ಬಿಜೆಪಿಯ ಅಂಬೇಡ್ಕರ್ ಪ್ರೀತಿ ಕೇವಲ ನಾಟಕ: ಕಿಮ್ಮನೆ ರತ್ನಾಕರ್ ಆರೋಪ
ಉಡುಪಿ, ಆ.3: ಬಿಜೆಪಿಯ ಅಂಬೇಡ್ಕರ್ ಪ್ರೀತಿ ಕೇವಲ ನಾಟಕ. ಸಂವಿಧಾನ ಬದಲಿಸುವಷ್ಟು ಬಹುಮತ ಸಿಗುವವರೆಗೆ ಬಿಜೆಪಿಯವರಿಗೆ ಎಲ್ಲಾ ಜಾತಿಯವರು, ಎಲ್ಲಾ ಭಾಷೆಯವರು ಬೇಕು. ಆ ಬಳಿಕ ದೇಶದಲ್ಲಿ ಒಂದೇ ಭಾಷೆ, ಒಂದೇ ಧರ್ಮ, ಒಬ್ಬನೇ ರಾಜ ಎಂಬ ಕಾನೂನು ತರುತ್ತಾರೆ ಎಂದು ಮಾಜಿ ಸಚಿವ ಹಾಗೂ ರಾಜ್ಯ ಕಾಂಗ್ರೆಸ್ ಪ್ರಚಾರ ಸಮಿತಿ ಉಪಾಧ್ಯಕ್ಷ ಕಿಮ್ಮನೆ ರತ್ನಾಕರ್ ಹೇಳಿದ್ದಾರೆ.
ಉಡುಪಿಯ ಪುರಭವನದ ಮಿನಿ ಹಾಲ್ನಲ್ಲಿ ರವಿವಾರ ನಡೆದ ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಸಭೆಯಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡುತಿದ್ದರು.
ಅಂಬೇಡ್ಕರ್ ಇಲ್ಲದೆ ಹೋಗಿದ್ದರೆ ಈ ದೇಶದ ದಲಿತರು ಹಾಗೂ ಹಿಂದುಳಿದ ವರ್ಗದವರು ಇಂದಿಗೂ ಗುಲಾಮರಾಗಿಯೇ ಇರುತ್ತಿದ್ದರು ಎಂದ ಅವರು, ಸೈದ್ಧಾಂತಿಕ ಬದ್ಧತೆ ಇರುವ ನಾಯಕ ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷಕ್ಕೆ ಸಿಕ್ಕಿರುವುದು ದೇಶದ ಸೌಭಾಗ್ಯ. ಸುಶಿಕ್ಷಿತ ಕಾಂಗ್ರೆಸ್ ಕಾರ್ಯಕರ್ತರಿಗೆ, ಮುಖಂಡ ರಿಗೆ ಗಾಂಧಿ, ನೆಹರು ಹಾಗೂ ಅಂಬೇಡ್ಕರ್ ಅವರಂತಹ ನಾಯಕರ ಸಾಧನೆ, ಚರಿತ್ರೆ ಕುರಿತು ಮಾಹಿತಿ ಇಲ್ಲದಿರುವುದು ದೌರ್ಭಾಗ್ಯ ಎಂದರು.
ಕೆಪಿಸಿಸಿ ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ ವಿನಯ ಕುಮಾರ್ ಸೊರಕೆ, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಅಲೆವೂರು ಹರಿಶ್ ಕಿಣಿ, ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕೊಡವೂರು, ಮುಖಂಡರಾದ ಕಿಶನ್ ಹೆಗ್ಡೆ ಕೊಳ್ಕೆಬೈಲ್, ಪ್ರಸಾದ್ರಾಜ್ ಕಾಂಚನ್, ದಿನೇಶ ಪುತ್ರನ್, ದಿವಾಕರ ಕುಂದರ್, ಕೆಪಿಸಿಸಿ ವಕ್ತಾರ ಮುನೀರ್ ಜನ್ಸಾಲೆ ಉಪಸ್ಥಿತರಿದ್ದರು.