×
Ad

ಕೋ.ಚೆ. ಅನ್ಯಾಯಕ್ಕೆ ಸಿಡಿಯುವ ಬೆಂಕಿನ ಕಿಡಿ: ಶಾಂತಾ ಜಯಪ್ರಸಾದ್

Update: 2025-01-24 19:01 IST

ಉಡುಪಿ: ‘ಅನ್ಯಾಯಕ್ಕೆ ಸಿಡಿಯುವ ಬೆಂಕಿಯ ಕಿಡಿಯಾಗಿ, ಅಮಾಯಕರ ಅಸಹಾಯಕ ಬದುಕಿಗೆ ಸದಾ ಮಿಡಿಯುತ್ತಿದ್ದ ನ್ಯಾಯಾಧೀಶ, ಬರಹಗಾರ, ಸಾಮಾಜಿಕ ಹೋರಾಟಗಾರ, ಕರ್ನಾಟಕದ ಏಕೀಕರಣದ ರೂವಾರಿ ಚನ್ನಬಸಪ್ಪನವರು ಒಬ್ಬ ಒಳ್ಳೆಯ ಕುಟುಂಬ ಜೀವಿ ಆಗಿಯೂ ನಮಗೆ ಕಲಿಸಿ ಹೋದ ಪಾಠಗಳು ಅತ್ಯಂತ ಮೌಲಿಕವಾದವುಗಳು’ ಎಂದು ಖ್ಯಾತ ಸಾಹಿತಿ, ನ್ಯಾಯಧೀಶರಾಗಿದ್ದ ಕೋ.ಚನ್ನಬಸಪ್ಪ ಅವರ ಮಗಳು ಹಾಗೂ ‘ಚನ್ನಬಸಪ್ಪ ಸಾಹಿತ್ಯ ಮತ್ತು ಶಿಕ್ಷಣ ದತ್ತಿ ಪ್ರತಿಷ್ಠಾನ’ದ ಅಧ್ಯಕ್ಷೆ ಶಾಂತಾ ಜಯಪ್ರಸಾದ್ ಹೇಳಿದ್ದಾರೆ.

ಕನ್ನಡ ಪುಸ್ತಕ ಪ್ರಾಧಿಕಾರ, ಕೋ.ಚನ್ನಬಸಪ್ಪ ಸಾಹಿತ್ಯ ಮತ್ತು ಶಿಕ್ಷಣ ದತ್ತಿ ಪ್ರತಿಷ್ಠಾನಗಳು ತೆಂಕನಿಡಿಯೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ಮತ್ತು ಹಿರಿಯಡಕ ಸರಕಾರಿ ಪ್ರಥಮ ದರ್ಜೆ ಕಾಲೇಜು ಇವುಗಳ ಸಹಯೋಗದಲ್ಲಿ ಆಯೋಜಿಸಿದ್ದ ‘ಸ್ವಾತಂತ್ರ್ಯಯೋಧ, ಹಿರಿಯ ಸಾಹಿತಿ ಕೋ.ಚನ್ನಬಸಪ್ಪನವರ ಕೃತಿಗಳ ಅವಲೋಕನ’ ಎಂಬ ಒಂದು ದಿನದ ಕಮ್ಮಟವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಕಾರ್ಯಾಗಾರದ ಮೊದಲ ಗೋಷ್ಠಿಯ ಸಂಪನ್ಮೂಲ ವ್ಯಕ್ತಿಯಾಗಿ ‘ಜನಪರ ನ್ಯಾಯಾಧೀಶರಾಗಿ ಕೋ.ಚೆ.’ ಎನ್ನುವ ವಿಷಯದ ಮೇಲೆ ಮಾತನಾಡಿದ ನಿವೃತ್ತ ಪ್ರಾಂಶುಪಾಲ ಡಾ.ದಿನೇಶ್ ಹೆಗ್ಡೆ,ಜನ್ಮತಃ ಜೀವಪರ ನ್ಯಾಯಾಧೀಶರೇ ಆಗಿದ್ದ ಕೋ.ಚೆನ್ನಬಸಪ್ಪ ಅವರು ಜನಸಾಮಾನ್ಯರ ಅನುಭವಗಳನ್ನು ತನ್ನದಾಗಿಸಿಕೊಂಡು ಬದುಕಿದವರು ಮಾತ್ರವಲ್ಲ ಕುವೆಂಪು ಮುಂತಾದವರ ವೈಜ್ಞಾನಿಕ, ವೈಚಾರಿಕತೆಯಿಂದ ಹದಗೊಂಡ ಪ್ರಜ್ಞೆಯಲ್ಲಿ ಲೋಕವನ್ನು ಜಾತಿ, ಲಿಂಗ, ಧರ್ಮದ ಗೋಡೆಯಿಲ್ಲದೆ ಬಯಲಾಗಿಯೇ ಕಂಡವರು’ ಎಂದರು.

