×
Ad

ಜಿಲ್ಲೆಯಲ್ಲಿ ತಾಯಿ-ಮಗುವಿನ ಮರಣ ನಡೆಯದಂತೆ ನೋಡಿಕೊಳ್ಳಿ: ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಉಡುಪಿ ಡಿಸಿ ಸೂಚನೆ

Update: 2024-01-16 19:32 IST

ಉಡುಪಿ, ಜ.16: ಜಿಲ್ಲೆಯಲ್ಲಿ ಕಳೆದ ವರ್ಷದ ಜುಲೈನಿಂದ ಡಿಸೆಂಬರ್ ಅಂತ್ಯದವರೆಗೆ ಒಟ್ಟು ಆರು ತಿಂಗಳ ಅವಧಿಯಲ್ಲಿ ಎರಡು ತಾಯಿ ಮರಣ ಹಾಗೂ 51 ಶಿಶು ಮರಣ ಪ್ರಕರಣಗಳು ನಡೆದಿದ್ದು, ಮುಂದಿನ ದಿನಗಳಲ್ಲಿ ಇಂತಹ ಪ್ರಕರಣಗಳು ಜಿಲ್ಲೆಯಲ್ಲಿ ನಡೆಯದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ.

ಮಣಿಪಾಲದ ರಜತಾದ್ರಿಯಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಆರೋಗ್ಯ ಇಲಾಖೆಯ ಸಾಮಾಜಿಕ ಸವಲತ್ತುಗಳ ಸಮನ್ವಯ ಸಮಿತಿ ಸಭೆ, ಟಿ.ಬಿ.ಫೋರಂ ಸಮಿತಿ ಸಭೆ, ಜಿಲ್ಲಾ ಮಟ್ಟದ ಲಸಿಕಾ ಕಾರ್ಯಪಡೆ ಸಲಹಾ ಸಮಿತಿ ಸಭೆ, ಜಿಲ್ಲಾ ಕಣ್ಗಾವಲು ಸಮಿತಿ ಸಭೆ, ಜಿಲ್ಲಾ ಖಾಸಗಿ ವೈದ್ಯಕೀಯ ಸಂಸ್ಥೆಗಳ ನೋಂದಣಾ ಪ್ರಾಧಿಕಾರದ ಆಸ್ಪತ್ರೆಗಳ ನೋಂದಣಿ ಮತ್ತು ಕುಂದುಕೊರತೆ ನಿವಾರಣಾ ಸಭೆ, ವಾಲೆಂಟರ್ ಬ್ಲಡ್ ಟಾಸ್ಕ್ ಫೋರ್ಸ್ ಸಮಿತಿ ಹಾಗೂ ಇತರ ಸಮಿತಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಜಿಲ್ಲೆಯಲ್ಲಿ 2023ರ ಎಪ್ರಿಲ್ ತಿಂಗಳಿನಿಂದ ಡಿಸೆಂಬರ್ ಅಂತ್ಯದವರೆಗೆ ಒಟ್ಟು 9169 ಹೆರಿಗೆಗಳಾಗಿವೆ. ಖಾಸಗಿಯಲ್ಲಿ 6422 ಹಾಗೂ ಸರಕಾರಿ ಆಸ್ಪತ್ರೆಗಳಲ್ಲಿ 2747 ಹೆರಿಗೆಗಳು ಆಗಿವೆ. ಇವುಗಳಲ್ಲಿ 3902 ಸಾಮಾನ್ಯ ಹೆರಿಗೆಯಾದರೆ, 5267 ಶಸ್ತ್ರಚಿಕಿತ್ಸೆ ಮೂಲಕ ನಡೆದ ಹೆರಿಗೆಯಾಗಿದೆ. ವೈದ್ಯರು ಸಾಮಾನ್ಯ ಹೆರಿಗೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಜಿಲ್ಲಾಧಿಕಾರಿ ಸೂಚನೆಗಳನ್ನು ನೀಡಿದರು.

