×
Ad

ಕರ್ನಾಟಕ ಜನಪದ ಮಹಾಕಾವ್ಯಗಳ ಗಣಿ: ಡಾ.ವಿವೇಕ ರೈ

Update: 2024-02-10 21:44 IST

ಉಡುಪಿ, ಫೆ.10:ಜಗತ್ತಿನಲ್ಲೇ ಕರ್ನಾಟಕ ಜನಪದ ಮಹಾಕಾವ್ಯಗಳ ಗಣಿಯಾಗಿದೆ. ಇಂಥ ಮಹಾಕಾವ್ಯಗಳನ್ನು ಓದಿ, ಅರಿತುಕೊಂಡು ನಮ್ಮ ಯುವ ಜನಾಂಗ ಅನುಭವ ಪಡೆಯಬೇಕು ಎಂದು ತುಳು-ಕನ್ನಡ ಜಾನಪದ ವಿದ್ವಾಂಸ, ನಿವೃತ್ತ ಕುಲಪತಿ ಡಾ.ಬಿ.ಎ.ವಿವೇಕ ರೈ ಹೇಳಿದ್ದಾರೆ.

ಉಡುಪಿಯ ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ ಹಾಗೂ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ) ಸಹಯೋಗದಲ್ಲಿ ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಶನಿವಾರ ನಡೆದ ಜನಪದ ವಿದ್ವಾಂಸ ಡಾ.ಕೆ.ಚಿನ್ನಪ್ಪ ಗೌಡ ಅವರ ಮಾಚಾರು ಗೋಪಾಲ ನಾಯ್ಕ ಹೇಳಿದ ‘ಸಿರಿ ಸಂಧಿ’ ಕೃತಿಯನ್ನು ಲೋಕಾರ್ಪಣ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ಕರ್ನಾಟಕ ಮಹಾಕಾವ್ಯಗಳ ಗಣಿಯಾಗಿದ್ದರೂ, ಇಂದಿನ ನಗರದಲ್ಲಿ ಹುಟ್ಟಿ ಬೆಳೆದು ಪ್ಲಾಟ್ ಸಂಸ್ಕೃತಿಯನ್ನು ಮಾತ್ರ ತಿಳಿದಿರುವ ಯುವ ಜನಾಂಗ ಲೋಕದೃಷ್ಟಿಯ ಚಿಂತನೆಯನ್ನು ಕಳೆದುಕೊಂಡಿದೆ. ಓದು-ಬರಹ ಅರಿಯದ ಹಳ್ಳಿಯಲ್ಲಿ ಹುಟ್ಟಿ ಬೆಳೆದ ಗೋಪಾಲ ನಾಯ್ಕ ಕಟ್ಟುತಿದ್ದ ಸಿರಿ ಮಹಾಕಾವ್ಯ ವನ್ನು ಡಾ.ಗೌಡರು ಮೊದಲ ಬಾರಿಗೆ ಸಮಗ್ರವಾಗಿ ಕನ್ನಡದಲ್ಲಿ ಕಟ್ಟಿಕೊಟ್ಟಿದ್ದಾರೆ. ಸಿರಿ-ಸೊನ್ನೆ-ಗಿಂಡಿ-ಅಬ್ಬಯ-ದಾರಯ ಮಹಾಕಾವ್ಯವನ್ನು ಈ ಮೂಲಕ ಜನಸಾಮಾನ್ಯರೂ ಅರಿಯು ವಂತೆ ಮಾಡಿದ್ದಾರೆ ಎಂದರು.

ದಿ.ಮಾಚಾರು ಗೋಪಾಲ ನಾಯ್ಕರಿಗಿದ್ದ ಲೋಕದೃಷ್ಟಿ ನಗರದ ಪ್ಲಾಟ್‌ಗಳಲ್ಲಿರುವವರಿಗೂ ಬರಬೇಕು. ಇಂದಿನ ಕೃತಕ ಬುದ್ದಿಮತ್ತೆಯು ದೇಸಿ ಜ್ಞಾನಕ್ಕೆ ಪರ್ಯಾಯವಾಗಬಹುದೇ ಎಂಬುದು ಚಿಂತನಾರ್ಹ ವಿಷಯ. ಗೋಪಾಲ ನಾಯ್ಕ, ಕರ್ಗಿ ಶೆಟ್ಟಿ, ರಾಮಕ್ಕ ಮೊಗೇರ್ತಿ, ಚನ್ನಯ್ಯ ಪೂಜಾರಿ ಮುಂತಾದವರು ಕಟ್ಟಿಕೊಡುತಿದ್ದ ಪಾಡ್ದನವನ್ನು ಪೀಟರ್ ಜೆ.ಕ್ಲಾಸ್, ಲ್ಯಾರಿ ಹ್ಯಾಂಕೋ ಮುಂತಾದವರು ಜಾಗತಿಕ ಮಟ್ಟಕ್ಕೆ ತಲುಪಿಸಿದ್ದಾರೆ ಎಂದರು.

ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಮಾಹೆ ವಿವಿಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್ ಮಾತ ನಾಡಿ ಸಂಸ್ಕೃತಿ, ಪರಂಪರೆ, ಕಲೆಯಲ್ಲಿ ವಿದ್ಯಾರ್ಥಿಗಳು, ಯುವಜನತೆಯಲ್ಲಿ ಆಸಕ್ತಿ ಮೂಡಿಸುವುದು ನಮ್ಮೆಲ್ಲರ ಕರ್ತವ್ಯ. ಈ ನಿಟ್ಟಿನಲ್ಲಿ ಆರ್‌ಆರ್‌ಸಿ, ಕನಕದಾಸ ಅಧ್ಯಯನ ಪೀಠ, ಯಕ್ಷಗಾನ ಕೇಂದ್ರ, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಮೂಲಕ ಕಲೆ ಉಳಿಸಿ, ಬೆಳೆಸಲು ಪ್ರಯತ್ನಿಸಲಾಗುತ್ತಿದೆ ಎಂದರು.

ನೂತನ ಶಿಕ್ಷಣ ನೀತಿಯು ಇದರ ಕಲಿಕೆಗೆ ಪೂರಕವಾಗಿದ್ದು ಮಾಹೆ ವಿವಿ ವಿದ್ಯಾರ್ಥಿಗಳಿಗೂ ಇಲ್ಲಿ ಕಲಿಕೆಗೆ ಅವಕಾಶ ನೀಡಲಾಗುತ್ತಿದೆ ಎಂದರು. ಎಂಜಿಎಂ ಕಾಲೇಜಿನ ಮಾಜಿ ಪ್ರಾಂಶುಪಾಲರೂ, ಉಡುಪಿಯ ಕಲೆ, ಆಹಿತ್ಯ ಹಾಗೂ ಸಂಸ್ಕೃತಿ ಹರಿಕಾರರಾಗಿ ಪ್ರಸಿದ್ಧರಾಗಿದ್ದ ಡಾ.ಕು.ಶಿ.ಹರಿದಾಸ ಭಟ್ಟರ ಜನ್ಮಶತಮಾನೋತ್ಸವ ಆಚರಣೆಯ ಸಲಹೆಗೆ ಮಾಹೆ ವಿವಿ ಸಹಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್ ಸ್ಪಂದಿಸಿ ಮಾರ್ಚ್ ತಿಂಗಳಲ್ಲಿ ಮೂರು ದಿನಗಳ ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು.

ಎಂಜಿಎಂ ಕಾಲೇಜಿನ ಪ್ರಿನ್ಸಿಪಾಲ್ ಪ್ರೊ..ಲಕ್ಷ್ಮೀನಾರಾಯಣ ಕಾರಂತ ಉಪಸ್ಥಿತರಿದ್ದರು. ಕೃತಿಕಾರ ಡಾ.ಕೆ.ಚಿನ್ನಪ್ಪ ಗೌಡ ಮಾತನಾಡಿ, ರಾಮಾಯಣ, ಮಹಾಭಾರತದಂತಹ ಶಿಷ್ಟ ಕಾವ್ಯದಷ್ಟೇ ಜನಪದ ಕಾವ್ಯಕ್ಕೂ ತಾಕತ್ತಿದೆ. ಇದಕ್ಕರ ಶೈಕ್ಷಣಿಕ ಛಾಪು ಸಿಗಬೇಕು ಎಂದು ಹೇಳಿದರು.

ವಿಮರ್ಶಕ ಡಾ.ಜನಾರ್ದನ ಭಟ್ ಕೃತಿ ಪರಿಚಯ ಮಾಡಿದರು. ಕೇಂದ್ರದ ಆಡಳಿತಾಧಿಕಾರಿ ಡಾ.ಬಿ.ಜಗದೀಶ್ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನ್ನಾಡಿ ದರು. ಕನಞನಡ ಉಪನ್ಯಾಸಕಿ ಅಂಬಿಕಾ ನಿರೂಪಿಸಿ, ವಂದಿಸಿದರು.





 


 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News