×
Ad

ತುಳುವಿನಕೊಪ್ಪದಲ್ಲಿ ಅಪರೂಪದ ಸ್ಮಾರಕಶಿಲ್ಪಗಳು ಪತ್ತೆ

Update: 2025-07-21 22:00 IST

ಕೊಪ್ಪ, ಜು.21: ಇಲ್ಲಿನ ತುಳುವಿನಕೊಪ್ಪ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಲ್ಕೆರೆ ಪ್ರದೇಶದ ಕೆರೆಮನೆ ಯಲ್ಲಿ ಎರಡು ಅಪರೂಪದ ಸ್ಮಾರಕಶಿಲ್ಪಗಳು ಶಾಂತ ಶ್ರೀನಿವಾಸ ಗೌಡ ಮತ್ತು ಕೆರೆಮನೆ ಸುರೇಶ ಅವರ ಜಮೀನಿನಲ್ಲಿ ಕಂಡುಬಂದಿದೆ.

ಶಾಂತ ಶ್ರೀನಿವಾಸ ಗೌಡ ಅವರು ತಮ್ಮ ಜಮೀನಿನ ಕೆಲಸದ ಸಂದರ್ಭದಲ್ಲಿ ಒಂದು ಸ್ಮಾರಕಶಿಲ್ಪವನ್ನು ಹೊರತೆಗೆದು ಇದರ ಮಾಹಿತಿಯನ್ನು ಇತಿಹಾಸ ಮತ್ತು ಪುರಾತತ್ತ್ವ ಸಂಶೋಧನಾರ್ಥಿ ನ.ಸುರೇಶ ಕಲ್ಕೆರೆ ಅವರಿಗೆ ತಿಳಿಸಿದ್ದು, ಕ್ಷೇತ್ರಕಾರ್ಯ ಶೋಧನೆಗೆ ತೆರಳಿದ ಸಂಶೋಧನಾರ್ಥಿಗೆ ಕೆರೆಮನೆ ಸುರೇಶ ಅವರ ಜಮೀನಿನಲ್ಲಿಯೂ ಗಿಡ-ಗಂಟಿಗಳಿಂದ ಮುಚ್ಚಿ ಹೋಗಿದ್ದ ಇನ್ನೊಂದು ಸ್ಮಾರಕಶಿಲ್ಪವು ದೊರೆತಿದೆ. ಈ ಎರಡು ಕಲ್ಲುಗಳನ್ನು ಸ್ವಚ್ಛಗೊಳಿಸಿ, ಅಧ್ಯಯನಕ್ಕೆ ಒಳಪಡಿಸಿದಾಗ ಇವುಗಳು ಒಂದೇ ರೀತಿಯ ಸಾಮ್ಯತೆಯನ್ನು ಹೊಂದಿರುವುದು ಕಂಡುಬಂದಿದೆ.

ಈ ಸ್ಮಾರಕಶಿಲ್ಪಗಳು ಸುಮಾರು ಎರಡು ಅಡಿ ಎತ್ತರ ಹಾಗೂ ಒಂದು ಅಡಿ ಅಗಲವಾಗಿದ್ದು, ಇವುಗಳು ಒಂದಕ್ಕೊಂದು ಸುಮಾರು 300 ಮೀ. ಅಂತರದಲ್ಲಿವೆ. ಮುಖ್ಯವಾಗಿ ಈ ಸ್ಮಾರಕಶಿಲ್ಪದ ಮಧ್ಯಭಾಗದಲ್ಲಿ ತ್ರಿಶೂಲ ಹಾಗೂ ಇದರ ಇಕ್ಕೆಲಗಳಲ್ಲಿ ಸೂರ್ಯ ಮತ್ತು ಚಂದ್ರರ ಕೆತ್ತನೆಯಿದ್ದು, ಇಡೀ ಕೊಪ್ಪ ತಾಲೂಕಿ ನಲ್ಲಿಯೇ ಇವುಗಳು ಪ್ರಥಮವಾಗಿ ಕಂಡುಬಂದಿರುವ ಅಪರೂಪದ ಸ್ಮಾರಕಶಿಲ್ಪಗಳಾಗಿದೆ.

ಈ ಶಿಲ್ಪ ಲಕ್ಷಣದ ಹೋಲಿಕೆಯನ್ನು ಹೊಂದಿರುವ 15ನೇ ಶತಮಾನದ ದಾನ ಶಾಸನವೊಂದು ಕಡಬ ತಾಲೂಕಿನ ಬಳ್ಪ ಪ್ರದೇಶದಲ್ಲಿನ ಶ್ರೀದುರ್ಗಾ ದೇವಾಲಯದ ಒಳ ಪ್ರಾಕಾರದಲ್ಲಿ ಕಂಡುಬಂದಿದೆ. ಆದರೆ ಇದರಲ್ಲಿ ಸೂರ್ಯ-ಚಂದ್ರರ ಬದಲು ಶಂಖ-ಚಕ್ರದ ಕೆತ್ತನೆಯನ್ನು ಕಾಣಬಹುದು.

ಕಲ್ಕೆರೆ ಪ್ರದೇಶದ ಅರಣ್ಯದಲ್ಲಿ ಕಲ್ಲಿನ ಪ್ರಾಚೀನ ತಳಪಾಯ ಕಂಡು ಬಂದಿದ್ದು, ಇದು ದೇವಿ ಸಂಬಂಧಿಸಿದ ದೇವಾಲಯದ ನೆಲೆಗಟ್ಟು ಎಂಬುದು ಇಂದಿಗೂ ಸ್ಥಳೀಯರ ನಂಬಿಕೆಯಾಗಿದೆ. ಪ್ರಸ್ತುತ ಅಧ್ಯಯನಕ್ಕೆ ಒಳಪಡಿಸಲಾದ ಈ ಸ್ಮಾರಕಶಿಲ್ಪಗಳು 14-15ನೇ ಶತಮಾನದಲ್ಲಿ ಹಾಕಿರಬಹುದಾದ ಗಡಿಕಲ್ಲು ಆಗಿರಬಹುದೆಂದು ಇತಿಹಾಸ ಸಂಶೋಧನಾರ್ಥಿ ಅಭಿಪ್ರಾಯ ಪಟ್ಟಿದ್ದಾರೆ.

ಕ್ಷೇತ್ರಕಾರ್ಯದಲ್ಲಿ ತುಳುವಿನಕೊಪ್ಪದ ಗ್ರಾಪಂ ಉದ್ಯೋಗಿ ಮಹೇಶ್, ಕಲ್ಕೆರೆ ಸುಂದರರಾಜ್, ರಾಘವೇಂದ್ರ ಹಾಗೂ ಕಲ್ಕೆರೆ ಶಾಲೆಯ ವಿದ್ಯಾರ್ಥಿ ಗಳಾದ ಸನ್ನಿಧಿ ಮತ್ತು ವಿಕೃತ್ ಸಹಕಾರ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News