ಬೈಂದೂರು: ಅಕ್ರಮ ಸಕ್ರಮ ಅರ್ಜಿಗಳ ಜಂಟಿ ಸರ್ವೇಗೆ ಸೂಚನೆ
ಬೈಂದೂರು, ಮಾ.2: ಬೈಂದೂರು ಹೋಬಳಿಯ ಬಗರ್ ಹುಕುಂ(ಅಕ್ರಮ ಸಕ್ರಮ) ಹಾಗೂ 94ಸಿ ಬಾಕಿ ಕಡತಗಳ ವಿಲೇವಾರಿ ಸಂಬಂಧ ಬೈಂದೂರು ತಾಲೂಕು ಕಚೇರಿಯಲ್ಲಿ ಕಂದಾಯ ಇಲಾಖಾ ಅಧಿಕಾರಿಗಳ ಜೊತೆ ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಚರ್ಚೆ ನಡೆಸಿದರು.
ಬಳಿಕ ಮಾತನಾಡಿದ ಅವರು, ಪ್ರಸ್ತುತ ಬೈಂದೂರು ಹೋಬಳಿಯಲ್ಲಿ ಸಮಸ್ಯಾತ್ಮಕವಲ್ಲದ ಎಲ್ಲಾ ಅಕ್ರಮ ಸಕ್ರಮ ಅರ್ಜಿಗಳನ್ನು ವಿಲೇವಾರಿ ಮಾಡ ಲಾಗಿದೆ. 35 ಕಡತಗಳು ತಾಂತ್ರಿಕ ಕಾರಣದಿಂದ ಮಂಜೂರಾತಿಗೆ ಬಾಕಿಯಿದ್ದು, ಅದನ್ನು ಶೀಘ್ರ ವಿಲೇವಾರಿ ಮಾಡಲಾಗುವುದು ಎಂದು ತಿಳಿಸಿದರು.
ಡೀಮ್ಡ್ ಫಾರೆಸ್ಟ್ ಪಟ್ಟಿಯಲ್ಲಿ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣದ ಸಾಕಷ್ಟು ಅರ್ಜಿಗಳು ವಿಲೇವಾರಿಗೆ ಬಾಕಿ ಇವೆ. ಅರಣ್ಯ, ಸರ್ವೇ ಹಾಗೂ ಕಂದಾಯ ಇಲಾಖೆಯ ಜಂಟಿ ಸರ್ವೇಗೆ ಈಗಾಗಲೇ ಅದರಂತೆ ನಿಗದಿ ಪಡಿಸಿದ ಕಾಲ ಮಿತಿ ಯೊಳಗೆ ಡೀಮ್ಡ್ ಫಾರೆಸ್ಟ್ನ ಸರ್ವೇ ನಡೆಸಿ ಮೂರು ಇಲಾಖೆಗಳ ಅಗತ್ಯ ಸಮನ್ವಯದೊಂದಿಗೆ ಬಗರ್ ಹುಕುಂ ಕಡತ ಗಳ ವಿಲೇವಾರಿಗೆ ಪೂರಕ ಕ್ರಮವಾಗ ಬೇಕು. ಬಾಕಿ ಉಳಿದ 94 ಸಿ ಅರ್ಜಿಗಳು ಸಹಾ ವಿಲೇವಾರಿ ಆಗಬೇಕು ಎಂದರು.
ಕುಮ್ಕಿ ವ್ಯಾಪ್ತಿಯಲ್ಲಿರುವ ಅರ್ಜಿಗಳ ವಿಲೇವಾರಿಗೆ ಮುಂದಿನ ಬಜೆಟ್ ಅಧಿವೇಶನದಲ್ಲಿ ಸದನದಲ್ಲಿ ಸಚಿವರ ಗಮನ ಸೆಳೆಯಲಾಗುವುದು. ಬೈಂದೂರು ಹಾಗೂ ವಂಡ್ಸೆ ಹೋಬಳಿಯಲ್ಲಿ ಕುಮ್ಕಿ ಮಿತಿಯಲ್ಲಿ ಸುಮಾರು ನಮೂನೆ 50, 53 ಹಾಗೂ 57ರಲ್ಲಿ 14,968 ಅರ್ಜಿಗಳಿದ್ದು, ಆ ಅರ್ಜಿಗಳ ಪೈಕಿ ಅರ್ಹ ರೈತರಿಗೆ ಭೂ ಮಂಜೂರಾತಿ ಮಾಡಲು ಇದೇ ತಿಂಗಳು ಮಾರ್ಚ್ 3ರಿಂದ ನಡೆಯುವ ವಿಧಾನ ಮಂಡಲದ ಅಧಿವೇಶನದಲ್ಲಿ ಮುಖ್ಯಮಂತ್ರಿಗಳು ಹಾಗೂ ಸಚಿವರ ಗಮನ ಸೆಳೆಯಲಾಗುವುದು. ಆ ಮೂಲಕ ನೈಜ ರೈತಾಪಿ ವರ್ಗದ ಹಿತ ಕಾಯಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಶಾಸಕರು ತಿಳಿಸಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್, ಉಪ ತಹಸೀಲ್ದಾರ್, ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಆಡಳಿತ ಅಧಿಕಾರಿಗಳು ಉಪಸ್ಥಿತರಿದ್ದರು.