ಹಿಂದುಳಿದ ತಾಲೂಕುಗಳ ಅಭಿವೃದ್ಧಿಗೆ ಯೋಜನೆ ರೂಪಿಸಲು ಶಿಫಾರಸ್ಸು: ಪ್ರೊ.ಗೋವಿಂದ ರಾವ್
ಉಡುಪಿ, ಎ.22: ನಂಜುಂಡಪ್ಪ ಸಮಿತಿ ವರದಿಯಲ್ಲಿ ಹಿಂದುಳಿದ ತಾಲೂಕುಗಳ ಅಭಿವೃದ್ಧಿಗೆ 39ಸಾವಿರ ಕೋಟಿ ಅನುದಾನ ನೀಡುವಂತೆ ಶಿಫಾರಸ್ಸು ಮಾಡಲಾಗಿತ್ತು. 2007-08ರಲ್ಲಿ 43 ಸಾವಿರ ಕೋಟಿ ಮಂಜೂರು ಆಗಿದ್ದು, 35,380ಕೋಟಿ ರೂ. ಬಿಡುಗಯಾಗಿ, 32610 ಕೋಟಿ ರೂ. ಖರ್ಚು ಮಾಡಲಾ ಗಿತ್ತು. ಇದರ ಪರಿಣಾಮ ಹಾಗೂ ಆ ತಾಲೂಕುಗಳ ಅಭಿವೃದ್ಧಿ ಕುರಿತು ಪರಿಶೀಲನೆ ನಡೆಸಲಾಗುತ್ತದೆ. ಮುಂದೆ ಹಿಂದುಳಿದ ತಾಲೂಕುಗಳ ಅಭಿವೃದ್ಧಿ ಯೋಜನೆ ರೂಪಿಸುವಂತೆ ಸರಕಾರಕ್ಕೆ ಶಿಫಾರಸ್ಸು ಮಾಡ ಲಾಗುವುದೆಂದು ಡಾ.ಡಿ.ಎಂ.ನಂಜುಂಡಪ್ಪವರದಿಯ ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿಯ ಅಧ್ಯಕ್ಷ ಪ್ರೊ.ಎಂ.ಗೋವಿಂದ ರಾವ್ ಹೇಳಿದ್ದಾರೆ.
ಮಣಿಪಾಲ ರಜತಾದ್ರಿಯಲ್ಲಿರುವ ಜಿಪಂನ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಮಂಗಳವಾರ ನಡೆದ ಸಮಿತಿಯ ಜಿಲ್ಲಾ ಮಟ್ಟದ ಸಂವಾದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು. ನಂಜುಂಡಪ್ಪ ಸಮಿತಿ ವರದಿಯು ರಾಜ್ಯದಲ್ಲಿ ಒಟ್ಟು 114 ತಾಲೂಕುಗಳನ್ನು ಹಿಂದುಳಿದ ತಾಲೂಕು ಎಂಬುದಾಗಿ ಗುರುತಿಸಿದ್ದು, ಅದರಲ್ಲಿ 39 ಅತ್ಯಂತ ಹಿಂದುಳಿದ, 40 ಅತಿ ಹಿಂದುಳಿದ, 35 ಹಿಂದುಳಿದ ತಾಲೂಕು ಎಂಬುದಾಗಿ ಶಿಫಾರಸ್ಸು ಮಾಡಿತ್ತು. ಇದೀಗ ಈ ವರದಿ ಸಲ್ಲಿಸಿ 23 ವರ್ಷಗಳ ಬಳಿಕ ಅಂತರ್ ಜಿಲ್ಲಾ ಮಾನವ ಪ್ರವೃತ್ತಿಗಳು ಹಾಗೂ ಜಿಲ್ಲೆಯ ಜೀವನ ಮಟ್ಟಗಳ ಸುಧಾರಣೆ ಹಾಗೂ ಮಾನವ ಅಭಿವೃದ್ಧಿಯ ವ್ಯತ್ಯಾಸಗಳ ಕುರಿತು ವಿಶ್ಲೇಷಣೆ ನಡೆಸಿ ವರದಿಯಲ್ಲಿ ಚರ್ಚಿಸ ಲಾಗುವುದು ಎಂದರು.
