ಕುಂದಾಪುರ: ಕಳೆದ 3 ದಶಕಗಳಿಂದಲೂ ಕರಾವಳಿ ಜನರ ಜೀವನಾಡಿಯಾಗಿದ್ದು ಕರಾವಳಿ ಕರ್ನಾಟಕ ಹಾಗೂ ದೇಶದ ವಾಣಿಜ್ಯ ನಗರಿ ಮುಂಬಯಿ ಬೆಸೆಯುವ ಕೊಂಕಣ ರೈಲ್ವೆಯು ಆರಂಭಗೊಂಡು 35 ವರ್ಷ ಕಳೆದರೂ, ಕರ್ನಾಟಕದ ಕೊಂಕಣ ರೈಲ್ವೆ ವ್ಯಾಪ್ತಿಯ ಯಾವ ನಿಲ್ದಾಣದಲ್ಲೂ ಮೂಲಭೂತ ಅಗತ್ಯಗಳಲ್ಲಿ ಒಂದಾದ ರೈಲಿಗೆ ನೀರು ತುಂಬುವ ವ್ಯವಸ್ಥೆಯೇ (ವಾಟರಿಂಗ್ ಸಿಸ್ಟಮ್) ಕಲ್ಪಿಸಿಲ್ಲ.

ಮಂಗಳೂರು ಜಂಕ್ಷನ್ ಹೊರತುಪಡಿಸಿ, ಕರಾವಳಿಯ ಯಾವುದೇ ರೈಲು ನಿಲ್ದಾಣಗಳಲ್ಲಿ ಈ ವಾಟರಿಂಗ್ ಸಿಸ್ಟಮ್ ಇಲ್ಲ. ಮಂಗಳೂರು ಜಂಕ್ಷನ್ ನಿಲ್ದಾಣ ಸದರ್ನ್ ರೈಲ್ವೆ ವ್ಯಾಪ್ತಿಯಲ್ಲಿ ಬರುತ್ತದೆ. ಕೊಂಕಣ ರೈಲ್ವೆ ಆರಂಭಗೊಂಡು 35 ವರ್ಷಗಳ ಬಳಿಕವೂ ಇಂದಿಗೂ ರೈಲುಗಳಿಗೆ ನೀರು ತುಂಬುವ ಮತ್ತು ರೈಲುಗಳನ್ನು ನಿಲುಗಡೆಗೆ ಮಾಡುವ ವ್ಯವಸ್ಥೆ ಕರ್ನಾಟಕದ ಪ್ರಮುಖ ಯಾವುದೇ ನಿಲ್ದಾಣಗಳಲ್ಲಿ ಇಲ್ಲದಾಗಿದೆ.

ಏನಿದು ವಾಟರಿಂಗ್ ಸಿಸ್ಟಮ್: ರೈಲುಗಳಲ್ಲಿ ಪ್ರಯಾಣಿಕರ (ಶೌಚಾಲಯ, ಮುಖ, ಕೈ ತೊಳೆಯಲು, ಸ್ನಾನ) ಬಳಕೆಗೆ ನೀರನ್ನು ತುಂಬಿಸುವ ಪ್ರಕ್ರಿಯೆಗೆ ವಾಟರಿಂಗ್ ಸಿಸ್ಟಮ್ ಎಂದು ಕರೆಯಲಾಗುತ್ತದೆ. ಇದು ಎಲ್ಲ ನಿಲ್ದಾಣಗಳಲ್ಲಿಯೂ ಇರುವುದಿಲ್ಲ. ಆದರೆ ಪ್ರಮುಖ ನಿಲ್ದಾಣಗಳಲ್ಲಿ ಮಾತ್ರ ವಾಟರಿಂಗ್ ಸಿಸ್ಟಮ್ ಇರುತ್ತದೆ.

