ಚಿತ್ರ ನಿರ್ಮಾಣದಲ್ಲಿ ನಿರ್ದೇಶಕರ ತಾತ್ವಿಕ ದೃಷ್ಟಿಕೋನವೇ ಮಹತ್ವದ್ದು: ಪಿ.ಎನ್.ರಾಮಚಂದ್ರ
ಮಣಿಪಾಲ, ಫೆ.22: ಚಿತ್ರ ನಿರ್ಮಾಣದಲ್ಲಿ ಚಿತ್ರ ನಿರ್ದೇಶಕರ ತಾತ್ವಿಕ ದೃಷ್ಟಿಕೋನ ಎಲ್ಲಾ ತಾಂತ್ರಿಕ ಅಂಶಗಳಿಗಿಂತ ಹೆಚ್ಚು ಮಹತ್ವದ್ದು ಮತ್ತು ಈ ದೃಷ್ಟಿಕೋನವೇ ತಾಂತ್ರಿಕ ಅಂಶಗಳು ಬಳಸಲ್ಪಡುವ ರೀತಿಯನ್ನು ನಿರ್ಧರಿಸುತ್ತವೆ ಎಂದು ಪ್ರಶಸ್ತಿ ವಿಜೇತ ಚಿತ್ರ ನಿರ್ದೇಶಕ ಪಿ.ಎನ್. ರಾಮಚಂದ್ರ ಅಭಿಪ್ರಾಯ ಪಟ್ಟಿದ್ದಾರೆ.
ಮಣಿಪಾಲ ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಆಂಡ್ ಸೈನ್ಸಸ್ (ಜಿಸಿಪಿಎಎಸ್), ಉಡುಪಿ ಚಿತ್ರ ಸಮಾಜದ ಆಶ್ರಯದಲ್ಲಿ ಚಲನಚಿತ್ರ ನಿರ್ಮಾಣದ ಕರಕುಶಲತೆಯ ಕುರಿತು ಇತ್ತೀಚೆಗೆ ಆಯೋಜಿಸಿದ ಗೋಷ್ಠಿಯಲ್ಲಿ ಅವರು ಮಾತನಾಡುತಿದ್ದರು.
ಪಿ.ಎನ್.ರಾಮಚಂದ್ರ ಅವರು ಚಿತ್ರ ರಚನೆಯ ವಿವಿಧ ಅಂಶಗಳ - ಚಿತ್ರಕಥೆ, ಛಾಯಾಗ್ರಹಣ, ಸಂಕಲನ, ಪಾತ್ರಗಳು ಮತ್ತು ನಟನೆ, ಧ್ವನಿ, ರಂಗಸಜ್ಜಿಕೆ ಇತ್ಯಾದಿ- ಕುರಿತು ವಿವರಿಸಿದರು. ‘ಈ ಎಲ್ಲ ತಾಂತ್ರಿಕ ಅಂಶಗಳು ಮುಖ್ಯವಾದದ್ದು, ಆದರೆ ಚಲನಚಿತ್ರ ನಿರ್ದೇಶಕರ ತಾತ್ವಿಕ ದೃಷ್ಟಿಕೋನವು ಹೆಚ್ಚು ಮುಖ್ಯವಾಗಿದೆ’ ಎಂದು ಅವರು ಸಮರ್ಥಿಸಿಕೊಂಡರು.
ತಾತ್ವಿಕ ದೃಷ್ಟಿಕೋನವನ್ನು ಚಲನಚಿತ್ರದಲ್ಲಿ ತರಲು ಎಲ್ಲಾ ತಾಂತ್ರಿಕತೆಗಳನ್ನು ಸಜ್ಜುಗೊಳಿಸಬೇಕಾಗಿದೆ. ಚಲನಚಿತ್ರ ನಿರ್ದೇಶಕರ ತಾತ್ವಿಕ ನೆಲೆಯು ಚಲನಚಿತ್ರ ನಿರ್ಮಾಣದ ಕರಕುಶಲ ಸ್ವರೂಪವನ್ನು ಸಹ ನಿರ್ಧರಿಸುತ್ತದೆ ಎಂದು ಅವರು ಹೇಳಿದರು.
ಬಳಿಕ ರಾಮಚಂದ್ರರ ಇತ್ತೀಚಿನ ಚಿತ್ರ ’ಹಿಯರ್ ಓ, ಮಹಾತ್ಮ’ದ ಪ್ರದರ್ಶನವೂ ನಡೆಯಿತು. ಈ ಚಿತ್ರದ ಕುರಿತು ಸಂವಾದವೂ ನಡೆಯಿತು. ಪ್ರೊ.ಮುರಳೀಧರ ಉಪಾದ್ಯ ಹಿರಿಯಡ್ಕ, ಪ್ರೊ.ಫಣಿರಾಜ್, ಪ್ರೊ. ವರದೇಶ್ ಹಿರೇಗಂಗೆ, ಡಾ.ಶ್ರೀಕುಮಾರ್, ಉದ್ಯಾವರ ನಾಗೇಶ್ ಕುಮಾರ್, ಸಂತೋಷ್ ನಾಯಕ್ ಪಟ್ಲ ಮೊದಲಾದವರು ಸಂವಾದದಲ್ಲಿ ಭಾಗವಹಿಸಿದ್ದರು.