×
Ad

ವೇದದ ಸಾರವನ್ನು ಜಗತ್ತಿಗೆ ಸಾರಿದವರು ಶಂಕರಾಚಾರ್ಯರು: ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ

Update: 2025-05-03 19:37 IST

ಉಡುಪಿ, ಮೇ 3: ಸಮಾಜದ ಏಳಿಗೆಗಾಗಿ ಹಾಗೂ ಧರ್ಮದ ರಕ್ಷಣೆಗಾಗಿ ದೇಶದಾದ್ಯಂತ ಸಂಚರಿಸಿ, ವೇದದ ಸಾರವನ್ನು ಜಗತ್ತಿಗೆ ಸಾರಿರುವ ಶಂಕರಾಚಾರ್ಯರ ಜೀವನ ಸಾಧನೆ ಪ್ರತಿಯೊಬ್ಬರಿಗೂ ದಾರಿದೀಪವಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ಹೇಳಿದ್ದಾರೆ.

ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ನಡೆದ ಶ್ರೀಶಂಕರಾಚಾರ್ಯ ಜಯಂತಿ ಕಾರ್ಯಕ್ರಮದಲ್ಲಿ ಶಂಕರಾಚಾರ್ಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡುತ್ತಿದ್ದರು.

ಅದ್ವೈತ ಮತದ ಪ್ರತಿಪಾದಕರು ಆದಿ ಶಂಕರಾಚಾರ್ಯರು. ನಂಬಿಕೆ ಮತ್ತು ಸಮಗ್ರತೆ ಕ್ಷೀಣಿಸುತ್ತಿದ್ದ ಸಂದರ್ಭದಲ್ಲಿ ಭಾರತದ ಆಧ್ಯಾತ್ಮಿಕ ಪರಂಪರೆಗೆ ರಕ್ಷಣೆ ನೀಡಿದ ಇವರು, ಮನುಷ್ಯ ತನ್ನನ್ನು ತಾನು ಅರಿತುಕೊಂಡು, ಸಮಾಜ ಹಾಗೂ ಸುತ್ತಮುತ್ತಲಿನ ಪರಿಸರದಲ್ಲಿ ಹೊಂದಾಣಿಕೆ ಜೀವನ ನಡೆಸುವು ದರೊಂದಿಗೆ ಸಮಾಜದ ಅಭಿವೃದ್ಧಿ ಸಾಧಿಸಬಹುದಾದ ದಾರಿಯನ್ನು ಅವರು ತೋರಿಸಿಕೊಟ್ಟಿದ್ದಾರೆ ಎಂದು ಅವರು ಹೇಳಿದರು.

ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಶ್ರೀನಿವಾಸರಾವ್ ಮಾತನಾಡಿ, ಅದ್ವೈತ ಸಿದ್ಧಾಂತವನ್ನು ಜಗತ್ತಿಗೆ ಪ್ರತಿಪಾದನೆ ಮಾಡಿದವರು ಆಧ್ಯಾತ್ಮಿಕ ಗುರು ಶಂಕರಾಚಾರ್ಯರು. ಅತ್ಯಂತ ಕಡಿಮೆ ಜೀವತಾ ವಧಿಯಲ್ಲಿ ಅವರು ಮಹಾನ್ ಸಾಧನೆ ಮಾಡಿದ್ದಾರೆ. ಎಲ್ಲಾ ಜಾತಿ, ಧರ್ಮದವರು ಒಂದಾದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ತೋರಿಸಿಕೊಟ್ಟಿದ್ದಾರೆ ಎಂದರು.

ಶೃಂಗೇರಿ ಶಾರದಾ ಪೀಠದ ಪ್ರಾಂತೀಯ ಧರ್ಮಾಧಿಕಾರಿ ವಾಗೀಶ ಎಸ್ ಶಾಸ್ತ್ರೀ ಶಂಕರಾಚಾರ್ಯರ ಕುರಿತು ವಿಶೇಷ ಉಪನ್ಯಾಸದಲ್ಲಿ ಕೇರಳದ ಕಾಲಟಿ ಯಲ್ಲಿ ಜನಿಸಿದ ಶಂಕರರು, ಸನಾತನ ಹಿಂದೂ ಧರ್ಮದ ಉಳಿವು ಮತ್ತು ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದರು. ಕೇವಲ ಮೂವತ್ತೆರೆಡು ವರ್ಷ ಬದುಕಿದ್ದ ಶಂಕರರು, ಇಡೀ ದೇಶದ ಕ್ಷೇಮವನ್ನು ಹಾಗೂ ಅನೇಕ ಅನುಯಾಯಿ, ಶಿಷ್ಯರನ್ನು ಸಂಪಾದಿಸಿದ್ದಾರೆ ಎಂದರು.

ಬಾಲ್ಯದಲ್ಲಿಯೇ ನಾಲ್ಕು ವೇದಗಳಲ್ಲಿ ಪರಿಣಿತರಾಗಿದ್ದ ಶಂಕರರು, ತಮ್ಮ ಹದಿನಾರನೇ ವರ್ಷದಲ್ಲಿ ಶಾಸ್ತ್ರ ರಚನೆ ಮಾಡುವುದರೊಂದಿಗೆ, ಪ್ರಪ್ರಥಮ ವಾಗಿ ವೇದಗಳಲ್ಲಿನ ಉಪನಿಷತ್ತುಗಳಿಗೆ ಬ್ರಹ್ಮಸೂತ್ರಗಳನ್ನು ವ್ಯಾಖ್ಯಾನ ಮಾಡಿದ್ದರು. ಜನಸಾಮಾನ್ಯರಿಗೆ ಭಕ್ತಿ, ಜ್ಞಾನ ಮತ್ತು ಕರ್ಮ ಸಿದ್ಧಾಂತವನ್ನು ಬೋಧಿಸುವ ಮೂಲಕ ಶ್ಲೋಕಗಳು ಹಾಗೂ ಉಪನಿಷತ್ತುಗಳನ್ನು ಸಂಸ್ಕೃತದಲ್ಲಿ ಬೋಧಿಸಿದ್ದರು ಎಂದರು.

ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯ ಮಂಜುನಾಥ್ ಮಣಿಪಾಲ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಜಿಲ್ಲಾ ಮಟ್ಟದ ಅಧಿಕಾರಿಗಳು, ಶಾಂಕರ ತತ್ವ ಪ್ರಸಾರ ಅನುಯಾಯಿಗಳು ಹಾಗೂ ಇತರರು ಉಪಸ್ಥಿತರಿದ್ದರು.

ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರೆ ತೇಜೇಶ್ ಬಂಗೇರ ಕಾರ್ಯಕ್ರಮ ನಿರೂಪಿಸಿದರು. ವಿಶ್ವನಾಥ ಶ್ಯಾನುಭೋಗ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News