ಉಡುಪಿ | ಸಾಲುಮರದ ತಿಮ್ಮಕ್ಕ ಫಲಪುಷ್ಪ ಪ್ರದರ್ಶನ ಸಚಿವರಿಂದ ಉದ್ಘಾಟನೆ
ಉಡುಪಿ, ಜ.26: ನಗರದ ದೊಡ್ಡಣಗುಡ್ಡೆ ಪುಷ್ಟ ಹರಾಜು ಕೇಂದ್ರದ ಆವರಣದಲ್ಲಿ ಸಾಲುಮರದ ತಿಮ್ಮಕ್ಕ ವಿಷಯಾಧಾರಿತ ತೋಟಗಾರಿಕೆ ಇಲಾಖೆಯ ಫಲಪುಷ್ಪ ಪ್ರದರ್ಶನವನ್ನು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಆರ್ ಹೆಬ್ಬಾಳ್ಕರ್ ಅವರು ಉದ್ಘಾಟಿಸಿದರು.
ಮೂರು ದಿನಗಳ ಕಾಲ ನಡೆಯುವ ಈ ಫಲಪುಷ್ಪ ಪ್ರದರ್ಶನದಲ್ಲಿ ಸಾಲುಮರದ ತಿಮ್ಮಕ್ಕನ ಕಲಾಕೃತಿಯನ್ನು ಮೈಸೂರಿನ ಕಲೆಗಾರರು ಮಾಡಿದ್ದು ತಿಮ್ಮಕ್ಕನ ಜೀವನದ ಹಲವು ವಿಷಯಗಳನ್ನು ಇಲ್ಲಿ ವಿವಿಧ ರೀತಿಯಲ್ಲಿ ವಿವರಿಸಲಾಗಿದೆ. ಪದ್ಮಶ್ರೀ ಪ್ರಶಸ್ತಿ ಪಡೆದ ತಿಮ್ಮಕ್ಕನ ಕಲಾಕೃತಿಗಳು ಆಕರ್ಷಕವಾಗಿದ್ದು, ನೋಡುಗರನ್ನು ಸೆಳೆದು ಹುಬ್ಬೇರಿಸುವಂತೆ ಮಾಡುತ್ತವೆ.
ವಿವಿಧ ಬಗೆಯ, ಅಪರೂಪದ ಹಣ್ಣುಗಳ ಪ್ರದರ್ಶನ, ರೈತರು ತಂದ ಪ್ರದರ್ಶಿಕೆಗಳು, ಜಾನೂರ್ ಕಲಾ ರಚನೆ, ಡೋರೆಮಾನ್, ಜೇಂಕಾರ ಹೀಗೆ ಹಲವಾರು ಪ್ರದರ್ಶಿಕೆಗಳು ಜನರನ್ನು ಕೈಬಿಸಿ ಕರೆಯುತ್ತಿವೆ.
ಸ್ಥಳೀಯವಾಗಿ ಗೊಂಡೆ ಹೂಗಳನ್ನು ಉತ್ಪಾದಿಸಿ, ಪೆಟೂನಿಯ, ಇಂಫೆಸಿಯಂ, ಡಯಾಂಥಸ್, ಕಳಂಚೊ ಮುಂತಾದ ಸಾವಿರಾರು ಆಕರ್ಷಕ ಹೂವಿನ ಕುಂಡಗಳನ್ನು ವಿವಿದೆಡೆಗಳಿಂದ ತಂದು ಜೋಡಣೆ ಮಾಡಲಾಗಿದೆ. 50ಕ್ಕೂ ಹೆಚ್ಚಿನ ಮಳಿಗೆಗಳನ್ನು ತೆರೆಯಲಾಗಿದ್ದು ಮೂರು ದಿನ ಸಾರ್ವಜನಿಕರಿಗೆ ಪ್ರದರ್ಶನದ ಸೊಬಗನ್ನು ನೋಡಲು ಅವಕಾಶ ಕಲ್ಪಿಸಲಾಗಿದೆ.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ್ ಹಟ್ಟಿಹೊಳಿ, ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ.ಗಫೂರ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಅಶೋಕ್ಕುಮಾರ್ ಕೊಡವೂರು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ್ ಹೇರೂರು, ಜಿಲ್ಲಾಧಿಕಾರಿ ಟಿ.ಕೆ.ಸ್ವರೂಪ, ಜಿಲ್ಲಾ ಪಂಚಾಯತ್ ಸಿಇಒ ಪ್ರತೀಕ್ ಬಾಯಲ್, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.