ಬಾರ್ಕೂರು ರೈಲು ನಿಲ್ದಾಣ ಪ್ಲಾಟ್ಫಾರಂ ನಿರ್ಮಾಣಕ್ಕೆ ಆಗ್ರಹ
ಕುಂದಾಪುರ, ಮೇ 20: ಬಾರಕೂರು ರೈಲು ನಿಲ್ದಾಣದಲ್ಲಿ ಎರಡನೇ ಪ್ಲಾಟ್ ಫಾರ್ಮ್ ನಿರ್ಮಾಣ ಮಾಡುವಂತೆ ಮತ್ತು ಪ್ಲಾಟ್ ಫಾರಂ ನಿರ್ಮಾಣ ವಾಗುವವರೆಗೆ ಎರಡನೇ ಪ್ಲಾಟ್ ಫಾರಂ ಜಾಗವನ್ನು ಸಮತಟ್ಟುಗೊಳಿಸಿ ಹತ್ತಿಳಿಯಲು ತಾತ್ಕಾಲಿಕ ವ್ಯವಸ್ಥೆ ರೂಪಿಸುವಂತೆ ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಗಣೇಶ್ ಪುತ್ರನ್ ಕೊಂಕಣ ರೈಲ್ವೆ ನಿಗಮವನ್ನು ಆಗ್ರಹಿಸಿದ್ದಾರೆ.
ಕೊಂಕಣ ರೈಲ್ವೆ ನಿಗಮವನ್ನು ಭಾರತೀಯ ರೈಲ್ವೆಯ ಅಡಿ ತಾರದೇ ಇರುವ ಕಾರಣಕ್ಕಾಗಿ ಬಜೆಟ್ ಅನುದಾನವೇ ಸಣ್ಣ ಪುಟ್ಟ ಕೆಲಸಗಳಿಗೂ ಸಿಗುತ್ತಿಲ್ಲ. ಕನಿಷ್ಟ ಪ್ಲಾಟ್ಫಾರ ನಿರ್ಮಾಣಕ್ಕೂ ಹೋರಾಟಗಳು, ಮನವಿಗಳ ಅಗತ್ಯ ಇರುವಾಗ ಇನ್ನು ಡಬ್ಲಿಂಗ್ ರೀತಿಯ ಬೃಹತ್ ಯೋಜನೆಗಳು ಕೊಂಕಣ ನಿಗಮದಿಂದ ಜಾರಿಯಾಗಲು ಸಾಧ್ಯವೇ ಎಂದು ಪ್ರಶ್ನಿಸಿ ಕೊಂಕಣ ರೈಲ್ವೆ ಪ್ರಯಾಣಿಕರ ಸಲಾಹಾ ಸಮಿತಿಯ ಸದಸ್ಯರೂ ಆಗಿರುವ ಗಣೇಶ್ ಪುತ್ರನ್, ಕೊಂಕಣ ನಿಗಮ ಹಾಗೂ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ.
ಬಾರ್ಕೂರು ರೈಲು ನಿಲ್ದಾಣದ ಮೊದಲ ಪ್ಲಾಟ್ ಫಾರಂ ಒಂದು ವೇಳೆ ರೈಲು ಬಂದು ನಿಂತರೆ, ವಿರುದ್ದ ದಿಕ್ಕಿನಿಂದ ಬರುವ ರೈಲುಗಳು ಎರಡನೇ ಪ್ಲಾಟ್ ಫಾರಂ ಅಲ್ಲಿ ನಿಲ್ಲಬೇಕಾಗುತ್ತದೆ. ಆದರೆ ಅಲ್ಲಿ ಎತ್ತರಿಸಿದ ಪ್ಲಾಟ್ ಪಾರಂ ಇಲ್ಲದ ಕಾರಣ ನೇರವಾಗಿ ರೈಲಿನಿಂದ ಕೆಳಗೆ ಧುಮಕಬೇಕಾಗಿದ್ದು, ಇದರಿಂದ ವೃದ್ದರು, ಗರ್ಭಿಣಿಯರು, ಅಶಕ್ತರು ರೈಲಿನಿಂದ ಇಳಿಯಲೇ ಸಾಧ್ಯವಾಗದೇ ಪ್ರಯತ್ನ ಪಟ್ಟು ಗಾಯಗೊಂಡ ಹಲವು ಉದಾಹರಣೆಗಳಿವೆ. ಪ್ಲಾಟ್ಫಾರಂ ಕಾಮಗಾರಿ ಆರಂಭವಾಗಲು ಅನುದಾನ, ಯೋಜನೆ ಎಂದೆಲ್ಲಾ ಕಾಲಹರಣ ಮಾಡದೇ ನಿಗಮದ ಮೂಲಕ ಈ ಕಾಮಗಾರಿ ಯಾವಾಗ ಕೈಗೊಳ್ಳಲಾಗುವುದು ಎಂಬುದನ್ನು ಸ್ಪಷ್ಟ ಪಡಿಸುವಂತೆ ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿ ಆಗ್ರಹಿಸಿದೆ.
ಶಾಶ್ವತ ಎತ್ತರಿಸಿದ ಪ್ಲಾಟ್ ಪಾರಂ ನಿರ್ಮಾಣದವರೆಗೆ, ಈಗಿರುವ ಪ್ಲಾಟ್ ಫಾರಂನಲ್ಲಿ ತಾತ್ಕಾಲಿಕ ರಚನೆ ನಿರ್ಮಿಸುವಂತೆ ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿ ಮನವಿ ಸಲ್ಲಿಸಿದೆ.