ಮಾಚೀದೇವರ ಜೀವನಾದರ್ಶಗಳಿಂದ ಸಮಾಜದಲ್ಲಿ ಸುಧಾರಣೆ: ಮಮತಾ ದೇವಿ
ಉಡುಪಿ: ಮಡಿವಾಳ ಮಾಚೀದೇವರ ಜೀವನ ಆದರ್ಶಗಳನ್ನು ಅವಲೋಕನ ಮಾಡುವ ಮೂಲಕ ಅವುಗಳನ್ನು ಜೀವನ ದಲ್ಲಿ ಅಳವಡಿಸಿಕೊಂಡು ಸಮಾಜ ಸುಧಾರಣೆಗೆ ಮುಂದಾಗಬೇಕು ಎಂದು ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್ ಹೇಳಿದ್ದಾರೆ.
ಗುರುವಾರ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಡೆದ ಮಡಿವಾಳ ಮಾಚೀದೇವ ಜಯಂತಿ ಕಾರ್ಯಕ್ರಮ ದಲ್ಲಿ ಮಾಚೀದೇವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡುತ್ತಿದ್ದರು.
ಶರಣರ ಇತಿಹಾಸದ ಸಾಹಿತ್ಯಗಳು, ನಾಣ್ಣುಡಿ ಹಾಗೂ ತತ್ವಗಳನ್ನು ಪ್ರತಿ ಯೊಬ್ಬರಲ್ಲೂ ಪಾಲಿಸಿದಲ್ಲಿ ಸಮಾಜದಲ್ಲಿ ಬದಲಾವಣೆ ಸಾಧ್ಯ. ಮಾಚೀದೇವರ ವಚನಗಳು ಸಮಾಜದಲ್ಲಿನ ಮೂಢನಂಬಿಕೆಗಳನ್ನು ತೊಡೆದು ಹಾಕಲು ಹಾಗೂ ಸಮಾಜ ಸುಧಾರಣೆಗೆ ಸಹಕಾರಿಯಾಗಿವೆ ಎಂದರು.
ಆಧುನಿಕ ಸಮಾಜದಲ್ಲಿ ಸರ್ವಧರ್ಮಗಳನ್ನು ಸಮಾನವಾಗಿ ನೋಡಬೇಕು. ಶಿವಶರಣರ ಜಯಂತಿಯನ್ನು ಅರ್ಥಪೂರ್ಣ ವಾಗಿ ಆಚರಿಸುವ ಮೂಲಕ ಸಮಾಜಕ್ಕೆ ಹಾಗೂ ಮುಂದಿನ ಪೀಳಿಗೆಗೆ ಅವರ ಆಶಯಗಳು ದಾರಿದೀಪ ವಾಗಬೇಕು ಎಂದರು.
ಮಡಿವಾಳ ಸಂಘದ ಜಿಲ್ಲಾ ಅಧ್ಯಕ್ಷ ಪ್ರದೀಪ್ ಮಡಿವಾಳ ಹೆರ್ಗ ಮಾತನಾಡಿ, ಮಡಿವಾಳ ಸಮಾಜದ ಮೂಲಪುರುಷ ಮಾಚೀದೇವರು. ಕಲ್ಯಾಣನಾಡಿನಲ್ಲಿ ಕ್ರಾಂತಿ ಮಾಡಿದ ಇವರು ಹಲವಾರು ವಚನ ಸಾಹಿತ್ಯ ಗಳನ್ನು ರಚಿಸಿದ್ದಾರೆ. ಬಸವಣ್ಣನವರ ಕಾಯಕವೇ ಕೈಲಾಸದ ಮಾತನ್ನು ಅನುಸರಿಸುತ್ತಾ, ಶಿವಶರಣೆಯರ ವಸ್ತ್ರ ಮಡಿಗೊಳಿಸುವ ಕಾಯಕದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು ಎಂದರು.
