಾರದೋತ್ಸವ ಸಮಿತಿಗಳಲ್ಲೂ ಇವರು ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಸಿ.ಎನ್.ಬಿಲ್ಲವ ಇವರು ಶಿಕ್ಷಕ ವೃತ್ತಿಯೊಂದಿಗೆ ವಿದ್ಯಾರ್ಥಿಗಳ ಸೃಜನಶೀಲತೆ ಹಾಗೂ ಕೌಶಲ್ಯ ವೃದ್ದಿಸುವ ಹತ್ತಾರು ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ಕ್ಲೇ ಮಾಡಲಿಂಗ್ ವಿಭಾಗದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ ಯಾಗಿದ್ದು, ಜನ ಮೆಚ್ಚಿದ ಶಿಕ್ಷಕ ಪ್ರಶಸ್ತಿ, ನನ್ನ ಶಾಲಾ ಕೈತೋಟ ಪ್ರಶಸ್ತಿ, ಜಿಲ್ಲಾ ಮಟ್ಟದಲ್ಲಿ ಸತತ 8 ಬಾರಿ ಪ್ರಥಮ ಬಹುಮಾನ ಪಡೆದ ಇವರು, 3 ಬಾರಿ ರಾಜ್ಯ ಮಟ್ಟದಲ್ಲಿ ಭಾಗವಹಿಸಿದ್ದಾರೆ. ಒಮ್ಮೆ ರಾಜ್ಯ ಮಟ್ಟದಲ್ಲಿ ಕಲಿಕಾ ಮಾದರಿ ತಯಾರಿಗೆ ಬಹುಮಾನವೂ ಬಂದಿದೆ.

ಉತ್ತಮ ಜನಗಣತಿ ಕಾರ್ಯಕ್ಕೆ ರಾಷ್ಟ್ರಪತಿ ಬೆಳ್ಳಿ ಪದಕವನ್ನು ಇವರು ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News