×
Ad

ಮಣಿಪಾಲ: ರಾಜ್ಯ ಮಟ್ಟದ ವೈದ್ಯಕೀಯ ರಸಪ್ರಶ್ನೆ ಸ್ಪರ್ಧೆ; ಮಣಿಪಾಲ ಕೆಎಂಸಿ ತಂಡಕ್ಕೆ ಪ್ರಥಮ ಬಹುಮಾನ

Update: 2025-04-21 22:16 IST

ಮಣಿಪಾಲ, ಎ.21: ಆತಿಥೇಯ ಮಣಿಪಾಲ ಕೆಎಂಸಿ ತಂಡದ ಕಲ್ಯಾಣಿ ಗೋಪಾಲ್ ಹಾಗೂ ರಾಹುಲ್ ಕಾಮತ್ ಅವರು ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ (ಕೆಎಂಸಿ) ವೈದ್ಯಕೀಯ ವಿಭಾಗದ ಸಹಯೋಗದೊಂದಿಗೆ ಅಸೋಸಿಯೇಷನ್ ಆಫ್ ಫಿಸಿಷಿಯನ್ಸ್ ಆಫ್ ಇಂಡಿಯಾ (ಎಪಿಐ) ಉಡುಪಿ-ಮಣಿಪಾಲ ಘಟಕ ಮಣಿಪಾಲದ ಡಾ. ಟಿಎಂಎ ಪೈ ಸಭಾಂಗಣದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಮಣಿಪಾಲ ವೈದ್ಯಕೀಯ ರಸಪ್ರಶ್ನೆ-2025 ಸ್ಪರ್ಧೆಯಲ್ಲಿ ವೈದ್ಯಕೀಯ ಪದವಿ ವಿಭಾಗದ ಅಗ್ರಪ್ರಶಸ್ತಿಯನ್ನು ಗೆದ್ದುಕೊಂಡಿತು.

ಶೈಕ್ಷಣಿಕ ಶ್ರೇಷ್ಠತೆಯನ್ನು ಉತ್ತೇಜಿಸುವ ಮತ್ತು ಉದಯೋನ್ಮುಖ ವೈದ್ಯರಲ್ಲಿ ಆರೋಗ್ಯಕರ ಸ್ಪರ್ಧೆಯ ಮನೋಭಾವವನ್ನು ಬೆಳೆಸುವ ಗುರಿಯೊಂದಿಗೆ ರಾಜ್ಯಮಟ್ಟದ ಈ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಇದರಲ್ಲಿ ಕರ್ನಾಟಕ ದಾದ್ಯಂತದ ವೈದ್ಯಕೀಯ ಕಾಲೇಜುಗಳಿಂದ ತಂಡಗಳು ಭಾಗವಹಿಸಿದ್ದವು.

ವೈದ್ಯಕೀಯ ಪದವಿ ಮತ್ತು ವೈದ್ಯಕೀಯ ಸ್ನಾತಕೋತ್ತರ ಪದವಿ ವಿಭಾಗಗಳಲ್ಲಿ ನಡೆದ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ತಮ್ಮ ವೈದ್ಯಕೀಯ ಜ್ಞಾನ, ತ್ವರಿತ ಚಿಂತನೆ ಮತ್ತು ತಂಡದ ಮನೋಭಾವವನ್ನು ಪ್ರದರ್ಶಿಸಿದರು.

ವೈದ್ಯಕೀಯ ಪದವಿ ವಿಭಾಗದ ವಿಜೇತರು: ಪ್ರಥಮ ಬಹುಮಾನ: ಕಲ್ಯಾಣಿ ಗೋಪಾಲ್, ರಾಹುಲ್ ಕಾಮತ್ (ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮಣಿಪಾಲ), ದ್ವಿತೀಯ ಬಹುಮಾನ: ಅರುಶ್ ಉಲ್ ಇಸ್ಲಾಂ, ಹೆಲ್ಗಾ ಸುದೀಪ್ತ (ಯೆನೆಪೋಯ ವೈದ್ಯಕೀಯ ಕಾಲೇಜು ಮಂಗಳೂರು) ತೃತೀಯ ಬಹುಮಾನ: ಅನಘಾ ಜೆ, ಅದಿತಿ ಎನ್ ಶೆಟ್ಟಿ (ಶ್ರೀನಿವಾಸ್ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರ ಮುಕ್ಕ,ಮಂಗಳೂರು)

ವೈದ್ಯಕೀಯ ಸ್ನಾತಕೋತ್ತರ ಪದವಿ ವಿಭಾಗ: ಪ್ರಥಮ ಬಹುಮಾನ: ಡಾ. ನಿಹಾದ್ ನವಾಸ್, ಡಾ. ಸಂಕೇತ್ ಕುಮಾರ್ ಮೊಹಾಂತಿ (ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮಂಗಳೂರು), ದ್ವಿತೀಯ ಬಹುಮಾನ: ಡಾ. ಸಾಯಿ ಭವಾನಿ ರೆಡ್ಡಿ, ಡಾ.ವಿರಾಜ್ ಗೋವಿಂದನಿ(ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮಣಿಪಾಲ), ತೃತೀಯ ಬಹುಮಾನ: ಡಾ. ದೀಪಾ ತೇಜೇಂದ್ರ, ಡಾ. ರೇಖಾ ಎಸ್ (ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಬೆಂಗಳೂರು).

ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಎಪಿಐ ಉಡುಪಿ- ಮಣಿಪಾಲ ಘಟಕದ ಅಧ್ಯಕ್ಷ ಹಾಗೂ ಕೆಎಂಸಿ ಮಣಿಪಾಲದ ವೈದ್ಯಕೀಯ ವಿಭಾಗದ ಪ್ರಾಧ್ಯಾಪಕರಾದ ಡಾ.ಶಿವಶಂಕರ್, ಯುವ ವೈದ್ಯಕೀಯ ಮನಸ್ಸು ಗಳು ತಮ್ಮ ಜ್ಞಾನವನ್ನು ಆಳಗೊಳಿಸಲು, ವಿಮರ್ಶಾತ್ಮಕ ಚಿಂತನೆಯನ್ನು ಬೆಳೆಸಿಕೊಳ್ಳಲು ಮತ್ತು ಆರೋಗ್ಯಕರ ಶೈಕ್ಷಣಿಕ ಸ್ಪರ್ಧೆಯಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸಲು ಈ ರಸಪ್ರಶ್ನೆ ಸ್ಪರ್ಧೆ ಅತ್ಯುತ್ತಮ ವೇದಿಕೆ. ಇದು ಆರೋಗ್ಯ ಸೇವೆಯ ಗುಣಮಟ್ಟವನ್ನು ಸುಧಾರಿಸಲು ಕೊಡುಗೆ ನೀಡುತ್ತವೆ ಎಂದರು.

ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಡೀನ್ ಡಾ. ಪದ್ಮರಾಜ್ ಹೆಗ್ಡೆ ಮಾತನಾಡಿ , ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳು ತಮ್ಮ ವೈದ್ಯಕೀಯ ಪಠ್ಯಕ್ರಮದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಮತ್ತು ಕ್ಲಿನಿಕಲ್ ಅಭ್ಯಾಸದ ಸವಾಲುಗಳಿಗೆ ತಮ್ಮನ್ನು ತಾವು ಉತ್ತಮವಾಗಿ ಸಿದ್ಧಪಡಿಸಿಕೊಳ್ಳಲು ಪ್ರೇರೇಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News