ಉಡುಪಿ ಇನ್ನಷ್ಟು ಅಭಿವೃದ್ಧಿ: ಪ್ರಾದೇಶಿಕ ಅಸಮತೋಲನೆಯು ಸ್ಥಳೀಯ ಜನರ ಕಾರ್ಯಚಟುವಟಿಕೆ ಹಾಗೂ ಆರ್ಥಿಕ ಅಭಿವೃದ್ಧಿಯ ಆಧಾರದ ಮೇಲೆ ಅವಲಂಬನೆಯಾಗಿರುತ್ತದೆ. ಉಡುಪಿ ಜಿಲ್ಲೆಯು ಸಾಕಷ್ಟು ಅಭಿವೃದ್ಧಿಯು ಖಾಸಗಿ ಸಹಭಾಗಿತ್ವದಲ್ಲಿ ಆಗಿದೆ. ಇನ್ನಷ್ಟು ಅಭಿವೃದ್ಧಿ ಆಗಬೇಕು ಎಂದು ಅವರು ತಿಳಿಸಿದರು.
ಉಡುಪಿ ಜಿಲ್ಲೆಯಲ್ಲಿ ರಾಜ್ಯದಲ್ಲಿಯೇ ಮೊಟ್ಟಮೊದಲ ಬಾರಿಗೆ ವೈದ್ಯಕೀಯ ಶಿಕ್ಷಣ ವ್ಯವಸ್ಥೆ, ಬ್ಯಾಂಕಿಂಗ್ ಸೆಕ್ಟರ್ಗಳು ಸೇರಿದಂತೆ ಮೊದಲಾದ ಕಾರ್ಯ ಚಟುವಟಿಕೆಗಳಿಂದ ಜಿಲ್ಲೆಯು ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಅಭಿವೃದ್ಧಿ ಸಾಧಿಸಿದೆ. ಇದಕ್ಕೆ ಪೂರಕವಾಗಿ ಸರಕಾರವೂ ಸಹ ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಪಥದಲ್ಲಿ ಜಿಲ್ಲೆಯು ಸಾಗಬೇಕಾಗಿದೆ ಎಂದರು.
ಯೋಜನಾ ಇಲಾಖೆಯ ಸರಕಾರದ ಕಾರ್ಯದರ್ಶಿ ಹಾಗೂ ಸಮಿತಿಯ ಸದಸ್ಯ ಕಾರ್ಯದರ್ಶಿ ಡಾ.ವಿಶಾಲ್ ಆರ್. ಮಾತನಾಡಿ, ಜಿಲ್ಲೆಯಲ್ಲಿಯ ಶೈಕ್ಷಣಿಕ ವ್ಯವಸ್ಥೆ ಸುಧಾರಿಸಲು ವಿದ್ಯಾರ್ಥಿ ನಿಲಯ, ವಸತಿ ಶಾಲೆಯ ಅವಶ್ಯಕತೆ, ಶಿಕ್ಷಕರ ಕೊರತೆ, ಪ್ರವಾಸೋದ್ಯಮದ ಅಭಿವೃದ್ಧಿಯ ಸವಾಲುಗಳು, ಧಾರ್ಮಿಕ ಪ್ರವಾಸೋದ್ಯಮಕ್ಕೆ ಮೂಲ ಸೌಕರ್ಯಗಳ ಕಲ್ಪನೆ, ಶಿಕ್ಷಣದ ಜೊತೆಗೆ ಕೌಶಲ್ಯಾಭಿವೃದ್ಧಿ, ಫೈರ್ ಎಮರ್ಜೆನ್ಸಿ ಸೇಫ್ಟಿ ಕೋರ್ಸುಗಳ ಬಗ್ಗೆ ಸಾರ್ವಜನಿಕ ಮಾಹಿತಿ ನೀಡುವುದು ಸೇರಿದಂತೆ ಮತ್ತಿತ್ತರ ಅಭಿವೃದ್ಧಿ ಕಾರ್ಯಗಳನ್ನು ಸ್ಥಳೀಯ ಅನುದಾನ ಕ್ರೋಢೀಕರಿಸಿ ಕೈಗೊಳ್ಳಬೇಕು ಎಂದು ಸೂಚಿಸಿದರು.
