ಜಬ್ಬಾರ್ ಸುಮೊಗೆ ಮುಳಿಯ ಪ್ರಶಸ್ತಿ
ಜಬ್ಬಾರ್ ಸುಮೊ
ಉಡುಪಿ: ಕನ್ನಡ ಸಾರಸ್ವತ ಲೋಕದ ಹಿರಿಯ ವಿದ್ವಾಂಸ ಮುಳಿಯ ತಿಮ್ಮಪ್ಪಯ್ಯನವರ ನೆನಪಿನಲ್ಲಿ ನೀಡಲಾಗುವ ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿಗೆ ಖ್ಯಾತ ಯಕ್ಷಗಾನ ಅರ್ಥದಾರಿ ಮತ್ತು ವೇಷದಾರಿ ಜಬ್ಬಾರ್ ಸುಮೊ ಅವರು ಆಯ್ಕೆಯಾಗಿದ್ದಾರೆ.
ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಮೂಲಕ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಪ್ರಶಸ್ತಿಯು 25000ರೂ. ನಗದು ಹಾಗೂ ಪ್ರಶಸ್ತಿ ಪತ್ರವನ್ನೊಳಗೊಂಡಿರುತ್ತದೆ. ಪ್ರಶಸ್ತಿ ಪ್ರದಾನ ಸಮಾರಂಭ ಫೆಬ್ರವರಿ 22ರಂದು ನಡೆಯಲಿದೆ ಎಂದು ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಲಿಪ ನಾರಾಯಣ ಭಾಗವತರು, ನಿಡ್ಲೆ ನರಸಿಂಹ ಭಟ್ಟ ಹಾಗೂ ದಿವಾಣ ಭೀಮ ಭಟ್ಟರ ಹಿಮ್ಮೇಳದಲ್ಲಿ ಬಣ್ಣದ ಮಾಲಿಂಗರಂತಹ ಹಿರಿಯ ಕಲಾವಿದ ರೊಂದಿಗೆ ವಿವಿಧ ಪಾತ್ರಗಳನ್ನು ಮಾಡುವುದರೊಂದಿಗೆ ಅರ್ಥಧಾರಿ ಗಳಾದ ಜಬ್ಬಾರ್ ಸುಮೊ, ಬಲಿ, ಶುಕ್ರಾಚಾರ್ಯ, ಕಾರ್ತವೀರ್ಯ, ವಾಲಿ, ಸುಗ್ರೀವ, ರಾವಣ, ಪ್ರಹಸ್ತ, ಅಂಗದ, ಇಂದ್ರಜಿತು, ವೀರಮಣಿ, ಅರ್ಜುನ, ಕರ್ಣ, ಶಲ್ಯ, ಭೀಮ, ಕೌರವ, ಶ್ರೀ ಕೃಷ್ಣ, ಭೀಷ್ಮ, ಸುಧನ್ವ, ತಾಮ್ರಧ್ವಜ ಇತ್ಯಾದಿ ಪಾತ್ರಗಳನ್ನು ಮಾಡಿ ಜನಮನ್ನಣೆ ಗಳಿಸಿದ್ದಾರೆ.
ಮಂಗಳೂರು ಸಂದೇಶ ಪ್ರತಿಷ್ಠಾನ, ಆಳ್ವಾಸ್ ನುಡಿಸಿರಿ, ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಉಡುಪಿ ಕಲಾರಂಗದಿಂದ ಪ್ರಶಸ್ತಿ, ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಪ್ರಶಸ್ತಿ ಸೇರಿ ಹತ್ತು ಹಲವು ಪ್ರಶಸ್ತಿ- ಸಮ್ಮಾನಗಳಿಗೆ ಭಾಜನರಾಗಿದ್ದಾರೆ.