×
Ad

ಯುಪಿಸಿಎಲ್‌ನಿಂದ ರಾಜ್ಯಕ್ಕೆ ಸಾವಿರ ಮೆಗಾ ವ್ಯಾಟ್ ವಿದ್ಯುತ್: ಸಚಿವ ಕೆ.ಜೆ. ಜಾರ್ಜ್

Update: 2024-02-06 21:40 IST

ಉಡುಪಿ: ಜಿಲ್ಲೆಯ ಪಡುಬಿದ್ರಿ ಸಮೀಪದ ನಂದಿಕೂರಿನಲ್ಲಿ ಕಾರ್ಯಾಚರಿಸುತ್ತಿರುವ ಕಲ್ಲಿದ್ದಲು ಆಧಾರಿತ ಯುಪಿಸಿಎಲ್‌ ನಿಂದ ರಾಜ್ಯಕ್ಕೆ ಪ್ರತಿದಿನ ಒಂದು ಸಾವಿರ ಮೆಗಾ ವ್ಯಾಟ್ ವಿದ್ಯುತ್ ನಿರಂತರವಾಗಿ ದೊರಕುತ್ತಿದೆ ಎಂದು ರಾಜ್ಯ ಇಂಧನ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.

ಮಣಿಪಾಲದಲ್ಲಿ ಮೆಸ್ಕಾಂ ಹಾಗೂ ಕೆಪಿಟಿಸಿಎಲ್‌ನ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡುತಿದ್ದರು. ಕಾಂಗ್ರೆಸ್ ಆಡಳಿತಕ್ಕೆ ಬಂದ ಬಳಿಕ ಪ್ರತಿ ಯುನಿಟ್‌ಗೆ 6+ರೂ. ದರದಲ್ಲಿ ಅವರು ವಿದ್ಯುತ್ ನೀಡಲು ಒಪ್ಪಂದ ಮಾಡಿಕೊಂಡಿದ್ದಾರೆ. ಹಿಂದೆ ಇದ್ದ ಬಾಕಿಯನ್ನು ಸೌಹಾರ್ದಯುತವಾಗಿ ಬಗೆಹರಿಸಲಾಗಿದೆ ಎಂದರು.

ಯುಪಿಸಿಎಲ್ ಸ್ಥಾವರದ ವಿಸ್ತರಣೆಯ ಕುರಿತು, ಅವರಿಗೆ ಇನ್ನಷ್ಟು ಜಮೀನು ನೀಡುವ ಕುರಿತು ತಮಗೆ ಯಾವುದೇ ಮಾಹಿತಿ ಇಲ್ಲ. ನಾವಂತೂ ಯುಪಿಸಿಎಲ್ ವಿಸ್ತರಣೆಗೆ ಯಾವುದೇ ಅನುಮೋದನೆ ನೀಡಿಲ್ಲ ಎಂದು ಜಾರ್ಜ್ ಸ್ಪಷ್ಟಪಡಿಸಿದರು.

ನಾನು ಇಂಧನ ಖಾತೆಯನ್ನು ವಹಿಸಿಕೊಂಡ ಬಳಿಕ ಪ್ರತಿ ಎಸ್ಕಾಂಗಳ ಸಭೆಯನ್ನು ನಡೆಸುತಿದ್ದೇನೆ. ಧಾರವಾಡ, ಹುಬ್ಬಳ್ಳಿ, ಬೆಳಗಾವಿಯಲ್ಲಿ ಒಟ್ಟಾಗಿ ಸಭೆ ಕರೆದಾಗ ಸಭೆನ್ನು ನಿರೀಕ್ಷೆಯಂತೆ ನಡೆಸಲಾಗಲಿಲ್ಲ. ಹೀಗಾಗಿ ಮೆಸ್ಕಾಂನ ಸಭೆಯನ್ನು ಜಿಲ್ಲಾವಾರು ನಡೆಸಲಾಗುತ್ತಿದೆ

30,000 ಕೋಟಿ ಬಂಡವಾಳದ ಗ್ರೀನ್ ಹೈಡ್ರೋಜನ್: ಮಂಗಳೂರಿನಲ್ಲಿ ಸುಮಾರು 30ರಿಂದ 40 ಸಾವಿರ ಕೋಟಿ ರೂ.ಬಂಡವಾಳ ಹೂಡಿಕೆ ಬಯಸುವ ನವೀಕರಿಸಬಹುದಾದ ಹಸಿರು ಇಂಧನ ಗ್ರೀನ್ ಹೈಡ್ರೋಜನ್ ಉತ್ಪಾದನೆಗೆ ಯೋಜನೆಯನ್ನು ರೂಪಿಸಲಾಗುತ್ತಿದೆ. ಮೊದಲು ಪೈಲೆಟ್ ಪಾಜೆಕ್ಟ್ ಆಗಿ ಪ್ರಾರಂಭಿಸಿ ಬಳಿಕ ಇಲ್ಲೇ ಅದನ್ನು ಪೂರ್ಣಕಾಲಿಕವಾಗಿ ನಿರ್ಮಿಸಲಾಗುವುದು. ಖಾಸಗಿಯವರು ನಡೆಯುವ ಈ ಯೋಜನೆಗೆ ಸರಕಾರ ಅಗತ್ಯವಿರುವ 5000 ಮೆ.ವ್ಯಾ ವಿದ್ಯುತ್, ಜಾಗ ಎಲ್ಲವನ್ನೂ ನೀಡಲಿದೆ ಎಂದರು.

