×
Ad

‘ಪರಿಸರಕ್ಕಾಗಿ ನಾವು’ ದ.ಕ.-ಉಡುಪಿ ಜಿಲ್ಲಾ ಘಟಕದ ಮೊದಲ ಸಭೆ

Update: 2024-01-19 19:45 IST

ಕಿನ್ನಿಗೋಳಿ: ಈಗಾಗಲೇ ಈ ವರ್ಷ ಕಂಡುಬಂದಿರುವ ಹವಾಮಾನ ವೈಪರಿತ್ಯದ ಹಿನ್ನೆಲೆಯಲ್ಲಿ ಪರಿಸರ ಪರವಾಗಿ ಕೆಲಸ ಮಾಡಲು ರಾಜ್ಯಾದ್ಯಂತ ವಿವಿಧ ಜಿಲ್ಲೆಗಳ ಪರಿಸರ ಕಾರ್ಯಕರ್ತರನ್ನು ಒಗ್ಗೂಡಿಸಿ ರಾಜ್ಯ ಮಟ್ಟದ ಒಕ್ಕೂಟ ಕಟ್ಟಲು ‘ಪರಿಸರಕ್ಕಾಗಿ ನಾವು’ ಎನ್ನುವ ರಾಜ್ಯ ಮಟ್ಟದ ಬಳಗ ರಚನೆಯಾಗಿದೆ. ಜೊತೆಗೆ ಪ್ರತಿ ಜಿಲ್ಲೆಯಲ್ಲೂ ಅದರ ಉಪಘಟಕ ಗಳನ್ನು ರಚಿಸಲಾಗಿದೆ.

ಪರಿಸರಕ್ಕಾಗಿ ನಾವು - ಇದರ ದಕ್ಷಿಣ ಕನ್ನಡ-ಉಡುಪಿ ಜಿಲ್ಲೆಗಳ ಸಂಯುಕ್ತ ಘಟಕದ ಮೊದಲ ಸಭೆ ಇತ್ತೀಚೆಗೆ ಕಿನ್ನಿ ಗೋಳಿಯ ನೇಕಾರ ಸಂಘದ ಸಭಾ ಭವನದಲ್ಲಿ ನಡೆಯಿತು. ದ.ಕ. ಜಿಲ್ಲೆಯಿಂದ ಅಶ್ವಿನಿ ಭಟ್ ಮತ್ತು ಭುವನ್ ದೇವಾಡಿಗ ಹಾಗೂ ಉಡುಪಿ ಜಿಲ್ಲೆಯಿಂದ ಶ್ರೀಕುಮಾರ್ ಮತ್ತು ದೀಪ್ತಿ ಅವರು ರಾಜ್ಯ ಸಂಚಾಲನ ಸಮಿತಿಗೆ ಈಗಾಗಲೇ ಆಯ್ಕೆಯಾಗಿದ್ದಾರೆ. ಪರಿಸರಕ್ಕಾಗಿ ನಾವು ರಾಜ್ಯ ಬಳಗದ ಆರಂಭಿಕ ಸಮಿತಿಯ ಪರವಾಗಿ ಮಮತಾ ರೈ ಹಾಗೂ ಉಭಯ ಜಿಲ್ಲೆಗಳ ಅನೇಕ ಪ್ರಮುಖ ಪರಿಸರ ಕಾರ್ಯಕರ್ತರು ಸಭೆಯಲ್ಲಿ ಉಪಸ್ಥಿತರಿದ್ದರು.

ಅತಿಯಾದ ಕೈಗಾರಿಕೀಕರಣ, ನಗರೀಕರಣ ಮತ್ತು ಬದಲಾದ ಜೀವನ ಶೈಲಿಯ ಪರಿಣಾಮ ಹವಾಗುಣ ವೈಪರೀತ್ಯದ ತುರ್ತು ಸಮಸ್ಯೆ ಈಗ ಎದುರಾಗಿದೆ. ಈಗಲೇ ಎಚ್ಚೆತ್ತುಕೊಂಡು ಪರಿಸರದ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡು ಕೊಳ್ಳದಿದ್ದರೆ ಜೀವ ಸಂಕುಲದ ಅಳಿವು ಇನ್ನು ಕೆಲವು ದಶಕಗಳಲ್ಲಿ ನಿಶ್ಚಿತ ಎಂದು ಪರಿಸರ ತಜ್ಞರು ಈಗಾಗಲೇ ಎಚ್ಚರಿಸಿ ದ್ದಾರೆ. ಈ ಹಿನ್ನೆಲೆಯಲ್ಲಿ ಪರಿಸರ ಉಳಿವಿನ ತುರ್ತು ಅಗತ್ಯ ಎದುರಾಗಿದೆ ಎಂದು ಸಭೆಯಲ್ಲಿ ಮಾತನಾಡಿದವರು ವಿವರಿಸಿದರು.

ಹವಾಗುಣ ವೈಪರೀತ್ಯದಿಂದ ಹಿಡಿದು ಉಭಯ ಜಿಲ್ಲೆಗಳನ್ನು ಕಾಡುತ್ತಿರುವ ಅತಿ ಮುಖ್ಯ ಪರಿಸರ ಸಮಸ್ಯೆಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಮುಂದಿನ ದಿನಗಳಲ್ಲಿ ಆಯ್ದ ಪರಿಸರ ಸಮಸ್ಯೆಗಳ ಪರಿಹಾರಕ್ಕಾಗಿ ಆಯಾ ಕ್ಷೇತ್ರದ ಪರಿಣಿತರನ್ನು ಒಳಗೊಂಡ ಸಮಿತಿಗಳನ್ನು ರಚಿಸಿ ಕಾರ್ಯತಂತ್ರ ರೂಪಿಸಲು, ಜನರಲ್ಲಿ ಪರಿಸರದ ಬಗ್ಗೆ ಅರಿವು ಮೂಡಿಸಲು ಯೋಜನೆಗಳನ್ನು ರೂಪಿಸಲು ಹಾಗೂ ರಾಜ್ಯ ಮಟ್ಟದ ಪರಿಸರಕ್ಕಾಗಿ ನಾವು ಬಳಗದ ಮಾರ್ಗದರ್ಶನದಂತೆ ಕೆಲಸ ಮಾಡಲು ನಿರ್ಧರಿಸಲಾಯಿತು.

