ಕುಂದಾಪುರ ಸಂತೆ ಮಾರುಕಟ್ಟೆ: ಜನರಿಗೆ ಕೊಳಚೆ ನೀರಿನ ಸ್ನಾನ !
ಕುಂದಾಪುರ, ಜು.27: ಪ್ರತಿ ಶನಿವಾರ ನಡೆಯುವ ಕುಂದಾಪುರದ ಸಂತೆ ಜಿಲ್ಲೆಯ ಅತಿ ದೊಡ್ಡ ಸಂತೆಗಳಲ್ಲಿ ಒಂದಾಗಿದೆ. ಮಳೆಗಾಲದ ಸಂದರ್ಭದಲ್ಲಿ ಕುಂದಾಪುರದ ವಾರದ ಸಂತೆ ಮಾರುಕಟ್ಟೆಗೆ ಬರುವ ವ್ಯಾಪಾರಸ್ಥರು ಮತ್ತು ಖರೀದಿಗೆ ಬರುವ ಗ್ರಾಹಕರಿಗೆ ಕೊಳಚೆ ನೀರಿನ ಸ್ನಾನ ಮಾತ್ರ ತಪ್ಪಿದ್ದಲ್ಲ.
ಸಂತೆ ಮಾರುಕಟ್ಟೆ ಮುಂಭಾಗದ ಚರಂಡಿಯಲ್ಲಿ ಕೊಳಚೆ ನೀರು ಹರಿಯುತ್ತಿದೆ. ಇದು ಚರಂಡಿಯನ್ನು ಮೀರಿ ಕೆಲವೊಮ್ಮೆ ರಸ್ತೆ ಮೇಲೆ ಹರಿಯುತ್ತಿರುತ್ತದೆ. ಇದರಿಂದ ಸಂತೆಗೆ ಪ್ರತೀ ವಾರ ಬರುವ ವರ್ತಕರು ಹಾಗೂ ಗ್ರಾಹಕರಿಗೆ ಕೊಳಚೆ ನೀರು ಹಾಗೂ ಮಳೆ ನೀರಿನಿಂದ ಬಾರೀ ಸಮಸ್ಯೆಯಾಗುತ್ತಿದೆ.
ಪ್ರತೀ ಶನಿವಾರ ಕುಂದಾಪುರದ ಎಪಿಎಂಸಿ ಪ್ರಾಂಗಣದಲ್ಲಿ ನಡೆಯುವ ವಾರದ ಸಂತೆಯು ಅವಿಭಜಿತ ಕುಂದಾಪುರ ತಾಲೂಕಿನಲ್ಲೇ ನಡೆಯುವ ದೊಡ್ಡ ಸಂತೆಯಲ್ಲೊಂದಾಗಿದ್ದು ಇಲ್ಲಿ ಲಕ್ಷಾಂತರ ರೂ. ವ್ಯವಹಾರ ನಡೆಯುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಇಲ್ಲಿ ಕಂಡುಬರುತ್ತಿರುವ ನಿರ್ವಹಣೆ ಸಮಸ್ಯೆಯಿಂದ ಇಲ್ಲಿಗೆ ಬರುವ ಜನರು, ಬೇರೆ ಬೇರೆ ಊರುಗಳಿಂದ ವ್ಯಾಪಾರಕ್ಕಾಗಿ ಬರುವ ವರ್ತಕರು ಕೂಡ ನಿತ್ಯ ಕಿರಿಕಿರಿ ಅನುಭವಿಸುವಂತಾಗಿದೆ.