12ನೇ ಶತಮಾನದಲ್ಲಿ ಬಿಜ್ಜಳ ರಾಜನು ವಚನ ಸಾಹಿತ್ಯಗಳನ್ನು ನಾಶ ಪಡಿಸುವ ಸಂದರ್ಭದಲ್ಲಿ ವಚನ ಸಾಹಿತ್ಯಗಳನ್ನು ರಕ್ಷಿಸುವ ಉದ್ದೇಶದಿಂದ ಅವರೊಂದಿಗೆ ಹೋರಾಟ ಮಾಡಲು ತನ್ನ ಕೈಯಲ್ಲಿರುವ ಶಸ್ತ್ರವನ್ನು ಉಪಯೋಗಿಸಿ ಯಶಸ್ವಿ ಯಾಗಿದ್ದಾರೆ ಎಂದು ಪ್ರದೀಪ್ ಮಡಿವಾಳ ಹೇಳಿದರು.
ಅನುಭವ ಮಂಟಪ ನಿರ್ಮಾಣದಲ್ಲಿ ಇವರ ಕೊಡುಗೆ ಅಪಾರ. ತಮ್ಮ ಕಾಯಕಕ್ಕೆ ಪ್ರಥಮ ಪ್ರಾಶಸ್ತ್ಯ ನೀಡಿ ಅರಸುತನ ಮೇಲಲ್ಲ, ಅಗಸತನ ಕೀಳಲ್ಲ ಎಂದು ಜಗತ್ತಿಗೆ ಸಾರಿದ ಇವರು, ತನ್ನ ಗುರು ವೀರಕಂಠಿ ಅವರೊಂದಿಗೆ ಜೀವಂತವಾಗಿ ಸಮಾಧಿಯಾಗಿದ್ದಾರೆ ಎಂದು ಇತಿಹಾಸದಲ್ಲಿ ಉಲ್ಲೇಖಿಸಲಾಗಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾತನಾಡಿ, ಬಸವಣ್ಣನವರ ಸಮಕಾಲೀನರು ಮಡಿವಾಳ ಮಾಚೀದೇವ. ಮಾಚೀದೇವ ಅವರನ್ನು ವೀರಭದ್ರನ ಅವತಾರ ಎಂದು ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಇವರು ಸುಮಾರು 343 ವಚನಗಳನ್ನು ರಚಿಸಿದ್ದು, ಇದು ಸಮಾಜದಲ್ಲಿನ ಮೌಢ್ಯವನ್ನು ಹೋಗಲಾಡಿಸಲು ಸಹಕಾರಿ ಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು, ಮಡಿವಾಳ ಸಮಾಜದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರೆ, ಕನ್ನಡ ಉಪನ್ಯಾಸಕ ರಾಮಾಂಜಿ ಕಾರ್ಯಕ್ರಮ ನಿರೂಪಿಸಿದರು. ಭಾರತೀ ಚಂದ್ರಶೇಖರ್ ವಂದಿಸಿದರು.
ಮಡಿವಾಳ ಸಂಘದಿಂದ ಮನವಿ: ಇದೇ ಸಂದರ್ಭದಲ್ಲಿ ಮಡಿವಾಳ ಮಾಚೀದೇವರ ಜೀವನ ಚರಿತ್ರೆ ಹಾಗೂ ವಚನಗಳನ್ನು ಮುಂದಿನ ಪೀಳಿಗೆಗೆ ತಿಳಿಸುವ ಸಲುವಾಗಿ ಮುಂಬರುವ ದಿನಗಳಲ್ಲಿ ಶಾಲಾ ಶಿಕ್ಷಣ ಪಠ್ಯಪುಸ್ತಕದಲ್ಲಿ ಸೇರಿಸುವಂತೆ ಹಾಗೂ ಅಂಬಾಗಿಲಿನಲ್ಲಿರುವ ಮಡಿವಾಳ ಮಾಚೀದೇವ ಸಭಾಭವನ ಮುಕ್ತಾಯ ಹಂತದಲ್ಲಿದ್ದು, ಕಟ್ಟಡದ ಅಂಗಳದಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಅನುದಾನ ಒದಗಿಸುವಂತೆ ಸಂಘದ ವತಿಯಿಂದ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.