ಯೋಜನೆಗೆ ವಿಪುಲ ನೀರು ಅಗತ್ಯವಿದ್ದು, ಮಂಗಳೂರಿನಲ್ಲಿ ಸಮುದ್ರದಿಂದ ನೀರು ಪಡೆಯಬಹುದಾದ್ದರಿಂದ ಇಲ್ಲೇ ಅದನ್ನು ನಿರ್ಮಿಸ ಲಾಗುವುದು.ನೀರಿನಿಂದ ಹೈಡ್ರೋಜನ್‌ನ್ನು ಬೇರ್ಪಡಿಸಿ ಅದಕ್ಕೆ ಅಮೋನಿಯಾ ಬೆರೆಸಿ ಗ್ರೀನ್ ಹೈಡ್ರೋಜನ್ ಉತ್ಪಾದಿಸಲಾಗುವುದು. ಇದನ್ನು ಅಗತ್ಯ ಬಿದ್ದಾಗ ಬಳಸಲು ಸಾಧ್ಯವಿದೆ. ರಾಜಸ್ಥಾನ ಹಾಗೂ ಗುಜರಾತ್‌ನಲ್ಲಿ ಇದು ಈಗಾಗಲೇ ಅನುಷ್ಠಾನಗೊಂಡಿದೆ ಎಂದು ಸಚಿವರು ನುಡಿದರು.

ಉಡುಪಿ ಜಿಲ್ಲೆಯಲ್ಲಿ ಮಾತ್ರವಲ್ಲದೇ ಹೆಚ್ಚಿನ ಕಡೆಗಳಲ್ಲಿ ಲೈನ್‌ಮೆನ್‌ಗಳ ಕೊರತೆ ಇದೆ. ಕರಾವಳಿಯಲ್ಲಿ ಹೊರಜಿಲ್ಲೆಯಿಂದ ಲೈನ್‌ಮೆನ್ ಹುದ್ದೆಗೆ ನ ನೇಮಕಗೊಳ್ಳುವವರು ಪ್ರೊಬೇಷನರಿ ಅವಧಿ ಮುಗಿದ ತಕ್ಷಣ ತಮ್ಮ ಜಿಲ್ಲೆಗೆ ವರ್ಗಾವಣೆ ತೆಗೆದುಕೊಳ್ಳುತ್ತಾರೆ. ಹೀಗಾಗಿ ಖಾಲಿ ಇರುವ 6000 ಲೈನ್‌ಮೆನ್ ಹುದ್ದೆಯಲ್ಲಿ ಮೊದಲ ಹಂತದಲ್ಲಿ 3000 ಹುದ್ದೆ ತುಂಬ ಲಾಗುತ್ತದೆ. ಇದನ್ನು ಒಂದೇ ಬಾರಿ ಎಲ್ಲಾ ಜಿಲ್ಲೆಗಳಲ್ಲೂ ಆಯ್ಕೆ ಪ್ರಕ್ರಿಯೆ ನಡೆಸಿ ಆಯಾ ಜಿಲ್ಲೆಯವರು ಭಾಗವಹಿಸುವಂತೆ ಮಾಡಲಾಗುವುದು ಎಂದರು.

ಅಲ್ಲದೇ ಇನ್ನು ಮುಂದೆ ಆಯ್ಕೆಗೊಳ್ಳುವ ಲೈನ್‌ಮೆನ್‌ಗಳಿಗೆ ಸ್ಕಿಲ್ ತರಬೇತಿ ನೀಡುವ ಬಗ್ಗೆಯೂ ಯೋಜನೆ ರೂಪಿಸಲಾಗು ತ್ತದೆ ಎಂದ ಹೇಳಿದ ಕೆ.ಜೆ. ಜಾರ್ಜ್, ಸದ್ಯಕ್ಕೆ ರಾಜ್ಯದಲ್ಲಿ ವಿದ್ಯುತ ಕೊರತೆ ಇಲ್ಲ. ಮಳೆಗಾಲದಲ್ಲಿ ವಿದ್ಯುತ್ ನೀಡುವ ಒಪ್ಪಂದ ಮಾಡಿಕೊಂಡು ಪಂಜಾಬ್ ಮತ್ತು ಉತ್ತರ ಪ್ರದೇಶಗಳಿಂದ ವಿದ್ಯುತ್ ಪಡೆಯಲಾಗುತ್ತಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕೆಪಿಟಿಸಿಎನ್ ಎಂಡಿ ಪಂಕಜ್‌ಕುಮಾರ್ ಪಾಂಡೆ ಹಾಗೂ ಮೆಸ್ಕಾಂನ ಎಂಡಿ ಪದ್ಮಾವತಿ ಉಪಸ್ಥಿತರಿದ್ದರು.




Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News