ಸಾಮಾನ್ಯವಾಗಿ ಪ್ರತಿ 300ರಿಂದ 400ಕಿ.ಮೀ.ನೊಳಗೆ ಇದಕ್ಕಾಗಿ ವಾಟರಿಂಗ್ ಸ್ಟೇಷನ್‌ಗಳನ್ನು ಗುರುತಿಸಲಾಗುತ್ತದೆ. ಪ್ರತೀ ಬೋಗಿಯಲ್ಲೂ 1,800ಲೀ. ನೀರಿನ ಸಂಗ್ರಹ ಸಾಮರ್ಥ್ಯವಿರುತ್ತದೆ. ಇಡೀ ರೈಲಿಗೆ ಒಮ್ಮೆ ಅಂದಾಜು 50 ಸಾವಿರದಿಂದ 1 ಲಕ್ಷ ಲೀಟರ್‌ನಷ್ಟು ನೀರು ತುಂಬಿಸಲಾಗುತ್ತದೆ. ಅದಕ್ಕಾಗಿ ಹಿಂದೆ ಸುಮಾರು ಅರ್ಧ- ಮುಕ್ಕಾಲು ಗಂಟೆ ಬೇಕಾಗುತ್ತಿತ್ತು. ಈಗ ಆಧುನಿಕ ವ್ಯವಸ್ಥೆಯಲ್ಲಿ 10 ನಿಮಿಷಗಳಲ್ಲಿ ಆಗುತ್ತದೆ.

ಉಡುಪಿ, ಕುಂದಾಪುರವೇ ಸೂಕ್ತ: ಮಂಗಳೂರು ಜಂಕ್ಷನ್ ಬಿಟ್ಟರೆ ಮಡಗಾಂವ್‌ನಲ್ಲಿ ಈ ನೀರು ತುಂಬುವ ವ್ಯವಸ್ಥೆಯಿದೆ. ಅಂದರೆ ಮಂಗಳೂರಿನಿಂದ 331ಕಿ.ಮೀ. ದೂರವಾಗುತ್ತದೆ. ಮಂಗಳೂರಿಗಿಂತ ಹಿಂದೆ ಹಾಸನದಲ್ಲಿದೆ.

ಅದಕ್ಕಾಗಿ ಕೊಂಕಣ ರೈಲ್ವೆ ವ್ಯಾಪ್ತಿಯ ಪ್ರಮುಖ ನಿಲ್ದಾಣಗಳಾದ ಉಡುಪಿ ಅಥವಾ ಕುಂದಾಪುರ ನಿಲ್ದಾಣಗಳನ್ನು ವಾಟರಿಂಗ್ ಸ್ಟೇಶನ್ ಆಗಿ ಮಾಡಿದರೆ, ಕರಾವಳಿ ಭಾಗಕ್ಕೆ ಅನುಕೂಲ ಆಗಲಿದೆ ಎನ್ನುವುದು ಈ ಭಾಗದ ರೈಲ್ವೆ ಬಳಕೆದಾರರ ಒತ್ತಾಯ. ವಾರಾಹಿ ನದಿಯು ಮೂಡ್ಲಕಟ್ಟೆಯ ನಿಲ್ದಾಣಕ್ಕಿಂತ ಕೆಲವೇ ಕಿ.ಮೀ. ದೂರದಲ್ಲಿ ಹರಿಯುವುದರಿಂದ ನೀರಿನ ಪೂರೈಕೆಗೆ ವರ್ಷಪೂರ್ತಿ ಸಮಸ್ಯೆಯಾಗದು. ಹಾಗಾಗಿ ಕುಂದಾಪುರದಲ್ಲಿಯೇ ಹೆಚ್ಚು ಸೂಕ್ತ ಅನ್ನುವ ಅಭಿಪ್ರಾಯ ಇಲ್ಲಿನವರದಾಗಿದೆ.

ಬೆಂಗಳೂರಿನಿಂದ ಹಬ್ಬದ ಸಂದರ್ಭಗಳಲ್ಲಿ ವಿಶೇಷ ರೈಲುಗಳ ಬೇಡಿಕೆ ಇರುತ್ತದೆ. ಪಡೀಲ್ ಬೈಪಾಸ್ ಮೂಲಕ ಸಂಚರಿಸುವ ಕುಂದಾಪುರ, ಕಾರವಾರ ಕಡೆಗೆ ಸಂಚರಿಸುವ ಈ ವಿಶೇಷ ರೈಲಿಗೆ ಸಮಸ್ಯೆಯಾಗಲಿದೆ. ಪಂಚಗಂಗಾ ಎಕ್ಸ್‌ಪ್ರೆಸ್ ರೈಲು ಕೂಡ ಈ ಪಡೀಲ್ ಮಾರ್ಗವಾಗಿಯೇ ಸಂಚರಿಸುತ್ತಿದೆ.

