×
Ad

ಟ್ರಾಫಿಕ್ ಸಿಗ್ನಲ್ ಯೋಜನೆಗೆ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣರಿಂದ ತಡೆ: ರಘುಪತಿ ಭಟ್ ಆರೋಪ

Update: 2025-01-22 19:01 IST

ಯಶ್‌ಪಾಲ್ ಸುವರ್ಣ - ರಘುಪತಿ ಭಟ್ 

ಉಡುಪಿ: ವಾಹನ ದಟ್ಟಣೆ ನಿಯಂತ್ರಣದ ಹೆಸರಿನಲ್ಲಿ ನಗರದ ಕಲ್ಸಂಕ ಜಂಕ್ಷನ್ ಮುಚ್ಚಿರುವುದು ಅವೈಜ್ಞಾನಿಕವಾಗಿದ್ದು, ಇದನ್ನು ಕೂಡಲೇ ತೆರವುಗೊಳಿಸಿ, ಈಗಾಗಲೇ ಟೆಂಡರ್ ಆಗಿರುವ ಟ್ರಾಫಿಕ್ ಸಿಗ್ನಲ್ ಅಳವಡಿಸುವ ಯೋಜನೆಯನ್ನು ಅನುಷ್ಠಾನಗೊಳಿಸಬೇಕು. ಆದರೆ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ, ಈ ಯೋಜನೆ ಅನುಷ್ಠಾನಕ್ಕೆ ತಡೆಯೊಡ್ಡುವ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ ರಘುಪತಿ ಭಟ್ ಗಂಭೀರವಾಗಿ ಆರೋಪಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಯೋಜನೆಯ ಬಗ್ಗೆ ಶಾಸಕರಿಗೆ ಗುತ್ತಿಗೆದಾರ ರನ್ನು ಕರೆದುಕೊಂಡು ಹೋಗಿ ಮನವರಿಕೆ ಮಾಡಿಕೊಟ್ಟಿದ್ದೇನೆ. ಆದರೆ ಶಾಸಕರು ಗುತ್ತಿಗೆದಾರನಿಗೆ ಗದಗಿಸಿ ಈ ಕಾಮಗಾರಿಯನ್ನು ನಿಲ್ಲಿಸಿದ್ದಾರೆ. ಈ ಯೋಜನೆಗೆ ನನ್ನ ಅವಧಿಯಲ್ಲಿ ಟೆಂಡರ್ ಆಗಿರುವ ಕಾರಣಕ್ಕಾಗಿಯೇ ಶಾಸಕರು ಈ ರೀತಿ ಮಾಡಿದ್ದಾರೆ ಎಂದು ದೂರಿದರು.

ಇಲ್ಲಿನ ವಾಹನ ದಟ್ಟಣೆ ಪರಿಹಾರಕ್ಕೆ ಪ್ಲೈಓವರ್ ನಿರ್ಮಿಸಿದರೆ ಕಲ್ಸಂಕ- ಮಣಿಪಾಲ ರಸ್ತೆಯ ವಾಣಿಜ್ಯ ವಹಿವಾಟುಗಳ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ. ಒಂದು ವೇಳೆ ಪ್ಲೈಓವರ್ ನಿರ್ಮಿಸುವುದಾದರೆ ಸಾರ್ವಜನಿಕ ಅಭಿಪ್ರಾಯ ಸಂಗ್ರಹ ಹಾಗೂ ಚರ್ಚೆಗಳನ್ನು ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳ ಬೇಕು ಎಂದು ಅವರು ಸಂಸದರನ್ನು ವಿನಂತಿಸಿದರು.

