ಉಡುಪಿ ಜಿಲ್ಲೆಯ ಪೊಲೀಸ್ ಬ್ಯಾರಿಕೇಡ್ಗಳ ಮರುನವೀಕರಣ
ಉಡುಪಿ, ಜು.27: ಜಿಲ್ಲೆಯಾದ್ಯಂತ ಆಯಾಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದುರಸ್ತಿಗೊಂಡಿರುವ ಪೊಲೀಸ್ ಬ್ಯಾರಿಕೇಡ್ಗಳ ಮರುನವೀಕರಣ ಹಾಗೂ ಮೇಲ್ದರ್ಜೆಗೇರಿಸುವ ಮಹತ್ವದ ಕಾರ್ಯಕ್ಕೆ ಖಾಸಗಿ ಸಂಸ್ಥೆಯೊಂದರ ವತಿಯಿಂದ ಚಾಲನೆ ನೀಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ತಿಳಿಸಿದ್ದಾರೆ.
ಈ ಯೋಜನೆಯ ಪ್ರಥಮ ಹಂತದಲ್ಲಿ ದುರಸ್ತಿ ಅಗತ್ಯವಿದ್ದ ಉಡುಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ 8 ಪೊಲೀಸ್ ಬ್ಯಾರಿಕೇಡ್ಗಳನ್ನು ಸಂಪೂರ್ಣವಾಗಿ ಮರುನವೀಕರಣಗೊಳಿಸಿ, ನಿಗದಿತ ಗುಣಮಟ್ಟ ಮತ್ತು ಏಕ ರೂಪತೆಯೊಂದಿಗೆ ಮೇಲ್ದರ್ಜೆಗೇರಿಸಿದ್ದು ಜು.27ರಂದು ಇಲಾಖೆಗೆೆ ಹಸ್ತಾಂತರಿಸಲಾಯಿತು. ಬ್ಯಾರಿಕೇಡ್ಗಳನ್ನು ಮೇಲ್ದರ್ಜೆಗೇರಿಸಲು ನೆರವಾದ ದಾನಿಗಳಾದ ಕಲ್ಕೂರ ರೆಫ್ರಿಜರೇಟರ್ಸ್ ಸಂಸ್ಥೆಯ ಮಾಲಕ ರಂಜನ್ ಕಲ್ಕೂರ ಉಪಸ್ಥಿತರಿದ್ದರು.
ಪ್ರಸ್ತುತ ಉಡುಪಿ ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 59 ಸಿಂಗಲ್ ಪೊಲೀಸ್ ಬ್ಯಾರಿಕೇಡ್ಗಳು ಹಾಗೂ 61 ಡಬಲ್ ಪೊಲೀಸ್ ಬ್ಯಾರಿಕೇಡ್ಗಳು ಸೇರಿ ಒಟ್ಟು 120 ದುರಸ್ತಿಗೊಂಡ ಪೊಲೀಸ್ ಬ್ಯಾರಿಕೇಡ್ಗಳನ್ನು ಡಬಲ್ ಪೊಲೀಸ್ ಬ್ಯಾರಿಕೇಡ್ಗಳಾಗಿ ಮರುನವೀಕರಣ ಮತ್ತು ಮೇಲ್ದರ್ಜೆಗೇರಿಸಲಾಗುತ್ತಿದೆ.
ಮುಂದಿನ ಎರಡು ತಿಂಗಳುಗಳ ಅವಧಿಯಲ್ಲಿ ಹಂತ ಹಂತವಾಗಿ ಕಲ್ಕೂರ ರೆಫ್ರಿಜರೇಟರ್ಸ್ ವತಿಯಿಂದ ಏಕರೂಪದ ವಿನ್ಯಾಸ, ಗುಣಮಟ್ಟ ಮತ್ತು ಬಳಕೆಯ ಮಾನದಂಡಗಳಿಗೆ ಅನುಗುಣವಾಗಿ ಸಂಪೂರ್ಣವಾಗಿ ಮರುನವೀಕರಣ ಗೊಳಿಸಿ ಮೇಲ್ದರ್ಜೆಗೇರಿಸಿ ಆಯಾಯಾ ಪೊಲೀಸ್ ಠಾಣೆಗಳಿಗೆ ಮರುನೀಡಲಾಗುವುದು ಎಂದು ಎಸ್ಪಿ ಹರಿರಾಂ ಶಂಕರ್ ಮಾಹಿತಿ ಹಂಚಿಕೊಂಡಿದ್ದಾರೆ.