ಕೋಟ ಹಂದಟ್ಟು ಮೂಲದ ಡಾ.ಎಚ್.ವಿ.ಹಂದೆಗೆ ಪದ್ಮಶ್ರೀ
ಉಡುಪಿ, ಜ.26: ಎರಡು ತಿಂಗಳ ಹಿಂದಷ್ಟೇ ತಮ್ಮ 99ನೇ ಜನ್ಮದಿನವನ್ನು ಆಚರಿಸಿಕೊಂಡ ತಮಿಳುನಾಡಿನ ಎಂ.ಜಿ.ರಾಮಚಂದ್ರನ್ ನೇತೃತ್ವದ ಸರಕಾರದಲ್ಲಿ ಆರೋಗ್ಯ ಸಚಿವರಾಗಿ ಕಾರ್ಯನಿರ್ವಹಿಸಿದ್ದ ಚೆನ್ನೈನ ಪ್ರಸಿದ್ಧ ವೈದ್ಯ ಡಾ.ಎಚ್.ವಿ.ಹಂದೆ ಅವರಿಗೆ ಈ ಬಾರಿಯ ಪದ್ಮಶ್ರೀ ಪ್ರಶಸ್ತಿ ದೊರಕಿದೆ.
ಡಾ.ಎಚ್.ವಿ.ಹಂದೆ ಅವರು ಉಡುಪಿ ಜಿಲ್ಲೆ ಕೋಟ ಹಂದಟ್ಟಿನ ಪ್ರಸಿದ್ಧ ಹಂದೆ ಕುಟುಂಬದ ಮೂಲದವರು. ಆದರೆ ಹುಟ್ಟಿ ಬೆಳೆದಿದ್ದು ಎಲ್ಲವೂ ತಮಿಳುನಾಡಿನ ಕೊಯಮತ್ತೂರಿನಲ್ಲಿ. ಆದರೆ ಸ್ವಲ್ಪ ಸಮಯ ಅವರು ಮಂಗಳೂರಿನಲ್ಲೂ ಶಿಕ್ಷಣ ಪಡೆದಿದ್ದರು ಎಂಬ ಮಾಹಿತಿ ಇದೆ.
ಬ್ರಿಟಿಷ್ ಆಡಳಿತದಲ್ಲಿ ಕೊಯಮತ್ತೂರಿನಲ್ಲಿ ಪ್ರಸಿದ್ಧ ಸರ್ಜನ್ ಆಗಿದ್ದ ಡಾ.ಎಚ್.ಎಂ.ಹಂದೆ ಅವರ 10 ಮಂದಿ ಮಕ್ಕಳಲ್ಲಿ ಡಾ.ಎಚ್.ವಿ.ಹಂದೆ ಅವರೂ ಒಬ್ಬರು 1927ರ ನ.28ರಂದು ಕೊಯಮತ್ತೂರಿನಲ್ಲಿ ಜನಿಸಿದ್ದ ಹಂದೆ ಅವರು ನೆಲ್ಲೂರು, ಪೆನುಕೊಂಡ, ಮಂಗಳೂರಿನಲ್ಲಿ ಆರಂಭಿಕ ವಿದ್ಯಾಭ್ಯಾಸದ ಬಳಿಕ 1950ರಲ್ಲಿ ವೈದ್ಯಕೀಯ ಪದವಿ ಪಡೆದಿದ್ದರು. 1984ರಿಂದ ಚೆನ್ನೈಯಲ್ಲಿ ‘ಹಂದೆ ಹಾಸ್ಪಿಟಲ್’ನ್ನು ಪ್ರಾರಂಭಿಸಿದ ಅವರ ಮಕ್ಕಳಿಬ್ಬರೂ ಪ್ರಸಿದ್ಧ ವೈದ್ಯರಾಗಿದ್ದು, ಡಾ. ಕೃಷ್ಣ ಹಂದೆ ಸದ್ಯ ಆಸ್ಪತ್ರೆಯ ಆಡಳಿತ ನೋಡಿಕೊಳ್ಳುತಿದ್ದಾರೆ. ಡಾ.ಎಚ್.ವಿ.ಹಂದೆ ಅವರು ಒಂದೆರಡು ವರ್ಷಗಳ ಹಿಂದಿನವರೆಗೂ ವೈದ್ಯರಾಗಿ ತನ್ನ ಆಸ್ಪತ್ರೆಯಲ್ಲಿ ರೋಗಿಗಳನ್ನು ನೋಡಿ ಸಲಹೆ ನೀಡುತ್ತಿದ್ದರು.