ಟ್ರಾಫಿಕ್ ಒತ್ತಡ ಕಡಿಮೆ ಮಾಡಲು ಕಲ್ಸಂಕ ಜಂಕ್ಷನ್ ಹಾಗೂ ಬನ್ನಂಜೆ ಸರ್ಕಲ್‌ನಲ್ಲಿ ಸಿಗ್ನಲ್ ರಹಿತವಾಗಿ 70 ಮೀಟರ್ ಸುತ್ತಳತೆಯ ಸರ್ಕಲ್ ನಿರ್ಮಿಸಲು ನಾನು ಶಾಸಕನಾಗಿದ್ದಾಗ ಯೋಜನೆ ರೂಪಿಸಿ ಕೇಂದ್ರ ಸಚಿವರಿಗೆ ಮನವಿ ನೀಡಲಾ ಗಿತ್ತು. ಇದೀಗ ಈ ವೃತ್ತ ರಚನೆಯ ಪ್ರಸ್ತಾಪವನ್ನು ಕೇಂದ್ರ ಬಜೆಟ್‌ನಲ್ಲಿ ಸೇರ್ಪಡೆಗೊಳಿಸಲು ಸಂಸದರು ಪ್ರಯತ್ನಿಸಬೇಕು ಎಂದು ಅವರು ತಿಳಿಸಿದರು.

ನಗರ ಬೆಳೆದಂತೆ ವಾಹನ ಹಾಗೂ ಸಂಚಾರ ದಟ್ಟಣೆ ಆಗುವುದು ಸಹಜ. ಅದಕ್ಕೆ ರಸ್ತೆಗಳನ್ನು ಡಿವೈಡರ್‌ಗಳನ್ನು ಮುಚ್ಚುವುದು ಶಾಶ್ವತ ಪರಿಹಾರ ಮಾರ್ಗ ಅಲ್ಲ. ರಸ್ತೆಗಳನ್ನು ಮುಚ್ಚುವುದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆ ಆಗುತ್ತದೆ. ಆದುದರಿಂದ ಗುತ್ತಿಗೆದಾರರೊಂದಿಗೆ ಮಾತನಾಡಿ ಕಲ್ಸಂಕ ಜಂಕ್ಷನ್ ನಲ್ಲಿ ಕೂಡಲೇ ಟ್ರಾಫಿಕ್ ಸಿಗ್ನಲ್ ಅಳವಡಿಕೆ ಮಾಡಬೇಕು. ಆ ಮೂಲಕ ಸಂಚಾರ ದಟ್ಟಣೆಯ ಒತ್ತಡವನ್ನು ಕಡಿಮೆ ಮಾಡಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ಅವರು ಒತ್ತಾಯಿಸಿದರು.

ಉಡುಪಿ ನಗರಸಭೆ ನೂತಕ ಕಟ್ಟಡ ನಿರ್ಮಾಣಕ್ಕೆ ಕಂದಾಯ ಇಲಾಖೆ ನೀಡಿರುವ ಹಳೆ ತಾಲೂಕು ಕಚೇರಿ ಜಾಗದಲ್ಲಿರುವ ಜೈಲನ್ನು ಬೇರೆ ಕಡೆ ಸ್ಥಳಾಂತರಿಸಬೇಕು. ಆ ಮೂಲಕ ಅಲ್ಲಿನ ಪೂರ್ಣ ಜಾಗವನ್ನು ನಗರಸಭೆ ಕಟ್ಟಡ ನಿರ್ಮಿಸಲು ಅನುವು ಮಾಡಿಕೊಡಬೇಕು. ಅಲ್ಲದೆ ಅಲ್ಲೇ ಸಮೀಪ ಇರುವ ಉಪವಿಭಾಧಿಕಾರಿಗಳ ಕಚೇರಿ ಹಾಗೂ ನಿವಾಸಕ್ಕೆ ಕಾಯ್ದಿರಿಸಲಾಗಿರುವ ಅಂದಾಜು ಒಂದು ಎಕರೆ ಜಾಗವನ್ನು ನಗರಸಭೆಗೆ ಉಚಿತವಾಗಿ ನೀಡಬೇಕು ಎಂದು ಅವರು ಜಿಲ್ಲಾಧಿಕಾರಿ ಅವರಲ್ಲಿ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ನಗರಸಭೆ ಸದಸ್ಯ ಮಹೇಶ್ ಠಾಕೂರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News