ಭಾರತೀಯ ಡೆಂಟಲ್ ಅಸೋಸಿಯೇಶನ್ : ಉಡುಪಿ ಜಿಲ್ಲಾ ಪದಾಧಿಕಾರಿಗಳ ಪದಗ್ರಹಣ
ಉಡುಪಿ, ಜ.28: ದಂತ ವೈದ್ಯರು ರೋಗಿಗಳ ಆರೋಗ್ಯದ ಜತೆಗೆ ಸಾಮಾಜಿಕ ಜವಾಬ್ದಾರಿಯನ್ನು ಹೊತ್ತಿದ್ದಾರೆ. ತಾಂತ್ರಿಕ ಹಾಗೂ ವೃತ್ತಿಪರ ಸವಾಲುಗಳನ್ನು ಸಮರ್ಪಕವಾಗಿ ಎದುರಿಸಿದರೆ ಸಂಸ್ಥೆಯ ಏಳಿಗೆಗೂ ಸೇವೆಯ ಗುಣಮಟ್ಟಕ್ಕೂ ಉತ್ತೇಜನ ಸಿಗುತ್ತದೆ ಎಂದು ದಂತ ವೈದ್ಯ ಡಾ. ವಿಜಯೇಂದ್ರ ರಾವ್ ಹೇಳಿದ್ದಾರೆ.
ಕಲ್ಸಂಕ ಟೈಮ್ಸ್ ಸ್ಕ್ವೇರ್ ಸಮುಚ್ಚಯದಲ್ಲಿರುವ ಓಷಿಯನ್ ಪರ್ಲ್ ಹೊಟೇಲ್ ಸಭಾಂಗಣದಲ್ಲಿ ರವಿವಾರ ನಡೆದ ಭಾರತೀಯ ಡೆಂಟಲ್ ಅಸೋಸಿಯೇಶನ್(ಐಡಿಎ) ಉಡುಪಿ ಜಿಲ್ಲಾ ಶಾಖೆಯ ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಿ ಅವರು ಮಾತನಾಡುತಿದ್ದರು.
ನೂತನ ಅಧ್ಯಕ್ಷ ಡಾ.ಸಯ್ಯದ್ ಮೊಹಮ್ಮದ್ ಫೈಜ್ ಮಾತನಾಡಿ, ಆರೋಗ್ಯ ವಿಚಾರದ ಕುರಿತು ಸಾರ್ವಜನಿಕ ರೊಂದಿಗೆ ಸಂವಹನ ಮತ್ತು ಜಾಗೃತಿ ಮೂಡಿಸುವುದು, ಪಾನ್ ಗುಟ್ಕಾ, ತಂಬಾಕು, ಮದ್ಯಪಾನದಂತಹ ಮಾದಕ ಪದಾರ್ಥಗಳಿಗೆ ದಾಸರಾಗದಂತೆ ಮಾಹಿತಿ, ಸಲಹೆ ನೀಡುವುದು, ರಸ್ತೆ ನಿಯಮ ಪಾಲಿಸುವ ಬಗ್ಗೆ ಮಾಹಿತಿ, ನಿರಂತರ ವೈದ್ಯಕೀಯ ಶಿಕ್ಷಣ ಇತ್ಯಾದಿ ಕಾರ್ಯಚಟುವಟಿಕೆಗಳನ್ನು ವ್ಯವಸ್ಥಿತವಾಗಿ ನಡೆಸಲು ಎಲ್ಲ ಸದಸ್ಯರನ್ನು ಒಗ್ಗೂಡಿಸಿಕೊಂಡು ಹೋಗುವತ್ತ ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.
ಖಜಾಂಚಿ ಡಾ.ತೇಜಕಿರಣ್ ಶೆಟ್ಟಿ, ಪದಾಧಿಕಾರಿಗಳು, ಉಪಸ್ಥಿತರಿದ್ದರು. ಡಾ.ಶಿಹಾನ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಡಾ.ಗೌತಮ್ ರಾವ್ ವಂದಿಸಿದರು. ದಂತ ವೈದ್ಯರಿಂದ ಮನೋರಂಜನಾ ಸ್ಪರ್ಧೆ ಕೂಟ ಡೆಂಟೋಫೆಸ್ಟ್-2026 ನಡೆಯಿತು.