ಆನ್ಲೈನ್ ಹೂಡಿಕೆ ಹೆಸರಿನಲ್ಲಿ 30.32ಲಕ್ಷ ರೂ. ವಂಚನೆ: ಪ್ರಕರಣ ದಾಖಲು
Update: 2026-01-04 21:20 IST
ಉಡುಪಿ, ಜ.4: ಆನ್ಲೈನ್ ಹೂಡಿಕೆ ಹೆಸರಿನಲ್ಲಿ ವ್ಯಕ್ತಿಯೊಬ್ಬರಿಗೆ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಣಿಪಾಲ ಎಂಐಟಿಯ ನಿವೃತ್ತ ನೌಕರ ಉಮಾನಂದ ಕೆ.ವಿ.(61) ಎಂಬವರು ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುತ್ತಿದ್ದು, ಇವರಿಗೆ ಅ.22ರಂದು ಅಪರಿಚಿತ ವ್ಯಕ್ತಿ ಸಂದೇಶ ಕಳುಹಿಸಿ, ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ನೀಡುವುದಾಗಿ ತಿಳಿಸಿದ್ದನು.
ಅದರಂತೆ ಉಮಾನಂದ ನ.6ರಿಂದ ಡಿ.31ರವರೆಗೆ ವಿವಿಧ ಹೆಸರಿನ ಸ್ಟಾಕ್ ಮಾರ್ಕೇಟ್ ಕಂಪೆನಿಗಳಲ್ಲಿ ಆರೋಪಿ ಸೂಚಿಸಿದ ವಿವಿಧ ಖಾತೆಗಳಿಗೆ ಒಟ್ಟು 30,32,000ರೂ. ಹಣವನ್ನು ಹೂಡಿಕೆ ಮಾಡಿದ್ದರು. ಆದರೆ ಈ ಕಂಪೆನಿಗಳು ಉಮಾನಂದ ಈವರೆಗೆ ಹೂಡಿಕೆ ಮಾಡಿದ ಹಣವನ್ನಾಗಲೀ ಅಥವಾ ಲಾಭಾಂಶವನ್ನಾಗಲೀ ವಾಪಾಸು ನೀಡದೇ ಮೋಸ ಮಾಡಿರುವುದಾಗಿ ದೂರಲಾಗಿದೆ.