ವೈದ್ಯ ವೃತ್ತಿಯ ಜೊತೆಗೆ ಅವರು ಸಕ್ರಿಯ ರಾಜಕಾರಣಿ ಆಗಿಯೂ ಜನಪ್ರಿಯತೆ ಪಡೆದಿದ್ದರು. ಸ್ವತಂತ್ರ ಪಾರ್ಟಿಯೊಂದಿಗೆ ಪ್ರಾರಂಭಗೊಂಡ ಅವರ ರಾಜಕೀಯ ಜೀವನ ಮುಂದೆ ಎಐಎಡಿಎಂಕೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಅರಳಿತು. ಬಳಿಕ ಬಿಜೆಪಿಗೆ ಸೇರ್ಪಡೆಗೊಂಡ ಅವರು ಅಲ್ಲೂ ಕೆಲವು ವರ್ಷ ಸಕ್ರಿಯರಾಗಿದ್ದರು. ಅಣ್ಣಾಡಿಎಂಕೆ ಪಕ್ಷದಲ್ಲಿ ಐದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಡಾ.ಹಂದೆ, ಎರಡು ಅವಧಿಗೆ ಆರೋಗ್ಯ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. ಅವರು ರಾಜಾಜಿ ಹಾಗೂ ಎಂಜಿಆರ್ ಅವರಿಗೆ ಆತ್ಮೀಯರಾಗಿದ್ದರು.
ಕೆಲವು ವರ್ಷಗಳ ಹಿಂದೆ ಅವರು ಬಿಜೆಪಿಯ ನಳಿನ್ಕುಮಾರ್ ಕಟೀಲು ಹಾಗೂ ಸದಾನಂದ ಗೌಡರ ಪರವಾಗಿ ಮಂಗಳೂರು ಮತ್ತು ಉಡುಪಿಗಳಲ್ಲಿ ಚುನಾವಣಾ ಪ್ರಚಾರ ಭಾಷಣಕ್ಕೂ ಆಗಮಿಸಿದ್ದರು. ಮಂಗಳೂರಿನಲ್ಲಿದ್ದಾಗ ಕ್ವಿಟ್ಇಂಡಿಯಾ ಚಳವಳಿಯಲ್ಲಿ ಎಚ್.ವಿ.ಹಂದೆ ಭಾಗವಹಿಸಿದ್ದರು ಎಂದು ಹೇಳಲಾಗಿದೆ. 1964ರಲ್ಲಿ ತಮಿಳುನಾಡು ವಿಧಾನಪರಿಷತ್ಗೆ ಸ್ವತಂತ್ರ ಅಭ್ಯರ್ಥಿಯಾಗಿ ಆಯ್ಕೆಯಾಗುವ ಮೂಲಕ ರಾಜಕೀಯ ರಂಗಕ್ಕೆ ಕಾಲಿರಿಸಿದ ಅವರು ಬಳಿಕ ಸ್ವತಂತ್ರ ಪಾರ್ಟಿ ಸೇರಿದ್ದರು.
1967 ಹಾಗೂ 1971ರಲ್ಲಿ ಅವರು ಸ್ವತಂತ್ರ ಪಾರ್ಟಿಯಿಂದ ಶಾಸಕರಾಗಿ ಆಯ್ಕೆಯಾಗಿದ್ದು, ರಾಜಾಜಿ ಅವರ ನಿಧನದ ಬಳಿಕ ಅಣ್ಣಾಡಿಎಂಕೆ ಪಕ್ಷ ಸೇರಿದ್ದರು. 1980ರಲ್ಲಿ ಅಸೆಂಬ್ಲಿ ಚುನಾವಣೆಯಲ್ಲಿ ಕರುಣಾನಿಧಿ ಕೈಯಲ್ಲಿ ಅಣ್ಣಾನಗರದಲ್ಲಿ 699ಮತಗಳಿಂದ ಸೋಲನನುಭವಿಸಿದ ಬಳಿಕ 1984ರಲ್ಲಿ ವಿಧಾನಪರಿಷತ್ಗೆ ಆಯ್ಕೆಯಾದರು.
ಎಂಜಿಎಂ ರಾಮಚಂದ್ರನ್ ಸರಕಾರದಲ್ಲಿ ಎರಡು ಬಾರಿ (1980-86) ಆರೋಗ್ಯ ಸಚಿವರಾಗಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿ ಶಿಶುಮರಣದ ಸಂಖ್ಯೆ ಹಾಗೂ ಕುಷ್ಠರೋಗವನ್ನು ನಿಯಂತ್ರಣಕ್ಕೆ ತಂದು ಡಾ.ಬಿ.ಸಿ.ರಾಯ್ ಪ್ರಶಸ್ತಿ ಪಡೆದಿದ್ದರು.
1999ರಲ್ಲಿ ಅವರು ಬಿಜೆಪಿಗೆ ಸೇರ್ಪಡೆಗೊಂಡು 2006ರಲ್ಲಿ ಅಣ್ಣಾನಗರದಿಂದ ಸ್ಪರ್ಧಿಸಿ ಸೋಲನನುಭವಿಸಿದರು. ಈಗಲೂ ಅವರು ಪ್ರಸ್ತುತ ರಾಜಕೀಯ ಬೆಳವಣಿಗೆಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸುತಿದ್ದಾರೆ. ಲೇಖಕರಾಗಿ ಅವರು ಕಂಬ ರಾಮಾಯಣವನ್ನು ಇಂಗ್ಲೀಷ್ ಹಾಗೂ ತಮಿಳಿಗೆ ಭಾಷಾಂತರಿಸಿ ಸಾಹಿತ್ಯ ವಲಯದಲ್ಲಿಯೂ ಗುರುತಿಸಿಕೊಂಡಿದ್ದಾರೆ.