ಕುಂದಾಪ್ರ ಕನ್ನಡ ಭಾಷೆಯ ಸೊಗಡಿನ ದಾಖಲೀಕರಣ ಅಗತ್ಯ: ಜಯಪ್ರಕಾಶ್ ಹೆಗ್ಡೆ
ಕೋಟ, ಮೇ 4: ಗ್ರಾಮಾಂತರ ಭಾಗದಲ್ಲಿ ಕುಂದಾಪ್ರ ಕನ್ನಡದ ನಿಜವಾದ ಸೊಗಡು ಕಾಣ ಸಿಗುತ್ತದೆ. ಗ್ರಾಮೀಣ ಭಾಗದ ನಟ್ಟಿ ನೆಡುವ ಹೆಂಗಸರು, ಉಳುಮೆ ಮಾಡುವ ಗಂಡಸರು, ಭತ್ತ ತುಳಿಯುವವರು ಹೀಗೆ ಹತ್ತಾರು ವಿಭಾಗಗಳಿಂದ ಕುಂದಾಪ್ರ ಕನ್ನಡದ ಸೊಗಡು ಹರಿದು ಬಂದಿದೆ. ಅವೆಲ್ಲದರ ದಾಖಲೀ ಕರಣ ಅಗತ್ಯ ಎಂದು ಕುಂದಾಪ್ರ ಕನ್ನಡ ಅಧ್ಯಯನ ಪೀಠದ ಅಧ್ಯಕ್ಷ ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ.
ಕೋಟ ಡಾ.ಶಿವರಾಮ ಕಾರಂತ ಪ್ರತಿಷ್ಠಾನ, ಬ್ರಹ್ಮಾವರ ತಾಲೂಕು ಪತ್ರಕರ್ತರ ಸಂಘ, ಕೋಟತಟ್ಟು ಗ್ರಾಪಂ, ಉಸಿರು ಸಂಸ್ಥೆ ಕೋಟ, ಗೀತಾನಂದ ಫೌಂಡೇಶನ್, ಅರಿವು ಕೇಂದ್ರ ಡಿಜಿಟಲ್ ಗ್ರಂಥಾಲಯ ಇವುಗಳ ಸಂಯುಕ್ತ ಆಶ್ರಯದಲ್ಲಿ ಕೋಟದ ಕಾರಂತ ಥೀಮ್ ಪಾರ್ಕ್ನಲ್ಲಿ ರವಿವಾರ ನಡೆದ ಕುಂದಾಪ್ರ ಕನ್ನಡ ಐದನೆಯ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಭಾಷೆಯನ್ನು ಬೆಳೆಸಬೇಕಾದರೆ ಮೊದಲು ನಾವು ನಮ್ಮ ಮಕ್ಕಳಿಗೆ ಆ ಭಾಷೆಯನ್ನು ಹೇಳಿಕೊಡಬೇಕು. ಸರಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕುಂದಾಪ್ರ ಭಾಷೆಯ ಬಗ್ಗೆ ಇನ್ನು ಹೆಚ್ಚಿನ ಕೆಲಸ ಕಾರ್ಯ ಗಳನ್ನು ಮಾಡಬೇಕಾಗಿದೆ ಎಂದು ಅವರು ತಿಳಿಸಿದರು.
ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಡಾ.ಅಣ್ಣಯ್ಯ ಕುಲಾಲ ಉಳ್ತೂರು ಮಾತನಾಡಿ, ನಮ್ಮ ಭಾಷೆಯನ್ನು ನಾವು ಪ್ರೀತಿ ಮಾಡಬೇಕು ಮತ್ತು ಬೇರೆ ಭಾಷೆಯ ಬಗ್ಗೆ ಆಸಕ್ತಿ ತೋರಿಸಬೇಕು. ಆಗ ಮಾತ್ರ ಎಲ್ಲ ವಿಚಾರ ತಿಳಿದು ಕೊಳ್ಳಲು ಸಾಧ್ಯ. ಕುಂದಾಪ್ರ ಕನ್ನಡದ ಈ ಕಾರ್ಯಕ್ರಮ ಒಂದಷ್ಟು ಜನರಿಗೆ ಪ್ರೇರಣೆಯಾಗಲಿ ಎಂದರು.