ಎರಡನೆಯ ಗೋಷ್ಠಿಯಲ್ಲಿ ‘ಕೋ.ಚೆನ್ನಬಸಪ್ಪ ಅವರ ಸಾಹಿತ್ಯದಲ್ಲಿ ಪ್ರಗತಿಶೀಲತೆ’ ಎಂಬ ವಿಷಯದ ಕುರಿತು ಮಾತನಾ ಡಿದ ಉಜಿರೆ ಎಸ್.ಡಿ.ಎಂ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ರಾಜಶೇಖರ ಹಳೆಮನೆ, ಕೋ. ಚನ್ನಬಸಪ್ಪನವರ ಬರಹಗಳು ಆಲಯವನ್ನು ನಿರಾಕರಿಸಿ ಕನ್ನಡದ ಶರಣ ವಿವೇಕವಾದ ಬಯಲನ್ನು ಅಪ್ಪಿಕೊಂಡವುಗಳು ಮಾತ್ರವಲ್ಲ ವೈಜ್ಞಾನಿಕ, ವೈಚಾರಿಕ ತಳಹದಿಯಲ್ಲಿ ರೂಪುಗೊಂಡ ನೈತಿಕ ರಾಜಕೀಯ ಪ್ರಜ್ಞೆಯುಳ್ಳ ವಿಶ್ವಾತ್ಮಕ ಸರ್ವೋದಯ ಸಮನ್ವಯದ ಸಾಂಸ್ಕೃತಿಕ ಅನ್ವೇಷಣೆಯ ಪ್ರಗತಿಶೀಲ ಮಾದರಿಗಳು ಎಂದು ಅಭಿಪ್ರಾಯಪಟ್ಟರು.

‘ಕರುಣೆಯನ್ನೇ ಧರ್ಮವೆಂಬ ಜೀವಪರ ಸತ್ಯವಾಗಿ ಮಂಡಿಸುವ ಕೋ.ಚೆ. ಬರಹಗಳು ಧರ್ಮಾಂಧತೆಯನ್ನು ರೂಪಿಸುವ ಹುಸಿಧಾರ್ಮಿಕತೆಗೆ ಬದಲಾಗಿ ಪರಮಹಂಸ, ವಿವೇಕಾನಂದ, ಅರವಿಂದ ಹಾಗೂ ಕುವೆಂಪು ಅವರ ಸಾಮಾಜಿಕ ಆಧ್ಯಾತ್ಮ ವನ್ನು ಮುಂದಿಡುತ್ತವೆ ಮತ್ತು ನಿರ್ಲಕ್ಷಿತರ ಬದುಕಿನ ವಿಕಾಸದಲ್ಲಿಯೇ ನಿಜವಾದ ಪ್ರಗತಿಯನ್ನು ಕಾಣುತ್ತವೆ’ ಎಂದರು.

ಪ್ರಾಸ್ತಾವಿಕ ಮಾತುಗಳನ್ನಾಡಿದ ಹಿರಿಯಡಕ ಸ.ಪ್ರ.ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಜಯಪ್ರಕಾಶ್ ಶೆಟ್ಟಿ ಮಾತ ನಾಡಿ, ಕನ್ನಡದಲ್ಲಿ ಗಾಂಧೀ ಮತ್ತು ಕುವೆಂಪು ಇಬ್ಬರನ್ನೂ ಆವಾಹಿಸಿಕೊಂಡು ಬದುಕಿದ ಕೋ.ಚೆ. ‘ಮನುಷ್ಯಜಾತಿ ತಾನೊಂದೆವಲಂ’ ಎಂದ ಪಂಪನ ಮಾತನ್ನು ದಿಟವಾಗಿಯೂ ಬಾಳುವ ಮೂಲಕ ಕನ್ನಡದ ಪಾಲಿನ ನಿಜದ ನಾಡೋಜನಾದವರು’ ಎಂದರು.

ಕಾರ‌್ಯಕ್ರಮದ ಅಧ್ಯಕ್ಷತೆಯನ್ನು ತೆಂಕನಿಡಿಯೂರು ಸ.ಪ್ರ.ದ. ಕಾಲೇಜಿನ ಪ್ರಾಂಶುಪಾಲ ನಿತ್ಯಾನಂದ ವಿ. ಗಾಂವಕರ ವಹಿಸಿದ್ದರು.ಕನ್ನಡ ವಿಭಾಗ ಮುಖ್ಯಸ್ಥೆ ರತ್ನಮಾಲಾ ಸ್ವಾಗತಿಸಿ, ಅರ್ಚನಾ ವಂದಿಸಿದರು. ಶಾಲಿನಿ ಯು.ಬಿ. ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News