×
Ad

ಕುಂದಾಪುರದ ಕೊರ್ಗಿ ‘ತಂಬಾಕು ಮುಕ್ತ ಗ್ರಾಮ’ ಘೋಷಣೆಗೆ ಅರ್ಹ

Update: 2023-11-22 20:42 IST

ಉಡುಪಿ : ಜಿಲ್ಲೆಯಲ್ಲಿ ಈಗಾಗಲೇ ಉಡುಪಿ ತಾಲೂಕಿನ ಕೋಡಿಬೆಂಗ್ರೆ ಗ್ರಾಮವನ್ನು ತಂಬಾಕು ಮುಕ್ತ ಗ್ರಾಮವಾಗಿ ಘೋಷಿಸಲಾಗಿದೆ. ಇದರಿಂದ ಅಲ್ಲಿನ ಸ್ಥಳೀಯ ಜನರಿಗೆ ಆಗಿರುವ ಲಾಭಗಳನ್ನು ಇತರೆ ಗ್ರಾಮದವರಿಗೆ ತಿಳಿಸಿ, ಅವರು ತಂಬಾಕು ಉತ್ಪನ್ನಗಳಿಂದ ದೂರ ಇರುವ ಹಾಗೆ ಉತ್ತೇಜಿಸುವ ಕೆಲಸವಾಗಬೇಕು. ಇದೀಗ ಕುಂದಾಪುರ ತಾಲೂಕಿನ ಕೊರ್ಗಿ ಗ್ರಾಮ ಸಹ ‘ತಂಬಾಕು ಮುಕ್ತ ಗ್ರಾಮ’ವಾಗಿ ಘೋಷಿಸಲು ಇರುವ ಎಲ್ಲಾ ಅರ್ಹತೆಗಳನ್ನು ಪಡೆದಿದೆ. ಸರಕಾರದ ಮಾನದಂಡದಂತೆ ಅದನ್ನು ತಂಬಾಕು ಮುಕ್ತ ಗ್ರಾಮ ಎಂದು ಶೀಘ್ರದಲ್ಲಿ ಘೋಷಿಸಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ತಿಳಿಸಿದ್ದಾರೆ.

ಬುಧವಾರ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣ ದಲ್ಲಿ ನಡೆದ ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ಎರಡನೇ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ಬಹುಮಹಡಿಗಳ ವಸತಿ ಸಮುಚ್ಚಯಗಳ ವ್ಯಾಪ್ತಿಯಲ್ಲಿ ಸಹ ತಂಬಾಕು ಉತ್ಪನ್ನಗಳ ಮುಕ್ತ ವಲಯವೆಂದು ಘೋಷಿಸಲು ಅವಕಾಶವಿದ್ದು, ಅಲ್ಲಿನ ಜನರನ್ನು ಮನವೊಲಿಸಬೇಕು ಎಂದ ಡಾ.ವಿದ್ಯಾಕುಮಾರಿ, ಕುಂದಾಪುರ ತಾಲೂಕಿನ ‘ಇಂಪಿರಿಯಲ್ ರೆಸಿಡೆನ್ಸಿ’ ಬಹುಮಹಡಿ ವಸತಿ ಸಮುಚ್ಚಯ ವನ್ನು ಸಹ ಶೀಘ್ರವೇ ತಂಬಾಕು ಮುಕ್ತ ಪ್ರದೇಶವಾಗಿ ಘೋಷಿಸಲಾಗುವುದು ಎಂದರು.

ಜಿಲ್ಲೆಯಲ್ಲಿರುವ ಬೀಡಿ ಕಟ್ಟುವ ಕಾರ್ಮಿಕರುಗಳಿಗೆ ತಂಬಾಕು ಉತ್ಪನ್ನಗಳ ಸೇವನೆಯಿಂದ ಉಂಟಾಗುವ ಪರಿಣಾಮಗಳ ಬಗ್ಗೆ ಅರಿವು ಮೂಡಿಸಿ, ಅವರು ಇತರೆ ಉದ್ಯೋಗಗಳನ್ನು ಕೈಗೊಳ್ಳಲು ತರಬೇತಿ ನೀಡಬೇಕು ಎಂದ ಜಿಲ್ಲಾಧಿಕಾರಿ ಸಲಹೆ ನೀಡಿದರು.

ಉಡುಪಿ ತಾಲೂಕಿನ ಅಲೆವೂರಿನ 75 ಬೀಡಿ ಕಾರ್ಮಿಕರು ಈಗಾಗಲೇ ಬೀಡಿ ಕಟ್ಟುವ ಉದ್ಯೋಗವನ್ನು ಬಿಟ್ಟು ಇತರೆ ಉದ್ಯೋಗವನ್ನು ಮಾಡಲು ಸಂಜೀವಿನಿ ಸ್ವ-ಸಹಾಯ ಸಂಘದ ಸದಸ್ಯರುಗಳಾಗಿ 42 ಮಂದಿ ಈಗಾಗಲೇ ನೋಂದಣಿಗೊಂಡಿದ್ದಾರೆ. ಇವರಿಗೆ ಗ್ರಾಮಪಂಚಾಯತ್‌ನ ಸಹಯೋಗದೊಂದಿಗೆ ಉದ್ಯೋಗ ತರಬೇತಿಯನ್ನು ಮುಂದಿನ ದಿನಗಳಲ್ಲಿ ನೀಡಲಾಗುವುದು ಎಂದರು.