ಕುಂದಾಪ್ರ ಜನರ ಭಾಷೆ ಎಷ್ಟು ಸುಂದರವೋ ಅಷ್ಟೆ ಇಲ್ಲಿನ ಸಂಸ್ಕೃತಿ ಕೂಡ ಚೆಂದ. ಹೂವಿನ ಕೋಲು, ದಿಮ್ಸಾಲ್, ಬೊಂಬೆಯಾಟ, ಯಕ್ಷಗಾನ, ಹೌಂದರಾಯನ ಓಲ್ಗಾ, ಗೋಂಡ್ಲ, ತುಳ್ಸಿ ಪೂಜೆ ಇದೆಲ್ಲ ಬೇರೆ ಯಾವುದೇ ಭಾಗದಲ್ಲಿ ಕಾಣಲು ಸಿಗುವುದಿಲ್ಲ. ಇದನ್ನು ಮುಂದಿನ ಜನಾಂಗಕ್ಕೆ ಪರಿಚಯ ಮಾಡುವ ಅಗತ್ಯ ಇದೆ. ಜಗತ್ತಿನಲ್ಲಿ 20-25ಲಕ್ಷ ಜನ ಮಾತನಾಡುವ ಕುಂದಾಪ್ರ ಭಾಷೆಯು ಯಾವುದೇ ದೊಡ್ಡ ಪ್ರಾದೇಶಿಕ ಭಾಷಿಗೂ ಕಡಿಮೆ ಇಲ್ಲ ಎಂದು ಅವರು ಹೇಳಿದರು.
ಅಧ್ಯಕ್ಷತೆಯನ್ನು ಕೋಟತಟ್ಟು ಗ್ರಾ.ಪಂ. ಅಧ್ಯಕ್ಷ ಸತೀಶ್ ಬಾರಿಕೆರೆ ವಹಿಸಿದ್ದರು. ಕಾರಂತ ಪ್ರತಿಷ್ಠಾನದ ಕಾರ್ಯಧ್ಯಕ್ಷ ಆನಂದ ಸಿ.ಕುಂದರ್, ಉಡುಪಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಬ್ರಹ್ಮಾವರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಗಾಣಿಗ ಅಚ್ಲಾಡಿ, ಕಾರಂತ ಟ್ರಸ್ಟ್ ಟ್ರಸ್ಟಿ ಸುಬ್ರಾಯ ಆಚಾರ್ಯ ಉಪಸ್ಥಿತರಿದ್ದರು.
ಕಾರ್ಯಕ್ರಮದ ಸಂಯೋಜಕ, ಕಾರಂತ ಟ್ರಸ್ಟಿನ ಕಾರ್ಯದರ್ಶಿ ನರೇಂದ್ರ ಕುಮಾರ್ ಸ್ವಾಗತಿಸಿದರು. ಸತೀಶ್ ವಡ್ಡರ್ಸೆ ಕಾರ್ಯಕ್ರಮದ ಆಶಯದ ಬಗ್ಗೆ ಮಾತನಾಡಿದರು. ಬ್ರಹ್ಮಾವರ ತಾಲೂಕು ಕ.ಸಾ.ಪ. ಅಧ್ಯಕ್ಷ ರಾಮಚಂದ್ರ ಐತಾಳ ವಂದಿಸಿದರು.ಕವಿಗೋಷ್ಠಿ, ಕುಂದಕನ್ನಡದ ಹರಟೆ, ಅಧ್ಯಕ್ಷರ ಜೊತೆಗೆ ಮಾತುಕತೆ ನಡೆಯಿತು.