ತಮಿಳುನಾಡು ಮೂಲದವರಿಂದ ಸುಳ್ಳು ಜಾತಿ ಸರ್ಟಿಫಿಕೇಟ್: ಎಸ್ಸಿ-ಎಸ್ಟಿ ಕುಂದುಕೊರತೆ ಸಭೆಯಲ್ಲಿ ಕ್ರಮಕ್ಕೆ ಆಗ್ರಹ
ಉಡುಪಿ, ಜು.18: ಉದ್ಯೋಗ ಅರಸಿ ತಮಿಳುನಾಡಿನಿಂದ ಆಗಮಿಸುವ ಕಾರ್ಮಿಕರು ಉಡುಪಿಯಲ್ಲಿ ಸುಳ್ಳು ಜಾತಿ ಸರ್ಟಿಫಿಕೇಟ್ನ್ನು ಪಡೆಯುತಿದ್ದು, ಈ ಬಗ್ಗೆ ನಾವು ನೀಡಿದ ದೂರಿನ ಆಧಾರದಲ್ಲಿ ಡಿಸಿಇಆರ್ ಪೊಲೀಸ್ ಠಾಣೆಯಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಪರಿಶಿಷ್ಟ ಜಾತಿ ಮತ್ತು ಪಂಗಡದ ಜಿಲ್ಲಾ ಮುಖಂಡರು ಪೊಲೀಸ್ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.
ಬನ್ನಂಜೆಯಲ್ಲಿರುವ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ಇಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಮಟ್ಟದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಕುಂದುಕೊರತೆ ಸಭೆಯಲ್ಲಿ ಜಿಲ್ಲೆಯ ಮುಖಂಡರು ಈ ವಿಷಯ ಪ್ರಸ್ತಾಪಿಸಿ ಕ್ರಮಕ್ಕೆ ಒತ್ತಾಯಿಸಿದರು.
ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಭಾಗವಹಿಸಿದ್ದರು. ಜಿಲ್ಲೆಯ 53 ಮಂದಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮುಖಂಡರು ಹಾಗೂ ಸಮುದಾಯದ ಪ್ರಮುಖರು ಇಂದಿನ ಸಭೆಯಲ್ಲಿ ಭಾಗವಹಿಸಿದ್ದರು.
ಜಿಲ್ಲೆಯಲ್ಲಿ ಸಮುದಾಯದವರ ಸಮಸ್ಯೆಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ಉತ್ತಮವಾಗಿ ಸ್ಪಂದಿಸುತ್ತಿದ್ದು, ಇದೇ ರೀತಿ ಇತರೇ ಇಲಾಖೆ ಯವರು ಸಹ ಹೀಗೆ ಸ್ಫಂದಿಸುವಂತೆ ದಲಿತ ಮುಖಂಡರು ಮನವಿ ಮಾಡಿದರು.
ಹೆಚ್ಚಿನ ಬಾರಿ ಎಸ್ಸಿ/ಎಸ್ಟಿ ಅವರು ಪ್ರಕರಣ ದಾಖಲಿಸಿದಾಗ,ನ್ಯಾಯ ಯುತವಾಗಿ ದೊರೆಯಬೇಕಿದ್ದ ಪರಿಹಾರ ಸಿಗುತ್ತಿಲ್ಲ ಎಂದು ಬಹಳಷ್ಟು ದಲಿತ ಮುಖಂಡರು ದೂರಿದರು. ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವಂತೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಎಸ್ಪಿಯವರು ಸೂಚಿಸಿದರು.
ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆಯುವ ವಿಜಿಲೆನ್ಸ್ ಸಮಿತಿಯ ಸದಸ್ಯ ರನ್ನು ಬದಲಾಯಿಸುವಂತೆ ದಲಿತರು ಮನವಿ ಸಲ್ಲಿಸಿದರು. ಶಂಕರ ನಾರಾಯಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಲಿತರ ಏಳಿಗೆಗೆ, ಅಭಿವೃದ್ಧಿಗೆ ಸರಕಾರದಿಂದ ನೀಡಲಾಗುವ ಹಣ ದುರ್ಬಳಕೆ ಆಗುತ್ತದೆ ಎಂದು ಹಲವರು ಸಭೆಯಲ್ಲಿ ದೂರಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸುವ ಕುರಿತು ಸಮಾಜ ಕಲ್ಯಾಣ ಇಲಾಖೆಯವರಿಗೆ ಸೂಚಿಸಲಾಯಿತು.
ದಲಿತರಿಗೆ ಸಹಾಯ ಮಾಡಲು ಪ್ರತಿಯೊಂದು ಜಿಲ್ಲೆಯಲ್ಲಿಯೂ ಡಿಸಿಆರ್ಇ ಠಾಣೆ ಸ್ಥಾಪನೆಯಾಗಿದ್ದು, ಆದರೆ ಅದಕ್ಕೆ ಅಗತ್ಯವಿರುವ ಅಧಿಕಾರಿ ಹಾಗೂ ಸಿಬ್ಬಂದಿಗಳ ನೇಮಕಾತಿ ನಡೆದಿಲ್ಲ.ಇದರಿಂದ ದಲಿತರಿಗೆ ನ್ಯಾಯ ದೊರೆಯಲು ವಿಳಂಬವಾಗುತ್ತಿದೆ ಎನ್ನುವ ಬಗ್ಗೆ ಸರಕಾರದ ಗಮನ ಸೆಳೆಯುವಂತೆ ಕೋರಲಾಯಿತು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಪ್ರಕರಣದಲ್ಲಿ ಆರೋಪಿಗಳು ನ್ಯಾಯಾಲಯದಿಂದ ತಡೆ ಆಜ್ಞೆ ತರುತ್ತಿದ್ದು, ಅದನ್ನು ತೆರವುಗೊಳಿಸುವ ಬಗ್ಗೆ ಡಿಸಿಆರ್ಬಿ ಠಾಣೆಯವರು ಸರಿಯಾಗಿ ಕ್ರಮ ಕೈಗೊಳ್ಳದೇ ಇರುವ ಬಗ್ಗೆ ಸಭೆಯಲ್ಲಿ ದಲಿತ ಮುಖಂಡರು ದೂರಿದರು. ಈ ಬಗ್ಗೆ ಕೂಡಲೇ ಸೂಕ್ತ ಕ್ರಮ ಕೈಗೊಳ್ಳುವಂತೆ ಡಿಸಿಆರ್ಇರಿಗೆ ಸೂಚನೆ ನೀಡಲಾಯಿತು.