×
Ad

ಬಿಜೆಪಿ ಪ್ರತಿಭಟನೆಗೆ ವಿರುದ್ಧವಾಗಿ ಕಾಂಗ್ರೆಸ್‌ನಿಂದ ‘ಸತ್ಯದರ್ಶನ’

Update: 2025-07-02 20:30 IST

ಕುಂದಾಪುರ, ಜು.2: 9/11 ಜಾರಿ, ಅಕ್ರಮ ಸಕ್ರಮ ಅರ್ಜಿ ತಿರಸ್ಕಾರ, ಪಿಂಚಣಿ ರದ್ದತಿ, ವಿದ್ಯುತ್ ದರ ಏರಿಕೆ ಬಗ್ಗೆ ಬಿಜೆಪಿಯ ಸುಳ್ಳಿನ ಪ್ರತಿಭಟನೆಗೆ ವಿರುದ್ಧವಾಗಿ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಸತ್ಯದರ್ಶನ ಪ್ರತಿಭಟನೆಯನ್ನು ಕುಂದಾಪುರ ಪುರಸಭೆ ಎದುರು ಬುಧವಾರ ನಡೆಸಲಾಯಿತು.

ಪ್ರತಿಭಟನಕಾರರನ್ನುದ್ದೇಶಿಸಿ ಮಾತನಾಡಿದ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿನೋದ್ ಕ್ರಾಸ್ತಾ, ಕಳೆದ ಕೆಲವು ದಿನಗಳ ಹಿಂದೆ ಬಿಜೆಪಿ ಪ್ರತಿಭಟನೆ ಮಾಡಿ ಅನೇಕ ಸುಳ್ಳು ವಿಚಾರಗಳನ್ನು ಹೇಳಿದೆ. ಕುಂದಾಪುರದಲ್ಲಿ ಪಾರ್ಕಿಂಗ್ ವ್ಯವಸ್ಥೆ, ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಯುಜಿಡಿ ಯೋಜನೆಯಂತಹ ಅನೇಕ ಸಮಸ್ಯೆಗಳು ಜನರನ್ನು ಕಾಡುತ್ತಿರುವಾಗ ಬಿಜೆಪಿಯವರು ಅದನ್ನು ಬಿಟ್ಟು ಯಾವುದೋ ಸುಳ್ಳುಗಳನ್ನು ಹೇಳಿ ಪ್ರತಿಭಟನೆ ಮಾಡುತ್ತಿದ್ದಾರೆ. ಬಿಜೆಪಿಯವರು ಹೇಳಿದ ಸುಳ್ಳಿನ ಸತ್ಯಾಂಶಗಳನ್ನು ಹೇಳಲು ಕಾಂಗ್ರೆಸ್ ಸತ್ಯದರ್ಶನ ಪ್ರತಿಭಟನೆ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಹೇಳಿದರು.

ಎರಡು ಕಂತುಗಳಲ್ಲಿ ಬರುವ ರಾಜೀವ ಗಾಂಧಿ ಅಭಿವೃದ್ಧಿ ನಿಗಮದ ದುಡ್ಡುಗಳಲ್ಲಿ ನಿಯತ್ತಾಗಿ ಪ್ರತಿ ಅವಧಿಯಲ್ಲಿ ಬರುತ್ತಿದೆ. ಆದರೆ ಕೇಂದ್ರ ಸರಕಾರದ ದುಡ್ಡು ಬರುತ್ತಿಲ್ಲ. ಸಿದ್ಧರಾಮಯ್ಯ ಸರಕಾರ ಬಂದ ಬಳಿಕ ಕುಂದಾಪುರ ತಾಲೂಕು ಆಸ್ಪತ್ರೆಗೆ ಎಂಟು ಡಯಾಲಿಸಿಸ್ ಯಂತ್ರಗಳು ಬಂದಿದ್ದು, ಸುಮಾರು 80 ರೋಗಿಗಳಿಗೆ ಉಚಿತವಾಗಿ ಡಯಾಲಿಸಿಸ್ ಚಿಕಿತ್ಸೆ ನೀಡಲಾಗುತ್ತಿದೆ. ಸುಮಾರು 40 ಲಕ್ಷ ರೂ. ಅನುದಾನದಲ್ಲಿ ಲ್ಯಾಬೋರೇಟರಿ ಯನ್ನು ಆಧುನೀಕರಣ, ಎಸ್ಟಿಳಪಿ ಯೋಜನೆಗೆ 20 ಲಕ್ಷ ಅನುದಾನ ಬಂದಿದೆ ಎಂದರು.

ಆನಗಳ್ಳಿ ಗ್ರಾಪಂ ಎದುರು ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ದಿನೇಶ ಹೆಗ್ಡೆ ಮೊಳಹಳ್ಳಿ, 2021ರಲ್ಲಿ ಬಿಜೆಪಿಯವರೇ 9/11 ತಂದ ನೀತಿ. ಇದರಿಂದ ಹಳ್ಳಿಗಳಲ್ಲಿ ಬಹಳಷ್ಟು ಸಮಸ್ಯೆ ಯಾಗಿದೆ. ಈ ಬಗ್ಗೆ ಪಕ್ಷದ ಹಿರಿಯ ಮುಖಂಡರ ಜೊತೆಗೆ ಚರ್ಚೆ ನಡೆಸಲಾಗಿದ್ದು, ವಾರದೊಳಗೆ ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸುವ ಪ್ರಯತ್ನ ನಡೆಸಲಾಗುವುದು ಎಂದು ತಿಳಿಸಿದರು.

ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ದೇವಕಿ ಸಣ್ಣಯ್ಯ, ಜಿಲ್ಲಾ ವಕ್ತಾರ ವಿಕಾಸ್ ಹೆಗ್ಡೆ ಬಸ್ರೂರು, ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಭಿಜಿತ್ ಪೂಜಾರಿ ಹೇರಿಕುದ್ರು, ಕುಂದಾಪುರ ಪುರಸಭೆ ಸದಸ್ಯರಾದ ಚಂದ್ರಶೇಖರ ಖಾರ್ವಿ, ಶ್ರೀಧರ ಶೇರುಗಾರ್, ಅಶ್ಫಕ್ ಕೋಡಿ, ಪ್ರಭಾವತಿ ಶೆಟ್ಟಿ, ಆನಗಳ್ಳಿ ಗ್ರಾಪಂ ಅಧ್ಯಕ್ಷೆ ಸವಿತಾ ಬಿಲ್ಲವ, ಉಪಾಧ್ಯಕ್ಷ ಉದಯ ಪೂಜಾರಿ, ಪ್ರಭಾಕರ ಬಂಗೇರ, ಗೀತಾ ಎಸ್., ಜೋಸೆಫ್ ರೆಬೆಲ್ಲೊ, ಜೋಯ್ಸನ್ ಡಿಸೋಜ, ಸತೀಶ್ ಮೊಗವೀರ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News