ಮಾದಕದ್ರವ್ಯ ಜಾಲದ ವಿರುದ್ಧ ಕಟ್ಟುನಿಟ್ಟಿನ ಕ್ರಮ: ಎಸ್ಪಿ ಹರಿರಾಂ ಶಂಕರ್
ಹರಿರಾಂ ಶಂಕರ್
ಉಡುಪಿ: ಎನ್ಸಿಬಿ ಇತ್ತೀಚೆಗೆ ಕಾರ್ಯಾಚರಣೆ ನಡೆಸಿ ಅಂತಾರಾಷ್ಟ್ರೀಯ ಮಾದಕ ದ್ರವ್ಯ ಜಾಲವನ್ನು ಬೇಧಿಸಿ, ಉಡುಪಿಯಲ್ಲಿ ಓರ್ವ ಆರೋಪಿಯನ್ನು ಬಂಧಿಸಿದೆ. ಈ ಪ್ರಕರಣವನ್ನು ಉಡುಪಿ ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಇಂತಹ ಪ್ರಕರಣಗಳ ಬಗ್ಗೆ ಪೊಲೀಸ್ ಇಲಾಖೆ ಪರಿಶೀಲನೆ ನಡೆಸಿ ಕಟ್ಟುನಿಟ್ಟಿನ ಕ್ರಮ ಜರಗಿಸಲಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ತಿಳಿಸಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಮಾದಕ ವಸ್ತುಗಳ ವಿರುದ್ಧ ಕಟ್ಟುನಿಟ್ಟಿನಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದು, 2022ರಲ್ಲಿ 262 ಮಾದಕ ವಸ್ತುಗಳ ಪ್ರಕರಣಗಳಲ್ಲಿ 282 ಮಂದಿ, 2023ರಲ್ಲಿ 272 ಪ್ರಕರಣಗಳಲ್ಲಿ 304 ಹಾಗೂ 2024ರಲ್ಲಿ 123 ಪ್ರಕರಣಗಳಲ್ಲಿ 153 ಮಂದಿ ಮತ್ತು 2025ರ ಜೂನ್ವರೆಗೆ ಜಿಲ್ಲೆಯಲ್ಲಿ ಒಟ್ಟು 87 ಪ್ರಕರಣಗಳಲ್ಲಿ 106 ಮಂದಿ ಆರೋಪಿಗಳನ್ನು ಬಂಧಿಸ ಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಜಿಲ್ಲೆಯ ಯಾವುದೇ ಭಾಗದಲ್ಲಿ ಮಾದಕ ವಸ್ತುಗಳ ಸಾಗಾಟ ಹಾಗೂ ಮಾರಾಟದ ಬಗ್ಗೆ ಸಾರ್ವಜನಿಕರಿಗೆ ಯಾವುದೇ ಮಾಹಿತಿ ಇದ್ದರೂ ತಕ್ಷಣ ಪೊಲೀಸರಿಗೆ ಅಥವಾ ನನಗೆ ನೇರವಾಗಿ ಮಾಹಿತಿ ಕೊಡಬಹುದು. ಅಂತಹ ಪ್ರಕರಣಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರಗಿಸಲಾಗುವುದು ಎಂದು ಅವರು ತಿಳಿಸಿದರು.