×
Ad

ಅತಿಥಿ ಉಪನ್ಯಾಸಕರ ಸಮಸ್ಯೆ ಪರಿಹರಿಸುವಂತೆ ಆಗ್ರಹಿಸಿ ಧರಣಿ

Update: 2023-12-15 20:25 IST

ಮಣಿಪಾಲ, ಡಿ.15: ರಾಜ್ಯ ಸರಕಾರವು ಅತಿಥಿ ಉಪನ್ಯಾಸಕರ ಸಮಸ್ಯೆಗಳನ್ನು ಆಲಿಸಿ, ತರಗತಿಗಳು ಸುಗಮವಾಗಿ ನಡೆಯುವ ರೀತಿಯಲ್ಲಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಉಡುಪಿ ನಗರ ವತಿಯಿಂದ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಲಾಯಿತು.

ನಗರ ಕಾರ್ಯದರ್ಶಿ ಶ್ರೀವತ್ಸ ಮಾತನಾಡಿ, ಅತಿಥಿ ಉಪನ್ಯಾಸಕರ ಸಮಸ್ಯೆ ಯಿಂದಾಗಿ ಮಂಗಳೂರು ವಿವಿಯ ಕೆಲವು ಕಾಲೇಜುಗಳಲ್ಲಿ ನಾಲ್ಕು ತಿಂಗಳಲ್ಲಿ ನಡೆಯಬೇಕಾದ ಪಠ್ಯವನ್ನು ಎರಡು ತಿಂಗಳಲ್ಲಿ ಮುಗಿಸಲಾಗುತ್ತಿದೆ. ಇದರಿಂದಾಗಿ ವಿದ್ಯಾರ್ಥಿಗಳಿಗೆ ಬಹಳ ಸಮಸ್ಯೆಗಳಾಗುತ್ತಿದೆ. ಆದಷ್ಟು ಬೇಗ ಶಿಕ್ಷಕರ ಬೇಡಿಕೆಯನ್ನು ಈಡೇರಿಸಿ, ಖಾಲಿ ಇರುವ ಸ್ಥಾನಗಳನ್ನು ಬಡ್ತಿ ಮಾಡಿ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಸ್ಥಳಕ್ಕೆ ಡಿಸಿ ಆಗಮಿಸುವಂತೆ ಒತ್ತಾಯಿಸಿ ವಿದ್ಯಾರ್ಥಿಗಳು ಮತ್ತು ಪೊಲೀಸರ ನಡುವೆ ಮಾತಿನ ಚಕಾಮಕಿ ನಡೆಯಿತು. ಬಳಿಕ ವಿದ್ಯಾರ್ಥಿಗಳು ಡಿಸಿ ಕಚೇರಿ ಮುತ್ತಿಗೆಗೆ ಪ್ರಯತ್ನಿಸಿದರು. ಬಳಿಕ ಆಗಮಿಸಿದ ಅಪರ ಜಿಲ್ಲಾಧಿಕಾರಿ ಮನವಿ ಸ್ವೀಕರಿಸಿ ಬೇಡಿಕೆಯನ್ನು ಆಲಿಸಿದರು.

ಪ್ರತಿಭಟನೆಯಲ್ಲಿ ಎಬಿವಿಪಿ ತಾಲೂಕು ಸಂಚಾಲಕ ಅಜಿತ್ ಜೋಗಿ, ನಗರ ಸಹಕಾರ್ಯದರ್ಶಿ ಕಾರ್ತಿಕ್, ನಗರ ವಿದ್ಯಾರ್ಥಿನಿ ಪ್ರಮುಖ್ ಸಂಹಿತಾ, ಸಹ ಪ್ರಮುಖ್ ಕೃತಿ ಮತ್ತು ಪ್ರಮುಖರಾದ ಸ್ವಸ್ತಿಕ್, ನವೀನ್, ಮಂಗಳಗೌರಿ, ಪ್ರಶ್ಮ, ಶ್ರೀಹರಿ, ಅನಂತ ಕೃಷ್ಣ, ಆದಿತ್ಯ, ಸುಮುಖ, ಮಾಣಿಕ್ಯ, ರವಿಚಂದ್ರ ಮೊದಲಾದ ವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News