ಪ್ರಸವ ಪೂರ್ವ ಹಾಗೂ ಪ್ರಸವ ನಂತರದಲ್ಲಿ ತೆಗೆದುಕೊಳ್ಳಬೇಕಾದ ಆರೈಕೆ ಕ್ರಮಗಳಬಗ್ಗೆ ಗರ್ಭಿಣಿಯರಿಗೆ ಅರಿವು ಮೂಡಿ ಸುವುದು ಹಾಗೂ ಅವರಿಗೆ ಸೂಕ್ತ ಆರೋಗ್ಯ ಸೇವೆಗಳನ್ನು ನೀಡುವುದರೊಂದಿಗೆ ಜಿಲ್ಲೆಯಲ್ಲಿ ತಾಯಿ ಮತ್ತು ಶಿಶು ಮರಣಕ್ಕೆ ಸಂಬಂಧಿಸಿದ ಯಾವುದೇ ಪ್ರಕರಣಗಳು ನಡೆಯದಂತೆ ಎಚ್ಚರವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ತಿಳಿಸಿದರು.

ಗರ್ಭಿಣಿ ಮಹಿಳೆಯರಿಗೆ ಆರಂಭದಲ್ಲಿಯೇ ತಾಯಿ ಕಾರ್ಡನ್ನು ವಿತರಿಸಿ, ನಿಯಮಿತವಾಗಿ ಆರೋಗ್ಯ ತಪಾಸಣೆಗೆ ಬಂದಾಗ ಅವರಲ್ಲಿರುವ ತೊಡಕು, ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಪ್ರಾರಂಭದಲ್ಲಿಯೇ ಗುರುತಿಸಿ. ಅದಕ್ಕೆ ಸರಿಯಾದ ಚಿಕಿತ್ಸೆಯನ್ನು ನೀಡಬೇಕು. ಹೆರಿಗೆ ಸಮಯದಲ್ಲಿ ತೊಡಕು ಉಂಟಾದಲ್ಲಿ ಉನ್ನತ ಮಟ್ಟದ ಚಿಕಿತ್ಸೆಗಾಗಿ ಶಿಫಾರಸ್ಸು ಮಾಡಿದಾಗ ತುರ್ತು ಸಿಬ್ಬಂದಿಯೊಂದಿಗೆ ಮೇಲ್ಮಟ್ಟದ ಆಸ್ಪತ್ರೆಗೆ ವರ್ಗಾಯಿಸಬೇಕು. ವರ್ಗಾಯಿಸುವ ಸಂಬಂಧ ದೂರವಾಣಿಯ ಮೂಲಕ ಮೇಲ್ಮಟ್ಟದ ಆಸ್ಪತ್ರೆಗೆ ಮುಂಚಿತವಾಗಿ ತಿಳಿಸಿ, ತಕ್ಷಣ ಚಿಕಿತ್ಸೆ ಒದಗಿಸಲು ಸನ್ನದ್ಧಗೊಳಿಸಬೇಕು ಎಂದರು.

1954 ಕೋವಿಡ್ ಪರೀಕ್ಷೆ: ಜಿಲ್ಲೆಯಲ್ಲಿ ಈವರೆಗೆ 1954 ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗಿದ್ದು, 2 ಕೋವಿಡ್ ಪ್ರಕರಣಗಳು ಜಿಲ್ಲೆಯ ಗಡಿ ಭಾಗದಲ್ಲಿ ಕಂಡುಬಂದಿವೆ. ರೋಗಿಗಳಿಗೆ ಚಿಕಿತ್ಸೆ ನೀಡಲು ಅಗತ್ಯವಿರುವ ಪ್ರತ್ಯೇಕ ಬೆಡ್‌ಗಳು, ಐಸಿಯು ಸೇರಿದಂತೆ ಆಕ್ಸಿಜನ್‌ನ ವ್ಯವಸ್ಥೆ, ಅಗತ್ಯವಿರುವ ಔಷಧಿ ದಾಸ್ತಾನುಗಳನ್ನು ಇಟ್ಟುಕೊಂಡು ಚಿಕಿತ್ಸೆ ನೀಡಲು ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.