ಅದಕ್ಕಾಗಿ ಕುಂದಾಪುರ ಅಥವಾ ಉಡುಪಿಯಲ್ಲಿ ರೈಲಿಗೆ ನೀರು ತುಂಬುವ ವ್ಯವಸ್ಥೆ ಅಗತ್ಯವಾಗಿದೆ. ಇನ್ನು ರೈಲುಗಳ ನಿಲುಗಡೆಗೆ ಪ್ರಮುಖ ನಿಲ್ದಾಣಗಳಲ್ಲಿ ಸ್ಟೇಬಲ್ ಲೈನ್ ಅಥವಾ ಪಾರ್ಕಿಂಗ್ ವ್ಯವಸ್ಥೆಯಿಲ್ಲ. ಬೆಂಗಳೂರಿನಿಂದ ಬರುವ ವಿಶೇಷ ರೈಲುಗಳಿಗೆ ಇದು ಸಮಸ್ಯೆಯಾಗುತ್ತಿದೆ.

ಮಂಗಳೂರು ಬಳಿಯ ತೋಕೂರಿನಿಂದ ಮಹಾರಾಷ್ಟ್ರದ ರೋಹಾದವರೆಗೆ ಕೊಂಕಣ ರೈಲ್ವೆ ಮಾರ್ಗ ಹಾದುಹೋಗುತ್ತದೆ. ರಾಜ್ಯದ ಸುರತ್ಕಲ್, ಮೂಲ್ಕಿ, ಪಡುಬಿದ್ರಿ, ಇನ್ನಜೆ, ಉಡುಪಿ, ಬಾರ್ಕೂರು, ಕುಂದಾಪುರ, ಸೇನಾಪುರ, ಬಿಜೂರು, ಬೈಂದೂರು, ಭಟ್ಕಳ, ಮುರ್ಡೇಶ್ವರ, ಕುಮಟಾ, ಕಾರವಾರದಲ್ಲಿ ಕೊಂಕಣ ರೈಲ್ವೆಯ ನಿಲ್ದಾಣಗಳಿವೆ.


‘ಕುಂದಾಪುರ ಅಥವಾ ಉಡುಪಿಯಲ್ಲಿ ವಾಟರಿಂಗ್ ಸ್ಟೇಶನ್ ಆರಂಭಿಸಲು ಕೊಂಕಣ ರೈಲ್ವೆ ಜತೆ ಮಾತುಕತೆ ನಡೆಸಲಾಗಿದೆ. ಅದಕ್ಕೆ ಅನುದಾನವೂ ಮೀಸಲಿಡಲಾಗಿದೆ. ಎಲ್ಲಿ ಆದರೆ ಆರಂಭಿಸಬಹುದು? ಮತ್ತು ನೀರಿನ ಲಭ್ಯತೆ ಹೇಗೆ ಎನ್ನುವ ಬಗ್ಗೆ ಉಡುಪಿ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ’

-ಕೋಟ ಶ್ರೀನಿವಾಸ ಪೂಜಾರಿ, ಸಂಸದರು, ಉಡುಪಿ


‘ಪ್ರಮುಖ ರೈಲು ನಿಲ್ದಾಣಗಳಲ್ಲಿ ರೈಲಿಗೆ ನೀರು ತುಂಬುವ ವ್ಯವಸ್ಥೆ ರೈಲ್ವೆ ಸೇವೆಯಲ್ಲಿ ಮೂಲಭೂತ ಅಗತ್ಯಗಳಲ್ಲೊಂದಾಗಿದೆ. ನಮ್ಮ ರಾಜ್ಯದ ಕೊಂಕಣ ರೈಲ್ವೆ ವ್ಯಾಪ್ತಿಯಲ್ಲಿ ಇನ್ನೂ ಆರಂಭಗೊಂಡಿಲ್ಲ. ಈ ಬಗ್ಗೆ ಕೊಂಕಣ ರೈಲ್ವೆಯವರಿಗೆ ಕೇಳಿದರೆ 2 ಕೋಟಿ ರೂ. ಅನುದಾನವಿದೆ ಎನ್ನುತ್ತಾರೆ. ಜಿಲ್ಲಾಡಳಿತ ಆದಷ್ಟು ಬೇಗ ಇದಕ್ಕೆ ಸ್ಪಂದಿಸಿ, ಸೂಕ್ತ ತೀರ್ಮಾನಕೈಗೊಳ್ಳಬೇಕು’

-ಗಣೇಶ್ ಪುತ್ರನ್, ಸದಸ್ಯರು, ಕೊಂಕಣ ರೈಲ್ವೆ ಬಳಕೆದಾರರ ಸಲಹಾ ಸಮಿತಿ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor