ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸಂವಿಧಾನ ಅತೀ ಶ್ರೇಷ್ಠ: ಕೋಟ ಶ್ರೀನಿವಾಸ ಪೂಜಾರಿ
ಕುಂದಾಪು: ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಬರೆದ ಭಾರತದ ಸಂವಿಧಾನವು ಪ್ರಜಾತಂತ್ರ ವ್ಯವಸ್ಥೆಯಲ್ಲಿ ಜಗತ್ತಿನಲ್ಲೇ ಅತೀ ಶ್ರೇಷ್ಟವಾಗಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿ ಮುಖ್ಯವಾಹಿನಿಗೆ ಬರಬೇಕು. ಸಮಬಾಳು- ಸಮಪಾಲು, ಸಾಮಾಜಿಕ ನ್ಯಾಯಕ್ಕೆ ಒತ್ತುಕೊಟ್ಟು ಅಂದು ಮಾಡಿದ ಸಂವಿಧಾನದ ಫಲವನ್ನು ನಾವಿಂದು ಉಣ್ಣುತ್ತಿದ್ದೇವೆ. ಜಗತ್ತಿಗೆ ಮಾರ್ಗದರ್ಶನ ಮಾಡುವ ಸಂವಿಧಾನವು ಭಾರತಕ್ಕೆ ಸಿಕ್ಕಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಕುಂದಾಪುರ ಪುರಸಭೆ ಆಶ್ರಯದಲ್ಲಿ ಸಂವಿಧಾನ ದಿನಾಚರಣೆ ಪ್ರಯುಕ್ತ ಕುಂದಾಪುರ ಶಾಸ್ತ್ರೀ ವೃತ್ತ ಸಮೀಪದ ತಾಲೂಕು ಪಂಚಾಯತ್ ಎದುರು ಮಂಗಳವಾರ ಹಮ್ಮಿಕೊಂಡ ’ಸಂವಿಧಾನ ಜಾಗೃತಿ ಜಾಥ’ವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಕುಂದಾಪುರ ತಾಪಂ ಕಾರ್ಯ ನಿರ್ವಹಣಾಧಿಕಾರಿ ಪ್ರಶಾಂತ್ ವಿ.ರಾವ್ ಮಾತ ನಾಡಿ, ದೇಶದ ಪ್ರಜಾಪ್ರಭುತ್ವ ಸದೃಢವಾಗಲು ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನದಿಂದ ಸಾಧ್ಯ ವಾಗಿದೆ. ಸ್ವಾತಂತ್ರ್ಯ ತರುವಾಯ ಹಲವು ಸಮಸ್ಯೆಗಳಿದ್ದು ಪ್ರಪಂಚದಲ್ಲಿನ ಎಲ್ಲಾ ಸಂವಿಧಾನಗಳನ್ನು ಅವಲೋಕಿಸಿ ನಮ್ಮ ದೇಶದ ಹಲವು ವಿಚಾರಗಳನ್ನು ಮುಂದಿಟ್ಟುಕೊಂಡು ಸಂವಿಧಾನ ರಚಿಸಲಾಗಿದೆ. ಸಂವಿಧಾನದ ಮಹತ್ವವನ್ನು ಎಲ್ಲರೂ ಅರಿಯಬೇಕು ಎಂದರು.
ದಲಿತ ಸಂಘಟನೆಯ ಮುಖಂಡರಾದ ಉದಯ ಕುಮಾರ್ ತಲ್ಲೂರು, ರಾಜು ಬೆಟ್ಟಿನಮನೆ ಮಾತನಾಡಿದರು. ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ರಾಘವೇಂದ್ರ ವರ್ಣೇಕರ್, ಉಪತಹಶಿಲ್ದಾರ್ ವಿನಯ್, ಕುಂದಾಪುರ ನಗರ ಠಾಣೆ ಪೊಲೀಸ್ ನಿರೀಕ್ಷಕ ಯು.ಬಿ.ನಂದಕುಮಾರ್, ಪುರಸಭೆ ಸದಸ್ಯರಾದ ಪ್ರಭಾಕರ್ ವಿ., ಶ್ರೀಧರ್ ಶೇರಿಗಾರ್, ದೇವಕಿ ಸಣ್ಣಯ್ಯ, ಪ್ರಭಾವತಿ ಶೆಟ್ಟಿ, ಶೇಖರ್ ಮೊದಲಾದವರು ಉಪಸ್ಥಿತರಿದ್ದರು.
ಕುಂದಾಪುರ ಪುರಸಭೆ ಮುಖ್ಯಾಧಿಕಾರಿ ಮಂಜುನಾಥ್ ಆರ್. ಪ್ರಾಸ್ತಾವಿಕ ವಾಗಿ ಮಾತನಾಡಿದರು. ಪುರಸಭೆ ಪ್ರಥಮ ದರ್ಜೆ ಸಹಾಯಕ ಗಣೇಶ್ ಕುಮಾರ್ ಜನ್ನಾಡಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಸಂವಿಧಾನ ಮುಖ್ಯ ಆಶಯವಾದ ಸಮಾನತೆಯನ್ನು ನಾವು ಬೆಳೆಸಿಕೊಳ್ಳ ಬೇಕು. ಬೆಳೆಯುತ್ತಿರುವ ಸಮಾಜದಲ್ಲಿ ಅಸಮಾನತೆ ಆಚರಣೆಯನ್ನು ನಿಲ್ಲಿಸ ಬೇಕು. ಸಂವಿಧಾನದ ಅತೀ ಮುಖ್ಯ ಆಶಯಗಳನ್ನು ಪಾಲಿಸಬೇಕು. ಸಂವಿಧಾನವು ನಿತ್ಯ ಜೀವನದ ವಿಮರ್ಶೆಯಾಗಬೇಕು. ಜಾತ್ಯಾತೀತ ಮನೋ ಭಾವನೆ ಬೆಳೆಸಿಕೊಂಡಾಗ ನೈಜ್ಯ ಭಾರತ ಉಳಿವು ಸಾಧ್ಯ ಎಂದು ಉಪನ್ಯಾಸಕ ಪ್ರದೀಪ್ ಕೆಂಚನೂರು ಹೇಳಿದರು.
ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನ ಮೀರಿ ಯಾರೂ ಇಲ್ಲ. ಜನರ ಪ್ರಭುತ್ವ ಹಾಗೂ ಶ್ರೇಷ್ಟತೆ, ಸಮಾನತೆ, ಜಾತ್ಯಾತೀತ ಸ್ವಭಾವ ಅತೀ ಮುಖ್ಯವಾಗಿದೆ. ಇಲ್ಲಿ ಯಾವುದೇ ಒಂದು ಜನಾಂಗ, ಜಾತಿ ಮುಖ್ಯವಲ್ಲ ಎಂಬುದು ಅರಿಯಬೇಕು. ಜಾತ್ಯಾತೀತ ಸ್ವರೂಪ ಗಂಡಾಂತರದಲ್ಲಿದ್ದು ಇದು ತೊಡೆದುಹಾಕಬೇಕು. ಭ್ರಾತತ್ವ, ಮೈತ್ರಿ ಬೆಳೆಸಿ ಕೊಂಡು ಕೆಲವು ಪೂರ್ವಾಗ್ರ ಗಳಿಂದ ಹೊರಬರಬೇಕು ಎಂದರು.
ನಗರದಲ್ಲಿ ಸಂಚರಿಸಿದ ಬೃಹತ್ ಜಾಥಾ
ಮಂಗಳವಾರ ಕುಂದಾಪುರಕ್ಕೆ ಆಗಮಿಸಿದ ’ಸಂವಿಧಾನ ಜಾಗೃತಿ ಜಾಥಾವನ್ನು ವಿಧಾನಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಸ್ವಾಗತಿಸಿದರು. ಕುಂದಾಪುರ ಹಿರಿಯ ಸಿವಿಲ್ ನ್ಯಾಯಾಧೀಶ, ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷ ರಾಜು ಎನ್. ಜಾಥಾಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ಶೃತಿಶ್ರೀ ಎಸ್., ಹೆಚ್ಚುವರಿ ಸಿವಿಲ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಧೀಶೆ ರೋಹಿಣಿ ಡಿ.,ಸಹಾಯಕ ಸರಕಾರಿ ಅಭಿಯೋಜಕ ಉದಯ ಕುಮಾರ್ ಬಿ.ಎ. ಮೊದಲಾದವರು ಉಪಸ್ಥಿತರಿದ್ದರು. ಕುಂದಾಪುರ ಬಿ.ಬಿ.ಹೆಗ್ಡೆ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದರು. ಶಾಸ್ತ್ರೀ ವೃತ್ತದಿಂದ ಆರಂಭಗೊಂಡ ಜಾಥಾವು ನಗರದಲ್ಲಿ ಸಾಗಿ ತಾಪಂ ಕಚೇರಿ ಎದುರು ಸಮಾಪನಗೊಂಡಿತು.