ಗ್ರಾಮಗಳಲ್ಲಿ ಸಮುದಾಯದ ಸಹಭಾಗಿತ್ವದೊಂದಿಗೆ ಅಲ್ಲಿನ ಜನರ ಮನವೊಲಿಸಿ, ತಂಬಾಕು ಉತ್ಪನ್ನಗಳ ಬಳಕೆ ಹಾಗೂ ಮಾರಾಟವನ್ನು ನಿಷೇಧಿಸುವುದರೊಂದಿಗೆ ತಂಬಾಕು ಮುಕ್ತ ಗ್ರಾಮವನ್ನಾಗಿಸಲು ಪ್ರಯತ್ನ ನಡೆಸುವಂತೆ ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ತಂಬಾಕು ಉತ್ಪನ್ನಗಳ ಸೇವನೆಯಿಂದ ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿ ಮಾರಕ ರೋಗಗಳಾದ ಕ್ಯಾನ್ಸರ್, ಹೃದಯ ಸಂಬಂಧಿತ ರೋಗವೂ ಸೇರಿದಂತೆ ವಿವಿಧ ರೋಗಗಳು ಉಂಟಾಗುತ್ತವೆ. ಇಂತಹ ಉತ್ಪನ್ನಗಳಿಂದ ಪ್ರತಿಯೊಬ್ಬರೂ ದೂರ ಇರಬೇಕು. ಈ ಬಗ್ಗೆ ಸಾರ್ವಜನಿಕ ರಲ್ಲಿ ಅರಿವು ಮೂಡಿಸಬೇಕು ಎಂದರು.

ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಕೋಟ್ಪಾ ನಿಯಂತ್ರಣ ತನಿಖಾ ದಳ ವಿವಿದೆಡೆ ದಾಳಿ ನಡೆಸಿ 297 ಪ್ರಕರಣ ದಾಖಲಿಸಿದ್ದು, ಒಟ್ಟು 42300 ರೂ. ದಂಡವನ್ನು ವಿಧಿಸಲಾಗಿದೆ ಎಂದ ಡಿಸಿ, ಕೋಟ್ಪಾ ಕಾಯಿದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಅಧಿಕಾರಿಗಳು ಮುಂದಾಗಬೇಕು ಎಂದರು.

ಸಭೆಯಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಎಚ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ, ಅಪರ ಜಿಲ್ಲಾಧಿಕಾರಿ ಮಮತಾದೇವಿ ಜಿ.ಎಸ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಐ.ಪಿ ಗಢಾದ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ನಾಗರತ್ನ, ಆರೋಗ್ಯ ಇಲಾಖೆಯ ಅಧಿಕಾರಿಗಳು ಅಲ್ಲದೇ ವಿವಿಧ ಇಲಾಖೆಗಳ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.

ತಂಬಾಕು ಹವ್ಯಾಸ ತೊರೆದವರು 107 ಮಂದಿ

ಜಿಲ್ಲೆಯಲ್ಲಿ ತಂಬಾಕು ವ್ಯಸನ ಮುಕ್ತ ಕಾರ್ಯಕ್ರಮದಡಿ 1764 ಜನರನ್ನು ಸಮಾಲೋಚನೆಗೆ ಒಳಪಡಿಸಿದ್ದು, ಇವರಲ್ಲಿ 671 ಮಂದಿ ಆಪ್ತ ಸಮಾಲೋಚನೆ ಪಡೆದಿದ್ದಾರೆ. 1093 ಮಂದಿ ಆಪ್ತ ಸಮಾಲೋಚನೆ ಹಾಗೂ ಫಾರ್ಮಾಕೋಥೆರಪಿ ಯನ್ನು ಪಡೆದರೆ, 107 ಮಂದಿ ತಂಬಾಕು ಉತ್ಪನ್ನಗಳಿಂದ ದೂರು ಉಳಿಯುವ ಸಂಕಲ್ಪ ಮಾಡಿದ್ದಾರೆ ಎಂದು ವಿವರಿಸಿದರು.

ಜಿಲ್ಲೆಯ 784 ಶಾಲೆಗಳಲ್ಲೂ ‘ತಂಬಾಕು ಮುಕ್ತ ವಲಯ’ಗಳೆಂದು ಫಲಕಗಳನ್ನು ಅಳವಡಿಸಲಾಗಿದೆ. ಶಾಲೆಯ 100 ಮೀ. ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟವನ್ನು ನಿಷೇಧಿಸಲಾಗಿದೆ. ಅಲ್ಲದೇ 18 ವರ್ಷದೊಳಗಿನವರಿಗೆ ಬೀಡಿ, ಸಿಗರೇಟ್‌ಗಳನ್ನು ಮಾರಾಟ ಮಾಡುವ ಹಾಗಿಲ್ಲ. ಒಂದೊಮ್ಮೆ ಮಾರಾಟ ಮಾಡುವುದು ಕಂಡುಬಂದಲ್ಲಿ ಅವರುಗಳ ಮೇಲೆ ಕಾನೂನಿನ ಅಡಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದರು.




 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News