ಕ್ಷಯ ಮುಕ್ತ ಭಾರತಕ್ಕೆ ಶ್ರಮಿಸಿ: 2025ಕ್ಕೆ ಕ್ಷಯ ಮುಕ್ತ ಭಾರತ ನಿರ್ಮಾಣಕ್ಕೆ ಪಣ ತೊಟ್ಟಿದ್ದು, ಇದನ್ನು ಯಶಸ್ವಿ ಗೊಳಿಸಲು ಎಲ್ಲರೂ ಪ್ರಾಮಾಣಿಕವಾಗಿ ಶ್ರಮಿಸಬೇಕು. ಜಿಲ್ಲೆಯಲ್ಲಿ 32,576 ಜನರಲ್ಲಿ ಕ್ಷಯರೋಗ ತಪಾಸಣೆ ನಡೆಸಿದ್ದು, 1578 ಕ್ಷಯರೋಗ ಪ್ರಕರಣಗಳು ಕಂಡುಬಂದಿವೆ. ಜಿಲ್ಲೆಯ 153 ಗ್ರಾಮ ಪಂಚಾಯತಿಗಳಲ್ಲಿ 30 ಗ್ರಾಮ ಪಂಚಾಯತಿಗಳನ್ನು ಕ್ಷಯಮುಕ್ತ ಗ್ರಾಮಗಳಾಗಿ ಶೀಘ್ರದಲ್ಲಿಯೇ ಘೋಷಿಸಲಾಗುವುದು. ಕ್ಷಯರೋಗದ ಹರಡುವಿಕೆ, ಅವುಗಳ ಪತ್ತೆ, ಚಿಕಿತ್ಸೆ ಸೇರಿದಂತೆ ಮತ್ತಿತರ ವಿಷಯಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿ, ಹೆಚ್ಚಿನ ತಪಾಸಣಾ ನಡೆಸಬೇಕು. ರೋಗ ಇರುವುದು ಕಂಡುಬಂದಲ್ಲಿ ಸೂಕ್ತ ಚಿಕಿತ್ಸೆ ಪಡೆದು ಗುಣಮುಖರಾಗಲು ಉತ್ತಮ ಚಿಕಿತ್ಸೆ ನೀಡಬೇಕು ಎಂದರು.

ಜಿಲ್ಲೆಯ ಪ್ರತಿಯೊಂದು ಆಸ್ಪತ್ರೆಗಳಲ್ಲಿಯೂ ಕೆ.ಪಿ.ಎಂ.ಇ ಕಾಯ್ದೆಯಂತೆ ವೈದ್ಯಕೀಯ ವೆಚ್ಚಗಳ ವಿವರಗಳನ್ನು ಎದ್ದು ಕಾಣುವ ರೀತಿ ಪ್ರದರ್ಶಿಸಬೇಕು. ಅದರನ್ವಯ ಶುಲ್ಕಗಳನ್ನು ಪಡೆಯಬೇಕು. ಒಂದೊಮ್ಮೆ ಇದನ್ನು ಉಲ್ಲಂಘಿಸಿದ್ದಲ್ಲಿ ನೋಟೀಸ್ ನೀಡಿ, ಕ್ರಮ ಕೈಗೊಳ್ಳಬೇಕು ಎಂದರು.

ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡಗಳನ್ನು ಅರ್ಹ ಫಲಾನುಭವಿ ಗಳಿಗೆ ತಪ್ಪದೇ ವಿತರಿಸಬೇಕು. ಜಿಲ್ಲಾ ಆಸ್ಪತ್ರೆಗಳು ಖಾಸಗಿ ಆಸ್ಪತ್ರೆಗಳಲ್ಲಿ ನೀಡುವಷ್ಟೇ ಚಿಕಿತ್ಸೆ ನೀಡಬೇಕು. ಖಾಸಗಿ ಆಸ್ಪತ್ರೆಗಳು ಸರಕಾರದ ನಿಯಮಾನುಸಾರ ಆಯುಷ್ಮಾನ್ ಭಾರತ್ ಆರೋಗ್ಯ ಕಾಡ್ ಹೊಂದಿರುವ ಫಲಾನುಭವಿಗಳಿಗೆ ಬೆಡ್‌ಗಳನ್ನು ಮೀಸಲಿರಿಸಿ, ಸೂಕ್ತ ಚಿಕಿತ್ಸೆ ನೀಡಬೇಕು ಎಂದರು.