ಕಾನೂನು ರಿಯಾಯಿತಿಗೆ ಮನವಿ: ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ಸರಕಾರದ ಕೆಲವೊಂದು ಕಾನೂನುಗಳಿಂದ ಜಿಲ್ಲೆಯ ಪ್ರವಾಸೋದ್ಯಮದ ಅಭಿವೃದ್ಧಿಗೆ ತೊಡಕು ಉಂಟಾಗುತ್ತಿದೆ. ಆದುದರಿಂದ ಸಿಆರ್ಝೆಡ್ ವ್ಯಾಪ್ತಿಯಲ್ಲಿ ರಿಯಾಯಿತಿ ನೀಡಬೇಕು. ವೈಲ್ಡ್ ಲೈಫ್ ಆಕ್ಟ್ನ ಅನ್ವಯ ಒಂದು ಕಿ.ಮೀ. ಇಕೋ ಸೆನ್ಸಿಟಿವ್ ಝೋನ್ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ವಾಣಿಜ್ಯ ಚಟುವಟಿಕೆಗಳನ್ನು ಕೈಗೊಳ್ಳುವಂತಿಲ್ಲ. ಇದರಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ ಎಂದು ದೂರಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು ಮಾತನಾಡಿ, ಕರಾವಳಿ ಭಾಗದಲ್ಲಿ ಸಾಮಾನ್ಯ ವಾಗಿ ಜನರು ಐದು ಸೆಂಟ್ಸ್ ಭೂಮಿಯನ್ನು ಭೂ ಪರಿವರ್ತನೆ ಮಾಡುವಾಗ ರಸ್ತೆಗೆ ಜಾಗ ಬಿಡುವುದು ಸೇರಿದಂತೆ ಇತರ ನಿಯಮಗಳಿಂದ ಸಮಸ್ಯೆ ಆಗುತ್ತಿದೆ. ಈ ಕಾನೂನುಗಳನ್ನು ನಮ್ಮ ಜಿಲ್ಲೆಯಲ್ಲಿ ಸರಳೀಕರಣ ಮಾಡಬೇಕು ಎಂದು ಒತ್ತಾಯಿಸಿದರು.
ಜಿಲ್ಲೆಯಲ್ಲಿ ಬೃಹತ್ ಕೈಗಾರಿಕೆಗಳ ಸ್ಥಾಪನೆ, ಕೈಗಾರಿಕಾ ಪ್ರದೇಶಗಳ ವಿಸ್ತರಣೆ ಆಗಬೇಕು. ದೊಡ್ಡ ಪ್ರಮಾಣದ ಕೈಗಾರಿಕೆಗಳು ಬಂದಲ್ಲಿ ಸಣ್ಣ ಸಣ್ಣ ಕೈಗಾರಿಕೆಗಳೂ ಸಹ ಹುಟ್ಟಿಕೊಳ್ಳುತ್ತವೆ. ಮಂಗಳೂರಿನಿಂದ ಮುಂಬೈಗೆ ಹೋಗುವ ರೈಲ್ವೇ ಸರಕು ಸರಬರಾಜು ಎರಡು ಕೋಚ್ಗಳಿದ್ದು, ಈ ಹಿಂದೆ 16 ಟನ್ಗಳಷ್ಟು ಸರಕುಗಳ ಸಾಕಾಣಿಕೆಗೆ ಅವಕಾಶ ಕಲ್ಪಿಸಲಾಗಿತ್ತು. ಆದರೆ ಇದರ ಪ್ರಮಾಣ ಇಳಿಕೆಯಾಗಿರುವುದರಿಂದ ಇದೀಗ ತೊಂದರೆ ಆಗುತ್ತಿದೆ ಎಂದು ಕೈಗಾರಿಕಾ ಸಂಘಗಳ ಪದಾಧಿಕಾರಿಗಳು ತಿಳಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಎಸ್ಪಿ ಡಾ.ಅರುಣ್ ಕೆ. ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಕೊರಗರಿಗೆ ವಿಶೇಷ ಮೀಸಲಾತಿಗೆ ಮನವಿ
ಜಿಲ್ಲೆಯ ಅಭಿವೃದ್ಧಿ ಸಾಮಾಜಿಕ ಅಭಿವೃದ್ಧಿ ಅಂಶಗಳ ಬಗ್ಗೆ ಹೆಚ್ಚು ಒತ್ತು ನೀಡಬೇಕು. ಕೊರಗ ಹಾಗೂ ಮಲೆಕುಡಿಯ ಜನಾಂಗದವರು ಉತ್ತಮ ಶಿಕ್ಷಣವನ್ನು ಪಡೆದರೂ ಅವರುಗಳಿಗೆ ಸರಕಾರಿ ಕೆಲಸಗಳು ಪಡೆಯಲು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿದರೂ ಸಾಧ್ಯವಾಗುತ್ತಿಲ್ಲ. ಇವರುಗಳಿಗೆ ವಿಶೇಷ ಮೀಸಲಾತಿಯನ್ನು ಕಲ್ಪಿಸುವುದು ಅವಶ್ಯವಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ತಿಳಿಸಿದರು.
ಕೈಗಾರಿಕೆ ಮತ್ತು ಐ.ಟಿ ಪಾರ್ಕ್ಗಳ ಸ್ಥಾಪನೆಗೆ ಸರಕಾರಿ ಜಮೀನುಗಳ ಬೇಡಿಕೆ ಇದೆ. ಜಿಲ್ಲೆಯ ಜನರು ಹೊರ ರಾಜ್ಯ ಹಾಗೂ ವಿದೇಶಗಳಲ್ಲಿ ಉದ್ಯೋಗ, ವ್ಯಾಪಾರಗಳಿಂದ ಸಾಕಷ್ಟು ಆರ್ಥಿಕ ಲಾಭ ಪಡೆದು ಅವುಗಳ ಹೂಡಿಕೆಯನ್ನು ಜಿಲ್ಲೆಯಲ್ಲಿ ಮಾಡುತಿತಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
‘ಒಟ್ಟು ದೇಶೀಯ ಉತ್ಪನ್ನ, ತಲಾ ಆದಾಯ, ಆರ್ಥಿಕ ರಚನೆ, ಸಾಮಾಜಿಕ ವಾಗಿ ಜೀವಿತಾವಧಿ, ಶಿಶು ಮರಣ ಪ್ರಮಾಣ ಮತ್ತು ಸಾಕ್ಷರತಾ ಪ್ರಮಾಣ, ಪರಿಸರ ಸಂಬಂಧಿತವಾದ ನೈಸರ್ಗಿಕ ಸಂಪನ್ಮೂಲ, ಸವಕಳಿ ಸೂಚಕಗಳೂ ಸೇರಿದಂತೆ ಒಟ್ಟು 35 ಸೂಚಕಗಳನ್ನು ಪರಿಗಣಿಸಿ ವರದಿ ತಯಾರಿಸ ಲಾಗುವುದು. ಜಿಲ್ಲೆಯ ಮತ್ತಷ್ಟು ಸಮಗ್ರ ಅಭಿವೃದ್ಧಿಗೆ ಏನೆಲ್ಲಾ ಅವಶ್ಯಗಳ ಬಗ್ಗೆ ಸರಕಾರಕ್ಕೆ ಶಿಫಾರಸನ್ನು ಮಾಡಲಾಗುವುದು’
-ಪ್ರೊ.ಎಂ.ಗೋವಿಂದ ರಾವ್, ಸಮಿತಿ ಅಧ್ಯಕ್ಷರು