ಪ್ರತಿಭೆಗಳ ಅನಾವರಣಕ್ಕೆ ಶಿಬಿರ ಸಹಕಾರಿ: ಶಾಸಕ ಸುನೀಲ್ ಕುಮಾರ್
ಉಡುಪಿ : ಶಿಬಿರಗಳಲ್ಲಿ ಪಾಲ್ಗೊಳ್ಳುವಿಕೆ ಮಕ್ಕಳ ಪ್ರತಿಭೆಗಳನ್ನು ಅನಾವರಣಗೊಳಿಸಲು ಸಹಕಾರಿ ಯಾಗಿದ್ದು, ಮಕ್ಕಳು ರಜಾ ದಿನಗಳಲ್ಲಿ ಶಿಬಿರದ ಸಂಪೂರ್ಣ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಕಾರ್ಕಳ ಶಾಸಕ ವಿ.ಸುನೀಲ್ ಕುಮಾರ್ ಹೇಳಿದ್ದಾರೆ.
ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಯಕ್ಷ ರಂಗಾಯಣ ಕಾರ್ಕಳ ಇವುಗಳ ಸಹಯೋಗದಲ್ಲಿ ಕಾರ್ಕಳದ ಯಕ್ಷ ರಂಗಾಯಣದ ಸಭಾಂಗಣದಲ್ಲಿ ನಡೆದಿರುವ ಬಾಲಲೀಲೆ ಮಕ್ಕಳ ರಂಗ ಶಿಬಿರವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಯಕ್ಷಗಾನಕ್ಕೆ ಹೊಸ ಪೀಳಿಗೆಯನ್ನು ತಯಾರು ಮಾಡುವುದರ ಜೊತೆಯಲ್ಲಿ ಯಕ್ಷಗಾನದ ವಿವಿಧ ರೀತಿಯ ಆಯಾಮಗಳಿಗೆ ಹೊಸ ಸ್ಪರ್ಶವನ್ನು ನೀಡುವ ಕಾರ್ಯವು ರಂಗಾಯಣದ ಮೂಲಕ ಇನ್ನಷ್ಟು ನಡೆಯ ಬೇಕು ಎಂದರು.
ಖ್ಯಾತ ಅರ್ಕಿಟೆಕ್ಟ್ ಪ್ರಮಲ್ ಕುಮಾರ್ ಮಾತನಾಡಿ, ಯುವಪೀಳಿಗೆಯು ದೊರೆತ ಅವಕಾಶಗಳ ಸದುಪಯೋಗ ಪಡೆದುಕೊಂಡು ಬದುಕಿನಲ್ಲಿ ವಿಶಿಷ್ಟವಾದುದನ್ನು ಸಾಧಿಸುವ ಪ್ರಯತ್ನ ನಡೆಸಬೇಕು. ಭವಿಷ್ಯದ ಕುರಿತಂತೆ ಕನಸುಗಳು, ಯೋಜನೆಗಳು ಯುವ ಮನಸ್ಸುಗಳಲ್ಲಿ ಮೂಡಿಬರಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾರ್ಕಳ ಯಕ್ಷ ರಂಗಾಯಣದ ನಿರ್ದೇಶಕ ಬಿ.ಆರ್. ವೆಂಕಟರಮಣ ಐತಾಳ, ಶೈಕ್ಷಣಿಕ ಚಟುವಟಿಕೆಯ ಹೊರತಾಗಿ ಚಿತ್ರಕಲೆ, ಸಾಹಿತ್ಯ, ಸಂಗೀತ ಹಾಗೂ ಇನ್ನಿತರ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುವಿಕೆಗೆ ಪೋಷಕರು ಮಕ್ಕಳಿಗೆ ಪ್ರೋತ್ಸಾಹ ನೀಡಬೇಕು ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ವಸಂತ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.