ಗಣಪತಿ ಪ್ರತಿಷ್ಠಾಪನೆಗೆ ಅನುಮತಿ ಕಡ್ಡಾಯ: ಉಡುಪಿ ಜಿಲ್ಲಾಧಿಕಾರಿ
ಉಡುಪಿ, ಸೆ.6: ಜಿಲ್ಲೆಯಾದ್ಯಂತ ಸೆಪ್ಟೆಂಬರ 7ರಂದು ಗಣೇಶ ಹಬ್ಬದ ಆಚರಣೆ ಸಂದರ್ಭಕ್ಕೂ ಮುನ್ನ ಗಣಪತಿ ಪ್ರತಿಷ್ಟಾಪನೆ ಮಾಡುವ ಸ್ಥಳದ ಕುರಿತು ಬ್ಯಾನರ್, ಬಂಟಿಂಗ್ಸ್ಗಳನ್ನು ಪ್ರಮುಖ ಹಾಗೂ ಇತರೆ ಯಾವುದೇ ಸ್ಥಳಗಳಲ್ಲಿ ಆಳವಡಿಸವ ಮುನ್ನ ಮತ್ತು ಗಣಪತಿ ವಿಗ್ರಹಗಳನ್ನು ತರುವ ಮತ್ತು ವಿಸರ್ಜನಾ ಕಾಲಕ್ಕೆ ನಡೆಸುವ ಮೆರವಣಿಗೆಗಳ ಮಾರ್ಗ ಸಂಬಂಧ ಅನುಮತಿಗೆ ಪೊಲೀಸ್ ಇಲಾಖೆಯ ಸಂಬಂಧಪಟ್ಟ ಠಾಣಾಧಿಕಾರಿಗಳಿಂದ ನಿರಾಕ್ಷೇಪಣಾ ಪತ್ರ (ಎನ್ಓಸಿ)ವನ್ನು ಪಡೆದುಕೊಳ್ಳುವುದು ಕಡ್ಡಾಯವಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ
ಪೊಲೀಸರಿಂದ ವ್ಯಾಪಕ ಬಂದೋಬಸ್ತ್: ಗಣೇಶ ಚತುರ್ಥಿ ಮತ್ತು ಈದ್ ಮಿಲಾದ್ ಹಬ್ಬಗಳ ಹಿನ್ನೆಲೆಯಲ್ಲಿ ವ್ಯಾಪಕ ಬಂದೋಬಸ್ತ್ ಮಾಡಲಾಗಿದ್ದು ಎಲ್ಲ ಠಾಣಾ ವ್ಯಾಪ್ತಿಗಳಲ್ಲಿ ಶಾಂತಿ ಸಭೆಗಳನ್ನು ಆಯೋಜನೆ ಮಾಡಿದ್ದೇವೆ ಎಂದು ಉಡುಪಿ ಎಸ್ಪಿ ಡಾ.ಅರುಣ್ ಕೆ. ಹೇಳಿದ್ದಾರೆ.
ಇಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮೂರ್ತಿ ಪ್ರತಿಷ್ಠಾಪನೆಗೂ ಮುನ್ನ ಇಲಾಖೆಯಿಂದ ಅನುಮತಿ ಕಡ್ಡಾಯ. ರಾತ್ರಿ 10 ಗಂಟೆಯ ಒಳಗೆ ಡಿಜೆಗೆ ಅವಕಾಶವಿದ್ದು, ಹತ್ತರ ನಂತರ ಡಿಜೆ ಸೌಂಡ್ ಕಡಿಮೆ ಮಾಡುವಂತೆ ಸೂಚನೆ ನೀಡಿದ್ದೇವೆ. ಹಬ್ಬಕ್ಕೆ ಸಂಬಂಧಪಟ್ಟಂತೆ ಬಂಟಿಂಗ್ ಮತ್ತು ಬ್ಯಾನರ್ಗಳಿಗೆ ಪೂರ್ವಾನುಮತಿ ಕಡ್ಡಾಯವಾಗಿದೆ ಎಂದು ಹೇಳಿದ್ದಾರೆ.
ನಿಯಮ ಉಲ್ಲಂಘಿಸಿದವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆಯಲ್ಲಿ 472 ಕಡೆ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುತ್ತಿದೆ. 62 ಸ್ಥಳಗಳನ್ನು ಈದ್ ಮಿಲಾದ್ ಹಬ್ಬಕ್ಕೆ ಗುರುತಿಸಲಾಗಿದೆ. ಬಂದೋಬಸ್ತ್ ಗಾಗಿ ಕೆಎಸ್ಆರ್ಪಿ ಮತ್ತು ಡಿಆರ್ ಪೊಲೀಸ್ ಸೇರಿದಂತೆ ಭದ್ರತೆಗಾಗಿ 200 ಪೊಲೀಸರನ್ನು ನಿಯೋಜನೆ ಮಾಡಲಾಗಿದೆ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.