ಸಭೆಯಲ್ಲಿ ಬೇರೆ ಬೇರೆ ಕ್ಷೇತ್ರಗಳಲ್ಲಿ ಪರಿಸರಕ್ಕಾಗಿ ದುಡಿಯುತ್ತಿರುವ 38 ಮಂದಿ ಸೇರಿದ್ದರು. ಶ್ರೀಕುಮಾರ್ ಅವರು ಎಲ್ಲರನ್ನೂ ಸ್ವಾಗತಿಸಿದರು. ಸರೋಜಾ ಪ್ರಕಾಶ್ ಹಾಗೂ ಅಶ್ವಿನಿ ಭಟ್ ಅವರು ‘ಎಲ್ಲರ ನೋವನು ಬಲ್ಲವನಾದರೆ’ ಹಾಡು ಹಾಡಿದ್ದು, ಉಳಿದವರು ಅವರೊಂದಿಗೆ ದನಿ ಗೂಡಿಸಿದರು.

ಸಭೆಯಲ್ಲಿ ಪರಿಸರಕ್ಕೆ ಎದುರಾಗಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಿ ಕ್ಷೇತ್ರಗಳಿಗೆ ಅನುಗುಣವಾಗಿ ಅವುಗಳನ್ನು ವಿಂಗಡಿಸ ಲಾಯಿತು. ಮೇಲ್ಮೈ ನೀರು (ನದಿ,ಕೆರೆ, ಸಮುದ್ರ), ಅಂತರ್ಜಲ, ತ್ಯಾಜ್ಯ ನಿರ್ವಹಣೆ, ಅಭಿವೃದ್ಧಿಯ ಹೆಸರಿನಲ್ಲಿ ಮರ ಕಡಿಯುವುದು, ಅರಣ್ಯಗಳ ನಾಶ, ವಾಯು ಮಾಲಿನ್ಯ ಮತ್ತು ಶಬ್ದ ಮಾಲಿನ್ಯ, ಶಿಕ್ಷಣ, ಜೀವನಶೈಲಿ ಮತ್ತು ಪರಿಸರದ ಬಗ್ಗೆ ಜಾಗೃತಿ ಮೂಡಿಸುವುದು, ಕೃಷಿ ಮತ್ತು ಜೀವ ಸಂಕುಲಗಳ ಮೇಲೆ ಆಗುತ್ತಿರುವ ಪರಿಣಾಮಗಳ ಅಧ್ಯಯನ. ಸದಸ್ಯರು ತಮ್ಮ ತಮ್ಮ ಆಸಕ್ತಿಯ ಕ್ಷೇತ್ರಗಳಲ್ಲಿ ಕೆಲಸ ಮಾಡುವ ತಂಡಗಳನ್ನು ಸೇರಿಕೊಳ್ಳಲು ನಿರ್ಧರಿಸಲಾಯಿತು.

ಸಭೆಯಲ್ಲಿ ಭಾಗವಹಿಸಿದವರಲ್ಲಿ ಆರತಿ ಅಶೋಕ್, ಅಬೂಬಕ್ಕರ್ (ಅಬ್ಬು ಕಾರ್ಕಳ), ಆಫ್ರಾನ್, ಆಕಾಶ್ ಕುಡ್ಲ, ಅರ್ಜುನ್ ಮಸ್ಕರೇನಸ್, ಅರವಿಂದ್ ಕುಡ್ಲ, ಅಶೋಕ್ ಭಟ್, ಅಶೋಕ್ ಕೆ.ಎಸ್, ಅಶ್ವಿನಿ ಕೆ. ಭಟ್, ಬಿ. ಸಿ. ಶೆಟ್ಟಿ, ಬೆನೆಡಿಕ್ಟ್ ಫರ್ನಾಂಡಿಸ್, ಭುವನ್ ಎಂ, ಚಂದ್ರಹಾಸ್ ಶೆಟ್ಟಿ, ದೀಪ್ತಿ ಅಮಿನ್, ಡಾ.ಅಕ್ಷತಾ ನಾಯಕ್, ವಂ.ರಿಚರ್ಡ್ ಡಿಸೋಜ ಸುರ ತ್ಕಲ್, ಗಾಡ್ವಿನ್ ಡಿಸೋಜ, ಕೆ. ದೀಪಕ್ ಕಾಮತ್, ಮಾಧವ ಉಲ್ಲಾಳ, ಮಮತಾ ರೈ, ನಿತಿನ್ ವಾಸ್, ಪ್ರೇಮಾನಂದ್ ಕಲ್ಮಾಡಿ, ರಾಧೇಶ್ ಮೋಹನ್ ದಾಸ್, ರಾಜೇಶ್ ಸಿಕ್ವೇರಾ, ರೆನಿಟಾ ಶೈನಿ ಡಿಸೋಜ, ಶ್ರೀಕುಮಾರ್, ಸನ್ನಿ ಡಿಸೋಜ, ಟಿ. ಸೀತಾರಾಮ್ ಶೆಟ್ಟಿ, ವೆರೋನಿಕಾ ಕೊಯೆಲೋ, ಯಾಮಿನಿ ಜರ್ಫಾಸ್ ಮುಂತಾದವರು ಸೇರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News