ಸರಕಾರ ಎಚ್‌ಐವಿ ಪೀಡಿತರಿಗೆ ಜಾರಿಗೆ ತಂದಿರುವ ವಿವಿಧ ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ಪ್ರತಿಶತಃ ನೂರರಷ್ಟು ಸಂಬಂಧಿತರಿಗೆ ತಲುಪಿಸಬೇಕು. ವಿಶೇಷ ವರ್ಗ ಯೋಜನೆಯಡಿ ಹೆಚ್‌ಐವಿ ಸೋಂಕಿತ ಕುಟುಂಬ ವರ್ಗದವರಿಗೆ ವಸತಿ ನಿಗಮದ ಸಹಯೋಗದಲ್ಲಿ ವಸತಿಗಳನ್ನು ಕಲ್ಪಿಸುವುದರ ಜೊತೆಗೆ ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿಯನ್ನು ವಿಶೇಷ ಪ್ರಕರಣದಡಿಯಲ್ಲಿ ನಿಯಮಾನುಸಾರ ನೀಡಬೇಕು. ಜನಸಾಮಾನ್ಯ ರಲ್ಲಿ ಎಚ್‌ಐವಿ ಹರಡುಕೆಯ ಬಗ್ಗೆ ಅರಿವು ಮೂಡಿಸಿ, ರೋಗ ನಿಯಂತ್ರಣಕ್ಕೆ ಮುಂದಾಗಬೇಕು ಎಂದರು.

ಕಳೆದ ಸಾಲಿನ ಎಪ್ರಿಲ್‌ನಿಂದ ಡಿಸೆಂಬರ್‌ವರೆಗೆ 11,250 ಯುನಿಟ್‌ಗಳಷ್ಟು ರಕ್ತ ಸಂಗ್ರಹದ ಗುರಿ ಹೊಂದಿ, 22,186 ಯೂನಿಟ್ ಬ್ಲಡ್‌ನ್ನು ಸಂಗ್ರಹಿಸುವ ಮೂಲಕ ಗುರಿಮೀರಿದ ಸಾಧನೆ ಮಾಡಲಾಗಿದೆ. ಇದರಿಂದ ಜಿಲ್ಲೆಯಲ್ಲಿ ರಕ್ತದ ಕೊರತೆ ಉಂಟಾಗದಂತೆ ನೋಡಿಕೊಳ್ಳಲಾಗಿದೆ. ಹೆಚ್ಚು ಹೆಚ್ಚು ಶಿಬಿರಗಳನ್ನು ನಡೆಸುವ ಮೂಲಕ ದಾನಿಗಳಿಂದ ರಕ್ತ ಶೇಖರಣೆಗೆ ಮುಂದಾಗಬೇಕು ಎಂದರು.

ಮಲೇರಿಯಾ, ಇಲಿಜ್ವರ, ಹೆಚ್‌1ಎನ್‌1 ರೋಗಗಳು ಸೇರಿದಂತೆ ವಿವಿಧ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಅಗತ್ಯ ವಿರುವ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ಪ್ರಾಣಿಜನ್ಯ ರೋಗಗಳ ಸೋಂಕುಗಳು ಮನುಷ್ಯರಿಗೆ ಹರಡದಂತೆ ಎಚ್ಚರಿಕೆ ವಹಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.

ನೀರಿನ ಮೂಲಗಳ ನೀರು ಕುಡಿಯಲು ಯೋಗ್ಯವಾಗಿರುವ ಬಗ್ಗೆ ನೀರಿನ ಗುಣಮಟ್ಟ ಪರೀಕ್ಷೆಯನ್ನು ಕೈಗೊಳ್ಳಬೇಕು. ನೀರು ಶುದ್ಧವಾಗಿರದಿದ್ದಲ್ಲಿ ಫ್ಲೋರಿನೇಷನ್ ಮಾಡಬೇಕು. ಆ ನಂತರ ನೀರು ಕುಡಿಯಲು ಯೋಗ್ಯವಾ ಗಿದ್ದಲ್ಲಿ ಮಾತ್ರ ಅವುಗಳ ಬಳಕೆಗೆ ಸೂಚಿಸಬೇಕು ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಐ.ಪಿ ಗಡಾದ್, ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಚಿದಾನಂದ ಸಂಜು, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ಕೆ. ರಾಮರಾವ್, ಜಿಲ್ಲಾ ಕುಷ್ಟರೋಗ ನಿಯಂತ್ರಣ ಅಧಿಕಾರಿ ಡಾ. ಲತಾ ನಾಯಕ್, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ. ಪ್ರಶಾಂತ್ ಭಟ್, ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ. ನಾಗರತ್ನ, ಡಾ. ಜೋಶ್ನಾ, ತಾಲೂಕು ವೈದ್ಯಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.