ಕೊಳಚೆ ಮೋರಿಯೇ ಸ್ವಾಗತ: ಸಂತೆಗೆ ಪ್ರವೇಶಿಸುವ ದ್ವಾರ ಇರುವ ಹೆದ್ದಾರಿ ಬಳಿಯ ಸರ್ವಿಸ್ ರಸ್ತೆಯ ಚರಂಡಿ ಯಲ್ಲಿ ಭಾರೀ ಪ್ರಮಾಣದ ಕೊಳಚೆ ನೀರು ತುಂಬಿಕೊಂಡಿದ್ದು, ಇದರಿಂದ ಜನರಿಗೆ ತೊಂದರೆಯಾಗುತ್ತಿದೆ. ಆಗಾಗ ಇದರ ನೀರು ಸಿಡಿದು ಜನರಿಗೆ ಕೊಳಚೆ ನೀರಿನ ಸ್ನಾನವೂ ನಡೆಯುತ್ತದೆ.
ಲಕ್ಷಾಂತರ ರೂ. ವಹಿವಾಟು ಇರುವ ಕುಂದಾಪುರದ ವಾರದ ಸಂತೆಗೆ ಸುಮಾರು 60-70 ವರ್ಷಗಲಸಿಗೂ ಹೆಚ್ಚು ಕಾಲದ ಇತಿಹಾಸವಿದೆ. ಉಡುಪಿ, ಮಂಗಳೂರು ಮಾತ್ರವಲ್ಲದೆ, ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ, ದಾವಣಗೆರೆ, ಬಳ್ಳಾರಿ ಸಹಿತ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ನೂರಾರು ಮಂದಿ ವ್ಯಾಪಾರಿಗಳು ಇಲ್ಲಿಗೆ ದಿನಸಿ, ಹಣ್ಣು, ತರಕಾರಿ, ಇನ್ನಿತರ ವಸ್ತುಗಳನ್ನು ಮಾರಾಟ ಮಾಡಲು ಪ್ರತೀ ವಾರ ಬರುತ್ತಾರೆ.
ನಗರ ಭಾಗದ ಜನರು ಮಾತ್ರವಲ್ಲದೆ, ಕುಂದಾಪುರ, ಬೈಂದೂರು ತಾಲೂಕಿನ ಗ್ರಾಮೀಣ ಭಾಗದ ಸಾವಿರಾರು ಜನರು ವಾರಕ್ಕೊಮ್ಮೆ ಅಗತ್ಯ ವಸ್ತುಗಳ ಖರೀದಿಗಾಗಿ ಸಂತೆಗೆ ಬರುತ್ತಾರೆ. ಗ್ರಾಮೀಣ ಭಾಗದ ಸೊಪ್ಪು, ತರಕಾರಿ, ನಾಟಿಕೋಳಿ, ಮೊಟ್ಟೆಗಳು, ಒಣಮೀನು, ಗೆಣಸು, ಮೊದಲಾದವು ಇಲ್ಲಿ ಸ್ಪಲ್ಪ ಅಗ್ಗದಲ್ಲಿ ದೊರೆಯುತ್ತವೆ.
ಹೆದ್ದಾರಿ ಇಲಾಖೆಗೆ ಮನವಿ: ಸಂತೆ ಮಾರುಕಟ್ಟೆಯ ಮುಂಭಾಗದ ಚರಂಡಿಯಲ್ಲಿ ಕೊಳಚೆ ನೀರು ಹರಿಯುವ ಸಂಬಂಧ ನಾವು ಅನೇಕ ಬಾರಿ ಪುರಸಭೆಯಿಂದ ಹೆದ್ದಾರಿ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ಈ ಹೆದ್ದಾರಿ ಕಾಮಗಾರಿ ನಿರ್ವಹಿಸುವ ಐಆರ್ಬಿಯವರ ಗಮನಕ್ಕೂ ತರಲಾಗಿದೆ. ಆದರೆ ಇದುವರೆಗೆ ಇದರಿಂದ ಯಾವುದೇ ಪ್ರಯೋಜನವಾಗಿಲ್ಲ ಎಂದು ಮಾಜಿ ಪುರಸಭಾ ಸದಸ್ಯ ಶ್ರೀಧರ್ ಶೇರೆಗಾರ್ ಹೇಳುತ್ತಾರೆ.