ಹೊಸಬೆಳಕು ಆಶ್ರಮವಾಸಿಗಳೊಂದಿಗೆ ‘ಮಣ್ಣಿನ ಆಟ’
ಉಡುಪಿ, ಫೆ.11: ಹೊಸಬೆಳಕು ಸೇವಾ ಟ್ರಸ್ಟ್ನ ಸಹಯೋಗದೊಂದಿಗೆ ಖ್ಯಾತ ಟೆರಾಕೋಟಾ ಕಲಾವಿದ ವೆಂಕಿ ಪಲಿಮಾರು ಅವರು ಆಶ್ರಮವಾಸಿಗಳ ಮನೋರಂಜನೆಗಾಗಿ ಒಂದು ದಿನದ ಆವೆಮಣ್ಣಿನ ಕಲಾಕೃತಿ ರಚನಾ ತರಬೇತಿ ಶಿಬಿರವನ್ನು ಹಮ್ಮಿಕೊಂಡಿದ್ದರು.
ಶಿಬಿರವನ್ನು ಖ್ಯಾತ ಕಂಪ್ಯೂಟರ್ ಕನ್ನಡ ಲಿಪಿ ಜನಕ ಡಾ.ಕೆ.ಪಿ.ರಾವ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಶಿಬಿರಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಖ್ಯಾತ ಪರಿಸರವಾದಿ ಡಾ.ರವೀಂದ್ರನಾಥ್ ಶಾನ್ಭಾಗ್, ಡಾ. ರಾಜೇಂದ್ರ ಭಟ್, ಅವಿನಾಶ್ ಕಾಮತ್, ರಾಮಕೃಷ್ಣ ಕಾಮತ್, ವಿಕ್ರಮ್ ಹೆಗ್ಡೆ, ಡಾ.ಎಂ.ಶಶಿಕುಮಾರ್ ಆಚಾರ್ ಹಾಗೂ ಹೊಸಬೆಳಕು ಸೇವಾಟ್ರಸ್ಟ್ನ ಸ್ಥಾಪಕರಾದ ತನುಲ ತರುಣ್ ಉಪಸ್ಥಿತರಿದ್ದರು.
ಯುವ ಪ್ರತಿಭೆ ಪ್ರಥಮ್ ಕಾಮತ್ ಕಟಪಾಡಿ ಇವರಿಂದ ಆಶ್ರಮವಾಸಿಗಳ ಮನೋರಂಜನೆಗಾಗಿ ಜಾದೂ ಪ್ರದರ್ಶನ ನಡೆಯಿತು. ಆಶ್ರಮ ವಾಸಿಗಳ ಜೊತೆಗೆ ಬೆರೆತ 100ಕ್ಕೂ ಅಧಿಕ ಶಿಬಿರಾರ್ಥಿಗಳು 300ಕ್ಕೂ ಅಧಿಕ ವೈವಿಧ್ಯಮಯ ಕಲಾಕೃತಿಗಳನ್ನು ಆವೆಮಣ್ಣಿನಲ್ಲಿ ರಚಿಸಿದರು.
ಆವೆಮಣ್ಣಿನ ಕಲಾಕೃತಿ ರಚನಾ ಮತ್ತು ತರಬೇತಿಯಲ್ಲಿ ವೆಂಕಿ ಪಲಿಮಾರು ಅವರೊಂದಿಗೆ ಕಲಾವಿದರಾದ ಶ್ರೀನಾಥ್ ಮಣಿಪಾಲ್, ರವಿ ಹಿರೆಬೆಟ್ಟು ಪ್ರಸನ್ನಕುಮಾರ್, ಲಾರೆನ್ ಪಿಂಟೊ, ರಕ್ಷಾ ಪೂಜಾರಿ, ನಯನಾ ಆಚಾರ್ಯ, ಬಲರಾಮ್ ಭಟ್, ವರ್ಣಿತಾ ಕಾಮತ್, ಪದ್ಮಾವತಿ ಕಾಮತ್ ಜ್ಯೋತಿ ಪಿಂಟೋ, ಶಕುಂತಲ ಅರ್ ಶೆಣೈ ಸಹಕರಿಸಿದರು. ಸುಧಾಕರ್ ಶೆಣೈ ಕಾರ್ಯಕ್ರಮ ನಿರ್ವಹಿಸಿದರು.