ಜಿಲ್ಲೆಯ ಲಿಂಗಾನುಪಾತ 1000:960

ಸದ್ಯ ಜಿಲ್ಲೆಯ ಲಿಂಗಾನುಪಾತ 1000:960. ಇಲ್ಲಿ ಪ್ರತಿ 1000 ಪುರುಷ ರಿಗೆ 960 ಹೆಣ್ಣುಮಕ್ಕಳಿದ್ದಾರೆ. ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ಮಾಡು ವುದು ಅಪರಾಧವಾಗಿದ್ದು, ಇಂತಹ ಪ್ರಕರಣಗಳು ಎಲ್ಲೂ ಆಗದಂತೆ ಅಗತ್ಯ ಕ್ರಮವಹಿಸಬೇಕು ಎಂದರು.

ಪಿ.ಸಿ.ಪಿ.ಎನ್.ಡಿ.ಟಿ ಸಮಿತಿ ಸಭೆಯನ್ನು ಪ್ರತೀ ಎರಡು ತಿಂಗಳಿಗೊಮ್ಮೆ ನಡೆಸಬೇಕು. ಎಲ್ಲರೂ ಕ್ರಿಯಾಶೀಲವಾಗಿ ಕಾರ್ಯಚಟುವಟಿಕೆಗಳನ್ನು ನಡೆಸಬೇಕು. ಲಿಂಗಾನುಪಾತ ಕಡಿಮೆ ಇರುವ ಗ್ರಾಮ ಪಂಚಾಯತಿಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ತಕ್ಷಣ ಕೈಗೊಳ್ಳಬೇಕು ಎಂದರು.

ನಾಯಿ ಕಡಿತ ಹೆಚ್ಚಳ

ಜಿಲ್ಲೆಯಲ್ಲಿ 2022ನೇ ಸಾಲಿನಲ್ಲಿ 13,806 ನಾಯಿ ಕಡಿತ ಪ್ರಕರಣಗಳು ದಾಖಲಾಗಿತ್ತು. ಆದರೆ, ಕಳೆದ ಸಾಲಿನಲ್ಲಿ ಜನವರಿಯಿಂದ ಡಿಸೆಂಬರ್‌ವರೆಗೆ 17,733 ನಾಯಿ ಕಡಿತ ಪ್ರಕರಣಗಳು ವರದಿ ಯಾಗಿವೆ. ಈ ಸಂಬಂಧ ಹೆಚ್ಚು ದೂರುಗಳು ಸಹ ಕೇಳಿ ಬರುತ್ತಿವೆ. ಇವುಗಳ ನಿಯಂತ್ರಣಕ್ಕೆ ಅಗತ್ಯವಿರುವ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ಹಾವು ಕಡಿತ: ಇದೇ ವೇಳೆ ಜಿಲ್ಲೆಯಲ್ಲಿ 314 ಹಾವು ಕಡಿತ ಪ್ರಕರಣಗಳು ಕಳೆದ ಸಾಲಿನಲ್ಲಿ ವರದಿಯಾಗಿವೆ. ಇವುಗಳಿಗೆ ಚಿಕಿತ್ಸೆ ನೀಡಲು ಅಗತ್ಯವಿರುವ ಔಷಧಿ ದಾಸ್ತಾನುಗಳನ್ನು ಇಟ್ಟುಕೊಳ್ಳುವುದರೊಂದಿಗೆ ಸೂಕ್ತ ಚಿಕಿತ್ಸೆ ನೀಡಬೇಕು ಎಂದರು.




 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News