×
Ad

ಭೂಹೀನ ಕೊರಗರಿಗೆ ಭೂಮಿ ನೀಡಲು ಆಗ್ರಹಿಸಿ ಧರಣಿ| ಶೀಘ್ರವೇ ಸಭೆ ಕರೆದು ಅಂತಿಮ ನಿರ್ಧಾರ: ಉಡುಪಿ ಡಿಸಿ ಭರವಸೆ

Update: 2026-07-13 21:25 IST

ಉಡುಪಿ, ಜು.13: ಕುಂದಾಪುರ ತಾಲೂಕಿನ ಆಲೂರು ಹಾಗೂ ಹರ್ಕೂರು ಗ್ರಾಮದ ಭೂಹೀನ ಕೊರಗ (ಪರಿಶಿಷ್ಟ ಪಂಗಡ) ಕುಟುಂಬಗಳಿಗೆ ಭೂಮಿ ಮಂಜೂರು ಮಾಡುವಂತೆ ಆಗ್ರಹಿಸಿ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ, ಉಡುಪಿ ಜಿಲ್ಲಾ ಸಮಿತಿಯ ನೇತೃಎತ್ವದಲ್ಲಿ ಇಂದು ಮಣಿಪಾಲದಲ್ಲಿರುವ ಉಡುಪಿ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಶಾಂತಿಯುತ ಧರಣಿ ಸತ್ಯಾಗ್ರಹ ಹಾಗೂ ಹಕ್ಕೊತ್ತಾಯ ನಡೆಯಿತು.

ಧರಣಿಯಲ್ಲಿ ಕೊರಗ ಸಮುದಾಯದ ನೂರಾರು ಸದಸ್ಯರು, ವಿವಿಧ ಜನಪರ ಸಂಘಟನೆಗಳ ಮುಖಂಡರು ಹಾಗೂ ಸಾರ್ವಜನಿಕರು ಭಾಗವಹಿಸಿ, ಸುಮಾರು ಹತ್ತು ವರ್ಷಗಳಿಂದ ಬಾಕಿ ಉಳಿದಿರುವ ಭೂಮಿ ಮಂಜೂರಾತಿ ಪ್ರಕ್ರಿಯೆ ಯನ್ನು ಕೂಡಲೇ ಪೂರ್ಣಗೊಳಿಸುವಂತೆ ಒತ್ತಾಯಿಸಿದರು.

ಧರಣಿ ನಡೆಯುತ್ತಿರುವ ಸಂದರ್ಭದಲ್ಲಿ ಉಡುಪಿ ಜಿಲ್ಲಾಧಿಕಾರಿಗಳು ಧರಣಿ ನಿರತ ನಿಯೋಗವನ್ನು ತಮ್ಮ ಕಚೇರಿಗೆ ಆಹ್ವಾನಿಸಿ, ಪ್ರಕರಣದ ಕುರಿತು ವಿವರವಾದ ಚರ್ಚೆ ನಡೆಸಿದರು. ಸಂಘಟನೆಯಿಂದ ಸಲ್ಲಿಸಲಾದ ಹಕ್ಕೊತ್ತಾಯ ಮನವಿಯನ್ನು ಸ್ವೀಕರಿಸಿದ ಜಿಲ್ಲಾಧಿಕಾರಿಗಳು, ಆಲೂರು ಗ್ರಾಮದ ಕೊರಗ ಕುಟುಂಬಗಳ ಭೂಮಿ ಪ್ರಕರಣದ ಕುರಿತು ತನಗೆ ಸಂಪೂರ್ಣ ಮಾಹಿತಿ ಇದೆ. ಸಂಘಟನೆಯು ಈ ಹಿಂದೆ ಸಲ್ಲಿಸಿರುವ ದಾಖಲೆಗಳು ಹಾಗೂ ವಿವಿಧ ಇಲಾಖೆಗಳ ವರದಿಗಳು ಜಿಲ್ಲಾಡಳಿತದ ಬಳಿ ಲಭ್ಯವಿದ್ದು, ಸಂಬಂಧಿಸಿದ ಎಲ್ಲಾ ಇಲಾಖೆಗಳ ಸಭೆಯನ್ನು ಶೀಘ್ರ ದಲ್ಲಿಯೇ ತಮ್ಮ ಅಧ್ಯಕ್ಷತೆಯಲ್ಲಿ ನಡೆಸಿ ಪ್ರಕರಣದ ಕುರಿತು ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾದ ಮನವಿಯಲ್ಲಿ, ಆಲೂರು ಗ್ರಾಮದ ಸರ್ವೇ ನಂ.153, 154, 148/3 ಹಾಗೂ 148/4 ಮತ್ತು ಹರ್ಕೂರು ಗ್ರಾಮದ ಸರ್ವೇ ನಂ.144/1, 150/3ರಲ್ಲಿ ಗುರುತಿಸಲಾದ ಒಟ್ಟು 10.67 ಎಕರೆ ಭೂಮಿಯನ್ನು 13 ಭೂಹೀನ ಕೊರಗ ಕುಟುಂಬಗಳಿಗೆ ಕೂಡಲೇ ಮಂಜೂರು ಮಾಡಬೇಕು ಎಂದು ಆಗ್ರಹಿಸಲಾಯಿತು.

