ಹಿರಿಯ ನೇಕಾರ ಸೀತಾರಾಮ ಶೆಟ್ಟಿಗಾರ್ಗೆ ಪ್ರಶಸ್ತಿ ಪ್ರದಾನ
ಮಣಿಪಾಲ : ಮಣಿಪಾಲದ ತಪೋವನ ಸಂಸ್ಥೆಯ ವತಿಯಿಂದ ಕೈಮಗ್ಗದ ವಸ್ತ್ರಗಳು ಮತ್ತು ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ‘ನೂಲು’ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಮಣಿಪಾಲದ ಮಾಹೆ ಹೆಲ್ತ್ ಸೈನ್ಸ್ ಇದರ ಪ್ರೊ ವೈಸ್ ಚಾನ್ಸಲರ್ ಡಾ.ಶರತ್ ರಾವ್ ಮಾತನಾಡಿ, ಪ್ರಪಂಚಕ್ಕೆ ಭಾರತೀಯರು ಮೂರು ಅತ್ಯಮೂಲ್ಯ ಅಂಶಗಳನ್ನು ನೀಡಿದ್ದಾರೆ. ಯೋಗ, ಸೊನ್ನೆ ಮತ್ತು ಓಂ. ಇದು ಭಾರತೀಯರು ಪ್ರಪಂಚಕ್ಕೆ ನೀಡಿದ ಅತಿ ದೊಡ್ಡ ಕೊಡುಗೆ. ಭಾರತದಲ್ಲಿ ಹಲವು ಧರ್ಮಗಳ ಉಗಮವಾಗಿವೆ. ಹಾಗೆ ಕಲೆ ಸಂಸ್ಕೃತಿ ಆಚಾರ ವಿಚಾರಗಳಿಗೆ ಭಾರತ ಎಂದೆಂದಿಗೂ ನೆಲೆಬೀಡಾಗಿದೆ ಎಂದರು.
ತಪೋವನ ವರ್ಷದ ಕರಕುಶಲಕರ್ಮಿ ೨೦೨೩-೨೪ನೆ ಸಾಲಿನ ಪುರಸ್ಕಾರವನ್ನು ಹಿರಿಯ ನೇಕಾರ ಸೀತಾರಾಮ ಶೆಟ್ಟಿಗಾರ್ ಅವರಿಗೆ ನೀಡಲಾಯಿತು. ಮುಖ್ಯ ಅತಿಥಿಗಳಾಗಿ ನಿರ್ದೇಶಕ ಜಯಂತಿ ಲಾಲ್ ಪಟೇಲ್, ತಪೋವನ ಸಂಸ್ಥೆಯ ಉಪಾಧ್ಯಕ್ಷೆ ರೇವತಿ ನಾಡಿಗಿರ್, ವಸ್ತ್ರ ವಿನ್ಯಾಸಕ ರಮೇಶ್ ಅಯೋಧಿ ಉಪಸ್ಥಿತರಿದ್ದರು.
ತಪೋವನ ಸಂಸ್ಥೆಯ ನಿರ್ದೇಶಕ ಯು.ವೆಂಕಟೇಶ್ ಶೇಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ತಪೋವನ ಲೈಫ್ ಸ್ಪೇಸ್ನ ಹಿರಿಯ ವೈದ್ಯಾಧಿಕಾರಿ ಡಾ. ವಾಣಿಶ್ರೀ ಐತಾಳ್ ಮತ್ತು ಅರ್ಚನಾ ರಾವ್ ಕಾರ್ಯಕ್ರಮ ನಿರೂಪಿಸಿದರು.