ಜೊತೆಗೆ, ಹರ್ಕೂರು ಗ್ರಾಮದ ಸರ್ವೇ ನಂ.135ರಲ್ಲಿ 1984-85ರಲ್ಲೇ ಮಂಜೂರಾಗಿರುವ ಭೂಮಿಯ ಸ್ವಾಧೀನವನ್ನು ಮೂಲ ಫಲಾನುಭವಿಗಳಿಗೆ ತಕ್ಷಣ ಒದಗಿಸುವಂತೆ ಒತ್ತಾಯಿಸಲಾಯಿತು. ಕರ್ನಾಟಕ ಗೇರು ಅಭಿವೃದ್ಧಿ ನಿಗಮ ಸಲ್ಲಿಸಿರುವ ಆಧಾರರಹಿತ ಆಕ್ಷೇಪಣೆಯನ್ನು ತಿರಸ್ಕರಿಸಿ, ಜಿಲ್ಲಾಧಿಕಾರಿ ಗಳ ಅಧ್ಯಕ್ಷತೆಯಲ್ಲಿ ಸಂಬಂಧಿಸಿದ ಎಲ್ಲಾ ಇಲಾಖೆಗಳ ಉನ್ನತ ಮಟ್ಟದ ಸಭೆಯನ್ನು ಶೀಘ್ರದಲ್ಲಿ ನಡೆಸಿ, ಜಿಲ್ಲಾ ಮಟ್ಟದಲ್ಲಿಯೇ ಪ್ರಕರಣ ವನ್ನು ಅಂತಿಮವಾಗಿ ಇತ್ಯರ್ಥಪಡಿಸಿ ಕೊರಗ ಕುಟುಂಬಗಳಿಗೆ ನ್ಯಾಯ ಒದಗಿಸಬೇಕೆಂದು ಸಂಘಟನೆ ಒತ್ತಾಯಿಸಿತು.

ಧರಣಿ ಸತ್ಯಾಗ್ರಹದಲ್ಲಿ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಜಿಲ್ಲಾ ಸಂಚಾಲಕರಾದ ಶ್ರೀಧರ ನಾಡ, ರಾಜ್ಯ ಸಮಿತಿ ಸದಸ್ಯರಾದ ಕೃಷ್ಣ ಇನ್ನಾ ಹಾಗೂ ಗಣೇಶ ಆಲೂರು, ರೇವತಿ ಆಲೂರು, ಕೊರಗ ನಾರ್ಕಳಿ, ಪಡುಬಿದ್ರಿ ಘಟಕದ ಕಾರ್ಯದರ್ಶಿ ತುಳಸಿ, ರೇಷ್ಮಾ ನಾಡ, ಮಾಲತಿ ಆಲೂರು, ಶೇಖರ ನಾರ್ಕಳಿ, ಕೊರಗ ಸಮುದಾಯದ ಸಾಹಿತಿಗಳಾದ ಬಾಬು ಪಾಂಗಾಳ, ಕುಡುಪ ಕೊರಗ, ವಸಂತ ಕೊರಗ (ಉಡುಪಿ), ಕಾರ್ಮಿಕ ಮುಖಂಡರಾದ ಸುರೇಶ್ ಕಲ್ಲಗಾರ, ಚಂದ್ರಶೇಖರ, ಹೆಚ್. ನರಸಿಂಹ ಸೇರಿದಂತೆ ವಿವಿಧ ಜನಪರ ಸಂಘಟನೆಗಳ ಮುಖಂಡರು, ಹಾಗೂ ಕೊರಗ ಸಮುದಾಯದವರು ಭಾಗವಹಿಸಿದ್ದರು.



 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News